ಚಿತ್ರಗಳು : ಸಕ್ರೆಬೈಲಿನಲ್ಲಿ ಆನೆಗಳ ತುಂಟಾಟ, ಆಟೋಟ
ಶಿವಮೊಗ್ಗ, ಅಕ್ಟೋಬರ್ 12 : ಆನೆಗಳ ದಿನಾಚರಣೆ ಅಂಗವಾಗಿ ಸಕ್ರೆಬೈಲಿನ ಆನೆ ಬಿಡಾರದಲ್ಲಿ ಗುರುವಾರ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬಿಡಾರದ ಆನೆಗಳು ಆಟೋಟ, ತುಂಟಾಟದ ಮೂಲಕ ಪ್ರವಾಸಿಗರನ್ನು ರಂಜಿಸಿದವು.
ಇನ್ನೂ ಒಂದು ವರ್ಷ ತುಂಬದ, ನಾಮಕರಣ ಇನ್ನೂ ಮಾಡಬೇಕಿರುವ ತುಂಟ ಪುಟ್ಟ ಆನೆ ಮರಿ ಸೊಂಡಿಲಿನಲ್ಲಿ ಹಿಡಿದಿದ್ದ ಬಲೂನ್ ಹಾರಿ ಬಿಡುವ ಮೂಲಕ ದಿನಾಚರಣೆಗೆ ಅಧಿಕೃತ ಚಾಲನೆ ಸಿಕ್ಕಿತು. ನಂತರ ಬಿಡಾರದ ಆನೆಗಳ ವಿವಿಧ ಚಟುವಟಿಕೆಗಳು ಜನರ ಚಪ್ಪಾಳೆ ಗಿಟ್ಟಿಸಿದವು.
ಸಕ್ರೆಬೈಲಿನಿಂದ ಉತ್ತರ ಪ್ರದೇಶಕ್ಕೆ ಹೊರಟು ನಿಂತ ಆನೆಗಳು!
ಓಟದ ಸ್ಪರ್ಧೆ, ಕ್ರಿಕೆಟ್, ಫುಟ್ಬಾಲ್, ಬಾಳೆ ಹಣ್ಣು ಮತ್ತು ಕಬ್ಬು ತಿನ್ನುವ ಸ್ಪರ್ಧೆ, ಮುಂಗಾಲುಗಳನ್ನು ಮೇಲೆತ್ತಿ ನಮಸ್ಕಾರ ಮಾಡುವುದು, ಸೊಂಡಿಲಿನಲ್ಲಿ ನೀರು ತುಂಬಿಕೊಂಡು ಜನರ ಮೇಲೆ ಚಿಮ್ಮಿಸುವುದು, ಪರಸ್ಪರ ಬಾಲ ಹಿಡಿದುಕೊಂಡು ಸಾಗುವ ಆಟ ಸೇರಿ ಹಲವು ಚಟುವಟಿಕೆಗಳಲ್ಲಿ ಆನೆಗಳು ಪಾಲ್ಗೊಂಡು ಜನರ ಗಮನ ಸೆಳೆದವು.
ಬಂಡೀಪುರ ಅರಣ್ಯದಲ್ಲಿ ಪ್ರವಾಸಿಗರಿಗೆ ಹೇಳೋರಿಲ್ಲ, ಕೇಳೋರಿಲ್ಲ!
ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ಆನೆ ದಿನಾಚರಣೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, 'ಆನೆಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳು. ಮನುಷ್ಯರ ಲಾಲಸೆಯ ಕಾರಣದಿಂದಾಗಿ ವನ್ಯಜೀವಿಗಳು ಮತ್ತು ಮಾನವರ ನಡುವಿನ ಸಂಘರ್ಷ ಹೆಚ್ಚುತ್ತಿವೆ' ಎಂದರು. ಆನೆಗಳ ತುಂಟಾಟದ ಚಿತ್ರಗಳು ಇಲ್ಲಿವೆ...
