ಶರಾವತಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾದ ಮಳೆ: ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ
ಶಿವಮೊಗ್ಗ, ಸೆಪ್ಟೆಂಬರ್ 22: ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದರಿಂದ, ತಗ್ಗು ಪ್ರದೇಶದ ಜನತೆ ಜಾಗೃತದಿಂದ ಇರಲು ಶಿವಮೊಗ್ಗ ಜಿಲ್ಲಾಡಳಿತ ಸೂಚನೆ ನೀಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅಬ್ಬರದ ಪ್ರಮಾಣ ಹೆಚ್ಚಾಗಿರುವುದರಿಂದ, ಶರಾವತಿ ಜಲಾನಯನ ಪ್ರದೇಶದಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಯಾವುದೇ ಸಂದರ್ಭದಲ್ಲಿ ಹೆಚ್ಚುವರಿ ನೀರು ಬಿಡುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಶಿವಮೊಗ್ಗ: ಭಾರಿ ಮಳೆಯಿಂದ ಜೋಗದ ಮನೆಗಳ ಮುಂಭಾಗ ತಡೆಗೋಡೆ ಕುಸಿತ
ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿ ನೀರು ಬಿಡುವುದರಿಂದ ಬ್ಯಾಲೆನ್ಸಿಂಗ್ ಜಲಾಶಯವಾದ ಗೇರುಸೊಪ್ಪ ಆಣೆಕಟ್ಟೆಯಿಂದ ತಕ್ಷಣ ನೀರು ಹೊರ ಬಿಡಬೇಕಾಗುತ್ತದೆ. ಇದರಿಂದ ನದಿಪಾತ್ರದ ನಿವಾಸಿಗಳು ಎಚ್ಚರ ವಹಿಸುವಂತೆ ತಿಳಿಸಲಾಗಿದೆ.
ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿಯಾಗಿದ್ದು, ಮಂಗಳವಾರ ಬೆಳಗಿನ ವರದಿಯಂತೆ ಜಲಾಶಯದ ಮಟ್ಟ 1812.30 ಅಡಿಗೆ ತಲುಪಿದೆ. 44367 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.
ಇದರಿಂದಾಗಿ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಯಾವ ಸಂದರ್ಭದಲ್ಲಾದರೂ ನೀರು ಹೊರ ಬಿಡುವ ಸಾಧ್ಯತೆ ಇದೆ ಎಂದು ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 266.90 ಮಿಮಿ ಮಳೆಯಾಗಿದ್ದು, ಸರಾಸರಿ 38.13 ಮಿಮಿ ಮಳೆ ದಾಖಲಾಗಿದೆ. ಸೆಪ್ಟಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 164.16 ಮಿಮಿ ಇದ್ದು, ಇದುವರೆಗೆ ಸರಾಸರಿ 291.65 ಮಿಮಿ ಮಳೆ ದಾಖಲಾಗಿದೆ. ಶಿವಮೊಗ್ಗ 16.40 ಮಿಮಿ., ಭದ್ರಾವತಿ 3.60 ಮಿಮಿ., ತೀರ್ಥಹಳ್ಳಿ 97.40 ಮಿಮಿ., ಸಾಗರ 45.40, ಶಿಕಾರಿಪುರ 9.00 ಮಿಮಿ., ಸೊರಬ 27.10 ಮಿಮಿ. ಹಾಗೂ ಹೊಸನಗರ 68.00 ಮಿಮಿ. ಮಳೆಯಾಗಿದೆ.
ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಉತ್ತಮ ಮಳೆ ಹಾಗೂ ಅಲ್ಲಲ್ಲಿ ಅಧಿಕದಿಂದ ಅತ್ಯಧಿಕ ಭಾರಿ ಮಳೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.