ಹಾಲಪ್ಪಗೆ ಸಾಗರದ ಟಿಕೆಟ್ : ಬೇಳೂರು ಗೋಪಾಲಕೃಷ್ಣ ಹೇಳಿದ್ದೇನು?
ಶಿವಮೊಗ್ಗ, ಡಿಸೆಂಬರ್. 08 : 'ಸಾಗರ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವೆ. ಟಿಕೆಟ್ ಕೈ ತಪ್ಪಿದರೆ ಮುಂದಿನ ನಡೆ ಬಗ್ಗೆ ಯೋಚಿಸುತ್ತೇನೆ' ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿವಮೊಗ್ಗ ರಾಜಕಾರಣ : ಆರ್.ಎಂ.ಮಂಜುನಾಥ ಗೌಡ ಜೆಡಿಎಸ್ಗೆ?
ಶಿವಮೊಗ್ಗದಲ್ಲಿ ಶುಕ್ರವಾರ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಅವರು, ಪರಿವರ್ತನಾ ಯಾತ್ರೆ ಜವಾಬ್ದಾರಿಯನ್ನು ಹರತಾಳು ಹಾಲಪ್ಪ ಅವರಿಗೆ ನೀಡಲಾಗಿದೆ. ಅವರು ಮುಂದಿನ ಚುನಾವಣೆಗೆ ಸಾಗರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳನ್ನು ತಳ್ಳಿ ಹಾಕಿದರು.
'ಹಲವು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇದು ಕಾರ್ಯಕರ್ತರ ಸಮಾವೇಶವಾಗಿದೆ. ರಾಜ್ಯಾದ್ಯಕ್ಷ ಬಿ.ಎಸ್.ಯಡ್ಡಿಯೂರಪ್ಪ ಅವರು ನನಗೆ ಖುದ್ದಾಗಿ ಸಮಾವೇಶದಲ್ಲಿ ಭಾಗವಹಿಸಲು ತಿಳಿಸಿದ್ದಾರೆ' ಎಂದು ಗೋಪಾಲಕೃಷ್ಣ ಹೇಳಿದರು.
'ಸಾಗರದಲ್ಲಿ ಎರಡು ಬಾರಿ ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸಿ ಶಾಸಕನಾಗಿದ್ದೇನೆ. ಈ ಬಾರಿಯೂ ಸಾಕಷ್ಟು ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ಇನ್ನೇನು ಬೇಕು?. ಸಾಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ' ಎಂದು ಸ್ಪಷ್ಟಪಡಿಸಿದರು.
ಬೇಳೂರು ಗೋಪಾಲಕೃಷ್ಣ ಕೈ ತಪ್ಪಲಿದೆ ಸಾಗರದ ಟಿಕೆಟ್?
'ನನಗೆ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದ್ದಲ್ಲಿ ಮುಂದಿನ ನಡೆ ಬಗ್ಗೆ ತೀರ್ಮಾನವನ್ನು ಮಾಡುತ್ತೇನೆ' ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.