ಅಕ್ರಮ ಮರಳುಗಾರಿಕೆ ತಡೆಯಲು ಸಿಬ್ಬಂದಿಗಳ ಕೊರತೆ: ಅಭಿನವ್ ಖರೆ
ಶಿವಮೊಗ್ಗ, ಫೆಬ್ರವರಿ 9: ಅಕ್ರಮ ಮರಳುಗಾರಿಕೆಯನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ದಾಳಿ ನಡೆಸುತ್ತಿದ್ದರೂ ಸಹ ಕೆಲವು ಸಿಬ್ಬಂದಿಗಳ ಕೊರತೆಯಿಂದಾಗಿ ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಿಲ್ಲವೆಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ತಿಳಿಸಿದರು.
ಅವರು ಪ್ರೆಸ್ ಟ್ರಸ್ಟ್ ನಲ್ಲಿ ಹಮ್ಮಿಕೊಳ್ಳಲಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅಕ್ರಮ ಮರಳುಗಾರಿಕೆಯನ್ನ ತಡೆಯಲು ಹಲವು ಇಲಾಖೆಗಳಿವೆ. ಆದರೆ ಅವರಲ್ಲೂ ಸಹ ಸಿಬ್ಬಂದಿಯ ಕೊರತೆಯ ಜೊತೆಗೆ ದಾಳಿ ನಡೆಸುವ ಅಧಿಕಾರವಿಲ್ಲದಾಗಿದೆ.
ಹಾಗಾಗಿ ದಾಳಿಯ ಜವಬ್ದಾರಿಯು ಸಹ ಪೋಲೀಸ್ ಇಲಾಖೆಯ ಹೆಗಲಮೇಲೆ ಬಿದ್ದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಅಕ್ರಮ ಮರಳುಗಾರಿಕೆ ತಡೆಯಬೇಕಾಗಿದೆ. ಸಾಕಷ್ಟು ಸಿಬ್ಬಂದಿಯ ಕೊರತೆ ನಮ್ಮಲ್ಲೂ ಇರುವುದರಿಂದ ಅಕ್ರಮ ಮರಳುಗಾರಿಕೆಯನ್ನ ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗುತ್ತಿಲ್ಲವೆಂದು ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ತಿಳಿಸಿದರು.
ಇಷ್ಟೆಲ್ಲಾ ತೊಂದರೆಯ ನಡುವೆಯೂ ಸಹ ಅಕ್ರಮ ಮರಳುಗಾರಿಕೆಯನ್ನ ತಡೆಯಲು ಇಲಾಖೆ ಪಣತೊಟ್ಟಿದೆ. ಆದರೆ ಅಕ್ರಮ ಮರಳುಗಾರಿಕೆಯಲ್ಲಿ ಪೊಲೀಸ್ ಇಲಾಖೆ ಮೇಲೆ ಗೂಬೆ ಕೂರಿಸಲಾಗುತ್ತಿದೆ. ನಾವು ಒಂದು ದಾಳಿ ನಡೆಸಲು ಮೂರು ರಾತ್ರಿ ಫೀಲ್ಡ್ ನಲ್ಲಿ ಕೆಲಸ ಮಾಡಬೇಕಾಗುತ್ತದೆ.
ಜೊತೆಗೆ ಜನರ ಸಹಾಯವೂ ಸಹ ನಮಗೆ ಬೇಕು. ಆದರೆ ಅಕ್ರಮ ಮರಳು ಸಾಗಾಣಿಕೆ ಮಾಡುವ ವ್ಯಕ್ತಿ ಪೊಲೀಸ್ ಇಲಾಖೆಗೂ ಹಣ ನೀಡಿ ಬಂದಿದ್ದೇವೆ ಎಂದು ಅಪಪ್ರಚಾರದಿಂದ ಜನರ ಮನದಲ್ಲೂ ಸಹ ಇಲಾಖೆ ಬಗ್ಗೆ ಅಪನಂಬಿಕೆ ಮೂಡಿದೆ.
