ಅಪ್ಪನಿಗಾಗಿ ಕ್ಷೇತ್ರ ಬಿಟ್ಟುಕೊಡುವೆ: ಬಿ.ವೈ.ರಾಘವೇಂದ್ರ
ಶಿವಮೊಗ್ಗ, ಜನವರಿ 19: ಯಡ್ಡಿಯೂರಪ್ಪ ಅವರು ಬಿಜೆಪಿ ಪಕ್ಷದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಆಗಿರುವುದರಿಂದ ಒಬ್ಬ ಜವಬ್ದಾರಿಯುತ ಶಾಸಕನಾಗಿ ಶಿಕಾರಿಪುರ ಕ್ಷೇತ್ರವನ್ನು ಬಿಟ್ಟುಕೊಡಬೇಕಿದೆ ಎಂದು ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ ತಿಳಿಸಿದರು.
ನಗರದ ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿ ಪಕ್ಷ ಈಗಾಗಲೇ ಯಡ್ಡಿಯೂರಪ್ಪ ಬಿಜೆಪಿಯ ಮುಂದಿನ ಮುಖ್ಯಮಂತ್ರಿಯಾಗಿ ಘೋಷಣೆಯಾಗಿದೆ. ಹಾಗಾಗಿ ಈ ನಿರ್ಣಯ ಅನಿವಾರ್ಯ. ಪಕ್ಷ ನನಗೆ ಎಲ್ಲಿ ಸ್ಪರ್ಧಿಸಲು ತಿಳಿಸುತ್ತದೆಯೋ ಅಲ್ಲಿ ಸ್ಪರ್ಧಿಸಲಿದ್ದೇನೆ ಇದೇ ಕ್ಷೇತ್ರ ಬೇಕೆಂಬ ಹಠವಿಲ್ಲವೆಂದರು.
ಕರ್ನಾಟಕ ರಾಜಕೀಯ ಕ್ಷೇತ್ರದ ಶಿಸ್ತಿನ ಸಿಪಾಯಿ ಯಡಿಯೂರಪ್ಪ
ನಾನು ಹಾವೇರಿ ಜಿಲ್ಲೆ ರಾಣೆಬೆನ್ನೂರು ಅಥವಾ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಚರ್ಚೆ ನಡೆಯುತ್ತಿದೆ ಆದರೆ ಅದು ಅಂತಿಮವಾಗಿಲ್ಲ, ಪಕ್ಷ ಯಾವ ಕ್ಷೇತ್ರ ಸೂಚಿಸುತ್ತದೆಯೋ ಅಲ್ಲಿ ಸ್ಪರ್ಧಿಸಲಿದ್ದೇನೆ ಎಂದರು.
ಈಶ್ವರಪ್ಪ ಅವರನ್ನು ಹಿಂದಿಕ್ಕುವುದಿಲ್ಲ
ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಸೂಚಿಸಿದರೆ ನೀವು ಸ್ಪರ್ಧಿಸಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಶಿವಮೊಗ್ಗದಿಂದ ಈಗ ಮೂರು ಭಾರಿ ಕೆ.ಎಸ್.ಈಶ್ವರಪ್ಪ ಸ್ಪರ್ಧಿಸಿ ಶಾಸಕ ಹಾಗೂ ಮಂತ್ರಿಯಾಗಿದ್ದಾರೆ. ಹಾಗಾಗಿ ಅವರನ್ನ ಹಿಂದಿಕ್ಕಿ ಸ್ಪರ್ಧಿಸುವ ಪ್ರಮೇಯವೇ ಇಲ್ಲ ಎಂದರು.
