ಸರ್ಕಾರಕ್ಕೆ ಸೆಡ್ಡು; ಒಂದೇ ದಿನದಲ್ಲಿ ಸೇತುವೆ ಕಟ್ಟಿದ ಗ್ರಾಮಸ್ಥರು
ಶಿವಮೊಗ್ಗ, ಆಗಸ್ಟ್ 18 : ಇನ್ನು ಒಂದು ದಿನ ಕಾಯುತ್ತೇವೆ. ಸರ್ಕಾರ ನಮಗೆ ನದಿ ದಾಟಲು ಬದಲಿ ವ್ಯವಸ್ಥೆ ಮಾಡದೇ ಇದ್ದರೆ ನಾವೇ ಸೇತುವೆ ಕಟ್ಟುತ್ತೇವೆ ಎಂದು ಜನರು ಶಪಥ ಮಾಡಿದ್ದರು. ಹೇಳಿದಂತೆಯೇ ಸರ್ಕಾರ ಜನರನ್ನು ನಿರ್ಲಕ್ಷಿಸಿದೆ. ಸರ್ಕಾರಕ್ಕೆ ಸೆಡ್ಡು ಹೊಡೆದು ಜನರು ಸೇತುವೆ ಕಟ್ಟಿದ್ದಾರೆ.
ಹೌದು ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಕಥೆ. ಆಶ್ಲೇಷ ಮಳೆಯ ಆರ್ಭಟಕ್ಕೆ 14 ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಲ್ಕಟ್ಟು ಸೇತುವೆ ಕುಸಿದು ಸಂಪರ್ಕ ಕಳೆದುಕೊಂಡಿತ್ತು.
ಶಿವಮೊಗ್ಗಕ್ಕೆ ಭರ್ಜರಿ ಉಡುಗೊರೆ ಕೊಟ್ಟ ಸಿಎಂ ಯಡಿಯೂರಪ್ಪ
ದೊಡ್ಡ ಜನ ಪ್ರತಿನಿಧಿಗಳು ಸ್ಥಳಕ್ಕೆ ಬಂದು ಹೋಗಿ ವಾರ ಕಳೆದರೂ ಯಾವ ಇಂಜಿನಿಯರ್ ಕೂಡಾ ಬರಲಿಲ್ಲ. ಗ್ರಾಮದವರು ಕರೆ ಮಾಡಿದರೆ ಕಥೆ ಹೇಳಿದರು. ಕೊನೆಗೆ ಗ್ರಾಮಸ್ಥರು ಸರ್ಕಾರಕ್ಕೆ ಸೆಡ್ಡು ಹೊಡೆದು ತಾವೇ ಸೇತುವೆ ನಿರ್ಮಾಣ ಕಾರ್ಯವನ್ನು ಕೈಗೊಂಡರು.
ಬ್ರೇಕಿಂಗ್ ನ್ಯೂಸ್ : ಬೆಂಗಳೂರಿಗೆ ಶರಾವತಿ ನೀರು ತರುವ ಪ್ರಸ್ತಾಪವಿಲ್ಲ
ತುಮರಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಒಂದು ಕುಶಲ ಕೂಲಿಗಳ ತಂಡ ರಚನೆ ಮಾಡಿತು. ತಂಡ ಸಲಕರಣೆ ಸಿದ್ದ ಮಾಡಿಕೊಂಡಿತು. ಮರುದಿನ ಜನರೆಲ್ಲಾ ಒಂದಾದರು, ಮರದ ದಿಮ್ಮಿಗಳನ್ನು ಹಾಕಿ ಅದಕ್ಕೆ ಬಿಗಿಯಾದ ಸಂಕ ನಿರ್ಮಾಣ ಮಾಡಿದರು.
ಪ್ರವಾಹ ಪರಿಹಾರ: ಕಾಳಜಿ ಕೇಂದ್ರದಲ್ಲಿ ಕಣ್ಮನ ಸೆಳೆದ ಮಹಿಳಾ ಅಧಿಕಾರಿ
ಬೆಳಗ್ಗೆಯಿಂದ ಸಂಜೆ ತನಕ ಕೆಲಸ ಮಾಡಿದ ಜನರು 75 ಅಡಿ ಉದ್ದದ ಕಾಲು ಸಂಕ ನಿರ್ಮಾಣ ಮಾಡಿದರು. ಸಂಕ ನಿರ್ಮಾಣಗೊಂಡ ಬಳಿಕ ಗ್ರಾಮಸ್ಥರು, ಮಕ್ಕಳು, ಮಹಿಳೆಯರು ಸಂಭ್ರಮಪಟ್ಟರು.
ಸುಮಾರು 15 ಸಾವಿರ ರೂ. ಅಂದಾಜು ಖರ್ಚಿನ ಕೆಲಸ ಪಂಚಾಯಿತಿ ನಿಯಮದ ಪ್ರಕಾರ ನಡೆಯುವುದಾದರೆ ತಿಂಗಳುಗಳುಬೇಕಾಗಿತ್ತು. ಆದರೆ, ತುರ್ತಾಗಿ ಜನರಿಗೆ ಅಗತ್ಯವಿದ್ದ ಕಾರಣ ಜನರ ಸಹಕಾರಿಂದ ಒಂದು ದಿನದಲ್ಲಿ ಮಾಡಿ ಮುಗಿಸಲಾಯಿತು.
ಈ ಕಾರ್ಯಕ್ಕೆ ಹಲವು ಜನರು ಸಹಕಾರ ನೀಡಿದರು. ಕೆ.ಸಿ.ರಾಮಚಂದ್ರ ಅವರು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದರು, ಪ್ರಕಾಶ್ ಮತ್ತು ಪ್ರಸನ್ನ ತಂಡ ನೇತೃತ್ವದಲ್ಲಿ ಕೆಲಸ ಸಾಗಿತು, ಗ್ರಾಮ ಪಂಚಾಯಿತಿ ಸದಸ್ಯ ಲೋಕಣ್ಣ ತಮ್ಮ ಅನುಭವ ಮಾರ್ಗ ದರ್ಶನ ನೀಡಿದರು.