ತೀರ್ಥಹಳ್ಳಿ ವಿಶೇಷ; ಸಿಎಂ, ಸ್ಪೀಕರ್ ಎಲ್ಲಾ ಹುದ್ದೆ ಸಿಕ್ಕಿದೆ ಕ್ಷೇತ್ರದ ಶಾಸಕರಿಗೆ
ಶಿವಮೊಗ್ಗ, ಆಗಸ್ಟ್ 04; ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಶಿವಮೊಗ್ಗಕ್ಕೆ ಸಿಕ್ಕಿದ್ದ ಮುಖ್ಯಮಂತ್ರಿ ಪಟ್ಟ ಕೈತಪ್ಪಿತ್ತು. ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಮಾಡಿದ್ದು ಜಿಲ್ಲೆಗೆ ಎರಡು ಸಚಿವ ಸ್ಥಾನಗಳು ಸಿಕ್ಕಿವೆ.
ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ. ಎಸ್. ಈಶ್ವರಪ್ಪ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಸಚಿವರಾಗಿ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದರು. ಇಬ್ಬರೂ ಸಹ ಜಿಲ್ಲಾ ಬಿಜೆಪಿಯ ಹಿರಿಯ ನಾಯಕರಾಗಿದ್ದಾರೆ.
ಮೊದಲ ಬಾರಿ ಸಚಿವರಾದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಪರಿಚಯ
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ್ದು ವಿಭಿನ್ನ ದಾಖಲೆಯಾಗಿದೆ. ಸಿಎಂ ಹುದ್ದೆಯಿಂದ ಸ್ಪೀಕರ್ ತನಕ ಎಲ್ಲಾ ಜವಾಬ್ದಾರಿ ನಿಭಾಯಿಸಿದ್ದಾರೆ ಇಲ್ಲಿಯ ಶಾಸಕರು. 2013ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ತೀರ್ಥಹಳ್ಳಿ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿತ್ತು. ಕಿಮ್ಮನೆ ರತ್ನಾಕರ ಸಿದ್ದರಾಮಯ್ಯ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು.
ಬೊಮ್ಮಾಯಿ ಸಂಪುಟ ಸೇರಿದ ಕೆ. ಎಸ್. ಈಶ್ವರಪ್ಪ ಪರಿಚಯ
ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ತೀರ್ಥಹಳ್ಳಿ ಕ್ಷೇತ್ರದ್ದು ವಿಭಿನ್ನ ಹೆಸರು. ಈ ಕ್ಷೇತ್ರದಿಂದ ಆಯ್ಕೆಯಾದವರು ವಿಧಾನಸಭೆಯಲ್ಲಿ ತಮ್ಮ ಬೌದ್ಧಿಕತೆ, ಸಮಜಮುಖಿ ಯೋಚನೆಗಳು, ಜನಪರ ಕಾಳಜಿಗಳ ಚರ್ಚೆಗಳಿಂದ ಜನಜನಿತರಾಗಿದ್ದಾರೆ. ಜನಪ್ರತಿನಿಧಿಗಳು ಮಾತನಾಡಲು ನಿಂತರೆ ಉಳಿದ ಕ್ಷೇತ್ರದವರು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಾರೆ.
ಸಂಪುಟ ವಿಸ್ತರಣೆ; ಸಚಿವ ಸ್ಥಾನ ಕೈತಪ್ಪಿದ ಶಾಸಕರ ಸ್ಟೇಟಸ್ಗಳು
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ
ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಈಗ ಸಚಿವರಾಗಿದ್ದಾರೆ. ಒಟ್ಟು 9 ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಜ್ಞಾನೇಂದ್ರ 4 ಬಾರಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದವರು ವಿಧಾನಸಭೆಯಲ್ಲಿ ಸರ್ವ ಜವಾಬ್ದಾರಿಗಳನ್ನು ನಿಭಾಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಶಾಸಕರಾಗಿ ಮಾತ್ರವಲ್ಲ ಮುಖ್ಯಮಂತ್ರಿಯಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ವಿಧಾನಸಭೆಯ ಸ್ಪೀಕರ್ ಆಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಯಾರು ಯಾವ ಜವಾಬ್ದಾರಿ?
ತೀರ್ಥಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಡಿದಾಳು ಮಂಜಪ್ಪ 1956ರಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 73 ದಿನಗಳು ಕಡಿದಾಳು ಮಂಜಪ್ಪ ಆಡಳಿತ ನಡೆಸಿದ್ದರು.
1983ರಲ್ಲಿ ಆಯ್ಕೆಯಾಗಿದ್ದ ಡಿ. ಬಿ. ಚಂದ್ರೇಗೌಡರು ವಿಧಾನಸಭೆಯ ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1983ರಿಂದ 1985ರವರೆಗೆ ಸ್ಪೀಕರ್ ಆಗಿ ಸದವನ್ನು ಮುನ್ನಡೆಸಿದ್ದರು.