ಜನರಿಗೆ ಸೂರ್ಯನ ನಮಸ್ಕಾರ
7ರ ಹರೆಯದ ಆನೆ ಸೂರ್ಯ ತನ್ನ ಎರಡು ಕಾಲುಗಳನ್ನು ಮೇಲೆತ್ತಿ ನಮಸ್ಕಾರ ಮಾಡಿತು. ಹೇಮಾವತಿ ಮತ್ತು ಕಿರಣ ಮೊಣಕಾಲೂರಿ ಜನರಿಗೆ ಟಾಟಾ ಹೇಳಿದ್ದು ಜನರನ್ನು ಸೆಳೆಯಿತು. ಸೂರ್ಯ, ಭಾಸ್ಕರ ಮತ್ತು ಅರ್ಜುನ ಪರಸ್ಪರ ಕಿವಿ ಹಿಡಿದು ನಡೆದಾಡಿದವು.
ಬೌಂಡರಿ ಬಾರಿಸಿದ ಸೂರ್ಯ
ಫುಟ್ಬಾಲ್ ಆಟದಲ್ಲಿ ಆನೆಗಳು ಮನಸೋ ಇಚ್ಛೆ ಬಾಲನ್ನು ಮೈದಾನದ ತುಂಬಾ ಓಡಿಸಿದವು. ಕ್ರಿಕೆಟ್ನಲ್ಲಿ ಸೂರ್ಯ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ. ಹಲವು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ. ವೇಗದ ಓಟದ ಸ್ಪರ್ಧೆಯಲ್ಲಿ ಭಾಸ್ಕರ ಪ್ರಥಮ ಸ್ಥಾನ ಪಡೆದರೆ, ಅರ್ಜುನ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ.
ತುಂಟಾಟ ಮಾಡಿ ಹೊರಹೋದ ಅರ್ಜುನ
ಹಿಮ್ಮುಖ ಓಟದ ಸ್ಪರ್ಧೆಯಲ್ಲಿ ಕೆಲವು ತುಂಟ ಆನೆಗಳು ಹಿಮ್ಮುಖವಾಗಿ ಓಡುವ ಬದಲು ನೇರವಾಗಿ ಓಡಿ ಗೆಲುವು ಪಡೆದವು. ಬಾಳೆ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಅರ್ಜುನ ತನಗೆ ಮೀಸಲಾಗಿದ್ದ ಬಾಳೆ ಹಣ್ಣಿನ ಬದಲು ಭಾಸ್ಕರನಿಗೆ ಇಟ್ಟಿದ್ದ ಹಣ್ಣನ್ನು ತಿಂದನು. ಇದಕ್ಕಾಗಿ ಇಬ್ಬರನ್ನೂ ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು.
ಜನರ ಚಪ್ಪಾಳೆ ಗಿಟ್ಟಿಸಿದವು
ಮಾವುತರು ಆನೆಗಳಿಗೆ ಕಲಿಸಿದ ಭಾಷೆಯಲ್ಲಿ ನಿರ್ದೇಶನಗಳನ್ನು ನೀಡುತ್ತಿದ್ದಂತೆ ಎಲ್ಲಾ ಆನೆಗಳು ಅದನ್ನು ಚಾಚೂ ತಪ್ಪದೆ ಪಾಲಿಸಿದವು. ಮಾವುತ ಜಲೀಲ್ನ ನಿರ್ದೇಶನದ ಪ್ರಕಾರ ಕುಳಿತುಕೊಳ್ಳುವುದು, ಮಲಗುವುದು, ಹಿಂದಕ್ಕೆ ಹೆಜ್ಜೆ ಹಾಕುವುದು, ಮುಂದಕ್ಕೆ ಚಲಿಸುವುದು ಸೇರಿದಂತೆ ವಿವಿಧ ನಿರ್ದೇಶನ ಪಾಲಿಸಿ ಜನರ ಚಪ್ಪಾಳೆ ಗಿಟ್ಟಿಸಿದವು.