ಕೇಂದ್ರಕ್ಕೆ ಪ್ರಸ್ತಾವನೆ
ಶಿಕಾರಿಪುರ ತಾಲ್ಲೂಕಿಗೆ ರಾಜ್ಯ ಸರ್ಕಾರ ನೀರಾವರಿ ಯೋಜನೆಯಲ್ಲಿ ಮಲತಾಯಿ ದೋರಣೆ ಮಾಡುತ್ತಿದೆ. ಸತತ ಬರಗಾಲವಿರುವುದರಿಂದ ಅಂಜನಾಪುರ ಡ್ಯಾಂಗೆ ತುಂಗಾ ನದಿ ನೀರಿನಿಂದ ನೀರು ತುಂಬಿಸುವ, ತುಂಗಭದ್ರ ನದಿಯಿಂದ ಪುರದಕಟ್ಟೆಗೆ ನೀರು ತುಂಬಿಸುವ ಯೋಜನೆ, ಕಲ್ಲು ಒಡ್ಡು ಯೋಜನೆ ಸೇರಿದಂತೆ ಒಟ್ಟು ಐದು ಯೋಜನೆಗೆ ನಾನು ಮತ್ತು ನಮ್ಮ ತಂದೆಯವರ ನೇತೃತ್ವದಲ್ಲಿ ಕೇಂದ್ರಕ್ಕೆ ಸಾವಿರ ಕೋಟಿಯ ಪ್ರಸ್ತಾವನೆ ನೀಡಿದ್ದೇವೆ ಎಂದರು
ಕೇಂದ್ರದ ಪತ್ರಕ್ಕೆ ಉತ್ತರವಿಲ್ಲ
ಆದರೆ ನೀರಾವರಿಗೆ ಕೇಂದ್ರ ಸರ್ಕಾರದ ಸರ್ಕಾರ ಪ್ರಧಾನ ಕಾರ್ಯದರ್ಶಿ ಪತ್ರ ಬರೆದು ಜಂಟಿ ಸರ್ವೆ ನಡೆಸಿ ವರದಿ ನೀಡಿ ಎಂದಿದ್ದರು. ಇದುವರೆಗೂ ರಾಜ್ಯ ಸರ್ಕಾರ ಯಾವ ಕ್ರಮವನ್ನೂ ಜರುಗಿಸಿಲ್ಲ. ಮತ್ತೆ ಸಚಿವ ನಿತಿನ್ ಗಡ್ಕರಿ ಅವರು 2017 ಆ.29ರಂದು ರಾಜ್ಯ ಸರ್ಕಾರಕ್ಕೆ ಮತ್ತೆ ಪತ್ರಬರೆದು ಡಿಪಿಆರ್ ವರದಿ ನೀಡುವಂತೆ ಹೇಳಿ ಅಂದಾಜು ವೆಚ್ಚ ಎಷ್ಟಾಗಲಿದೆ ಹಾಗೂ ಕೇಂದ್ರವೇ ಪೂರ್ಣ ವೆಚ್ಚ ಭರಿಸಬೇಕೆ ಎಂದು ಕೇಳಿದರೂ ಈ ಬಗ್ಗೆಯೂ ರಾಜ್ಯ ಸರ್ಕಾರ ತುಟಿ ಬಿಚ್ಚುತ್ತಿಲ್ಲ.
ವಿರೋಧ ಪಕ್ಷ ಶಾಸಕರ ಕ್ಷೇತ್ರದ ಬಗ್ಗೆ ನಿರ್ಲಕ್ಷ
ರಾಜ್ಯ ಸರ್ಕಾರ ಖಜಾನೆ ಖಾಲಿ ಮಾಡಿಕೊಂಡು ಕೂತಿದೆ, ಜಾಹಿರಾರು ಸೇರಿದಂತೆ ಬೇರೆಡೆ ಖರ್ಚು ಮಾಡಲು ರಾಜ್ಯಸರ್ಕಾರದ ಬಳಿ ಹಣವಿರುತ್ತದೆ ಆದರೆ ವಿರೋಧ ಪಕ್ಷದ ನಾಯಕರ ಕ್ಷೇತ್ರದ ಅಭಿವೃದ್ದಿಗೆ ಮನಸ್ಸೂ ಇಲ್ಲ ಹಣವೂ ಇರುವುದಿಲ್ಲ ಎಂದು ಆರೋಪಿಸಿದರು.