ನಮ್ಮ ಮೇಲಾಧಿಕಾರಿಗಳಿಗೂ ದೂರು ನೀಡುವ ಜೊತೆಗೆ ಇತರೆ ಇಲಾಖೆಗೂ ಮಾಹಿತಿ ನೀಡಬಹುದು.ನಮ್ಮ ಮೇಲೆ ನಂಬಿಕೆ ಇಲ್ಲವೆಂದರೆ ನಮ್ಮ ಐಜಿ ಅಥವಾ ಡಿಐಜಿಗೂ ಜನರು ಪೋನ್ ಮಾಡಿ ಅಕ್ರಮ ಮರಳುಗಾರಿಕೆ ಬಗ್ಗೆ ಮಾಹಿತಿ ನೀಡಬಹುದು, ಅಥವಾ ಜಿಲಾಲಾಧಿಕಾರಿ, ಪಿಡಬ್ಲ್ಯೂಡಿ, ಗಣಿ ಮತ್ತು ವಿಜ್ಞಾನ, ಅರಣ್ಯ ಇಲಾಖೆಗೂ ಮಾಹಿತಿ ಒದಗಿಸಬಹುದು ಎಂದರು.
ಆಯನೂರು ಆಪಾದನೆಯಿಂದ 10 ಪಟ್ಟು ಹೆಚ್ಚು ಕೆಲಸ ಜಾಸ್ತಿ ಆಗಿದೆ.ಆಯನೂರು ಮಂಜುನಾಥ್ ಸಹ್ಯಾದ್ರಿ ಉತ್ಸವ ಹಾಗೂ ಪತ್ರಿಕಾಗೋಷ್ಠಿಯಲ್ಲಿಯೂ ಇಲಾಖೆ ಅಕ್ರಮ ಮರಳುಗಾರಿಕೆ ವಿರುದ್ದ ಮಾತನಾಡಿದ್ದರು ಈ ಕುರಿತು ತಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ರಕ್ಷಣಾಧಿಕಾರಿಗಳು, ನಮ್ಮ ಬಗ್ಗೆ ಅಪಾದನೆ ಮಾಡಿರುವುದಕ್ಕೆ ಅವರಿಗೆ ಧನ್ಯವಾದಗಳು ಸಲ್ಲಿಸುವೆ. ಜೊತೆಗೆ ಅವರ ಅಪಾಧನೆಯ ಮೇರೆಗೆ ನಾವು ಈ ಹಿಂದಿನದಕ್ಕಿಂತ 10 ಪಟ್ಟು ಹೆಚ್ಚು ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.
ಅಕ್ರಮ ಮರಳುಗಾರಿಕೆ ಪ್ರಕರಣ ತಡೆಯಲು ಪ್ರಕರಣ ಎಷ್ಟು ಗೊತ್ತಾ?: 2017 ರಲ್ಲಿ 315 ಅಕ್ರಮ ಮರಳುಗಾರಿಕೆ ಪ್ರಕರಣಗಳು ದಾಖಲಾಗಿಸಿದ್ದು, 7 ಕೋಟಿ ಹಣ ದಂಡ ವಸೂಲಿ ಮಾಡಲಾಗಿದೆ.
2018 ರಲ್ಲಿ ವಿಧಾನ ಸಭಾ ಚುನಾವಣೆ ಹಾಗೂ ಲೋಕಸಭಾ ಉಪ ಚುನಾವಣೆಯನ್ನ ಯಶಸ್ವಿಯಾಗಿ ನಡೆಸುವ ಸಂಬಂಧ ಅಕ್ರಮ ಮರಳುಗಾರಿಕೆ ಪ್ರಕರಣ ಕಡಿಮೆಯಾಗಿದೆ.2018 ರಲ್ಲಿ 180 ಪ್ರಕರಣ ಅಕ್ರಮ ಮರಳುಗಾರಿಕೆ ಪ್ರಕರಣ ದಾಖಲಾಗಿಸಿ 3 ಕೋಟಿ ಹಣ ದಂಡ ವಸೂಲಿ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದರು.