ಸಿಎಂ ಮೇಲೆ ನಂಬಿಕೆ ಇಲ್ಲದಿದ್ದರೆ ಸಚಿವ ಸ್ಥಾನ ಬಿಡಿ; ಈಶ್ವರಪ್ಪ
ಶಿವಮೊಗ್ಗ, ಮೇ 28; "ಮುಖ್ಯಮಂತ್ರಿ ಮೇಲೂ ನಂಬಿಕೆ ಇಲ್ಲ. ಹೈಕಮಾಂಡ್ ಮೇಲೂ ನಂಬಿಕೆ ಇಲ್ಲ ಅನ್ನುವುದಾದರೆ ಸಿ. ಪಿ. ಯೋಗೇಶ್ವರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ" ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಶುಕ್ರವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, "ಯೋಗೇಶ್ವರ್ ಸ್ವತಃ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆ ಬಳಿಕ ಮತ್ತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ" ಎಂದರು.
ದೆಹಲಿ ಭೇಟಿ ಬಗ್ಗೆ ಮನಬಿಚ್ಚಿ ಮಾತನಾಡಿದ ಯೋಗೇಶ್ವರ್!
"ರಾಜ್ಯ ಬಿಜೆಪಿಯ ಎಲ್ಲಾ ಶಾಸಕರು ಕಲ್ಲು ಬಂಡೆಗಳಂತೆ ಒಗ್ಗಟ್ಟಾಗಿ ಇದ್ದೇವೆ. ಕೇಂದ್ರ ನಾಯಕರು ಸಿಎಂ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ. ಅವರ ತೀರ್ಮಾನಕ್ಕೆ ನಾವು ಬದ್ಧ" ಎಂದು ತಿಳಿಸಿದರು.
ಯಡಿಯೂರಪ್ಪ ಸೂಚಿಸಿದ ವ್ಯಕ್ತಿಯೇ ರಾಜ್ಯದ ಮುಂದಿನ ಸಿಎಂ?
ಸಿಎಂ ಬದಲಾವಣೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ, "ಕಾಂಗ್ರೆಸ್ನವರಿಗೆ ಜನರು ಕುತ್ತಿಗೆ ಹಿಡಿದು ಹೊರಗೆ ತಳ್ಳಿದ್ದಾರೆ. ಆದರೂ ಅವರಿಗೆ ಬುದ್ದಿ ಬಂದಿಲ್ಲ. ಮತ್ತೆ ಯಾವಾಗ ಸಿಎಂ ಕುರ್ಚಿ ಮೇಲೆ ಕೂರುತ್ತೇವೆ ಎಂದು ಬಕಪಕ್ಷಿಗಳಂತೆ ಕಾದು ಕೂತಿದ್ದಾರೆ" ಎಂದು ಟೀಕಿಸಿದರು.
ಯಡಿಯೂರಪ್ಪ ಸಿಎಂ ಪಟ್ಟ ಬಿಟ್ಟರೆ ಈ ಸಚಿವರೂ ಬದಲಾಗುತ್ತಾರೆ
"ಕಾಂಗ್ರೆಸ್ನಿಂದ 17 ಶಾಸಕರು ಪಕ್ಷಕ್ಕೆ ಜಾಡಿಸಿ ಒದ್ದು ಹೊರಗೆ ಬಂದರು. ಅದಕ್ಕೆ ಸರ್ಕಾರ ಹೋಗಿದೆ. ನಮ್ಮಲ್ಲಿ ಒಬ್ಬರು ಇಬ್ಬರು ಮಾತನಾಡುತ್ತಿರುವುದು ನಿಜ. ಸಮಸ್ಯೆ ತಿಳಿಸುವುದಕ್ಕೆ ಅವರಿಗೆ ಅಧಿಕಾರಿವಿದೆ" ಎಂದು ಈಶ್ವರಪ್ಪ ಹೇಳಿದರು.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಎರಡು ದಿನಗಳಿಂದ ಚರ್ಚೆ ನಡೆಯುತ್ತಿದೆ. ಹಲವಾರು ಶಾಸಕರು, ಸಚಿವರು ಈ ಕುರಿತು ಮಾತನಾಡುತ್ತಿದ್ದಾರೆ. ಪಕ್ಷ ನಾಯಕತ್ವ ಬದಲಾವಣೆ ಇಲ್ಲ ಎಂದು ಗುರುವಾರ ಸ್ಪಷ್ಟಪಡಿಸಿದೆ.