1989ರಲ್ಲಿ ತೀರ್ಥಹಳ್ಳಿಯಲ್ಲಿ ಪುನಃ ಗೆಲುವು ಕಂಡ ಡಿ. ಬಿ. ಚಂದ್ರೇಗೌಡ ವಿರೋಧ ಪಕ್ಷದ ನಾಯಕರಾಗಿ ವಿಧಾನಸಭೆಯಲ್ಲಿ ಜವಾಬ್ದಾರಿ ನಿಭಾಯಿಸಿದ್ದರು.
ತೀರ್ಥಹಳ್ಳಿಗೆ ಸಚಿವ ಸ್ಥಾನ
2013ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಿಮ್ಮನೆ ರತ್ನಾಕರ್ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. 2018ರ ಚುನಾವಣೆಯಲ್ಲಿ ಗೆದ್ದ ಬಿಜೆಪಿಯ ಆರಗ ಜ್ಞಾನೇಂದ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ ಸೇರಿದ್ದಾರೆ. ಜನಪರ, ರೈತ ಪರವಾದ ಕಾಳಜಿ ಹೊಂದಿರುವ ಆರಗ ಜ್ಞಾನೇಂದ್ರರಿಗೆ ಯಾವ ಖಾತೆ ಸಿಗಲಿದೆ ಎಂದು ಕಾದು ನೋಡಬೇಕಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಅತಿ ಹೆಚ್ಚು ಭಾರಿ ಶಾಸಕರಾದ ಹೆಗ್ಗಳಿಗೆ ಆರಗ ಜ್ಞಾನೇಂದ್ರ ಅವರದ್ದಾಗಿದೆ. ಈಗ ಸಚಿವ ಸ್ಥಾನ ಒಲಿದು ಬಂದಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಅವಕಾಶವಾಗಿದೆ.
ಈವರೆಗೂ ಹನ್ನೊಂದು ಶಾಸಕರು
ತೀರ್ಥಹಳ್ಳಿ ಕ್ಷೇತ್ರದಿಂದ ಈವರೆಗೂ 11 ಶಾಸಕರು ಆಯ್ಕೆಯಾಗಿದ್ದಾರೆ. ಮೈಸೂರು ರಾಜ್ಯವಿದ್ದಾಗ ಮೊದಲ ವಿಧಾಸಭೆಗೆ ತೀರ್ಥಹಳ್ಳಿಯಿಂದ ಕಡಿದಾಳು ಮಂಜಪ್ಪ ಆಯ್ಕೆಯಾಗಿದ್ದರು. ಕರ್ನಾಟಕ ರಾಜ್ಯ ರಚನೆಯಾದ ಬಳಿಕ ತೀರ್ಥಹಳ್ಳಿ ಕ್ಷೇತ್ರದಿಂದ 1957ರಲ್ಲಿ ಎ. ಆರ್. ಭದ್ರಿನಾರಾಯಣ, 1962ರಲ್ಲಿ ಶಾಂತವೇರಿ ಗೋಪಾಲ ಗೌಡ, 1967ರಲ್ಲಿ ಜಿ. ಜಿ. ಶಾಂತವೇರಿ, 1972ರಲ್ಲಿ ಕೋಣಂದೂರು ಲಿಂಗಪ್ಪ ಆಯ್ಕೆಯಾಗಿದ್ದರು.
1978ರಲ್ಲಿ ಕಡಿದಾಳು ದಿವಾಕರ, 1983 ಮತ್ತು 1989ರಲ್ಲಿ ಡಿ. ಬಿ. ಚಂದ್ರೇಗೌಡ, 1985ರಲ್ಲಿ ಪಟ್ಮಕ್ಕಿ ರತ್ನಾಕರ್ ಆಯ್ಕೆಯಾಗಿದ್ದರು. 1994, 1999, 2004, 2018ರಲ್ಲಿ ಆರಗ ಜ್ಞಾನೇಂದ್ರ, 2008 ಮತ್ತು 2013ರಲ್ಲಿ ಕಿಮ್ಮನೆ ರತ್ನಾಕರ್ ಶಾಸಕರಾಗಿದ್ದರು.
ಒಮ್ಮೆ ಗೆದ್ದವರು ಮತ್ತೆ ತೀರ್ಥಹಳ್ಳಿಯಲ್ಲಿ ಗೆಲ್ಲುವುದಿಲ್ಲ ಎಂಬ ಮಾತನ್ನು ಸುಳ್ಳು ಮಾಡಿ ಅತಿ ಹೆಚ್ಚು ಭಾರಿ ಶಾಸಕರಾದ ಹೆಗ್ಗಳಿಗೆ ಆರಗ ಜ್ಞಾನೇಂದ್ರ ಅವರದ್ದಾಗಿದೆ.