ಸಮಾಜವಾದಿ ಸಿದ್ದು ಕೈಗೆ 40 ಲಕ್ಷದ ವಾಚ್ ಬಂದಿದ್ದು ಹೇಗೆ?: ಅಮಿತ್ ಶಾ
ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ), ಮಾರ್ಚ್ 26: ಸಮಾಜವಾದಿ ಹಿನ್ನೆಲೆಯಲ್ಲಿ ಬಂದವನು ನಾನು ಎಂದು ಹೇಳಿಕೊಂಡು ಓಡಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ 40 ಲಕ್ಷ ರುಪಾಯಿ ಮೌಲ್ಯದ ವಾಚ್ ಹೇಗೆ ಬಂತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಲ್ಲಿ ಸೋಮವಾರ ಪ್ರಶ್ನಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ತೀರ್ಥಹಳ್ಳಿಯ ಸಾರ್ವಜನಿಕ ಮೈದಾನದಲ್ಲಿ ನಡೆದ ಬಿಜೆಪಿ ಪಕ್ಷದ ಅಡಿಕೆ ಬೆಳೆಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯರಿಗೆ 40 ಲಕ್ಷದ ವಾಚ್ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಭ್ರಷ್ಠಾಚಾರ ನೀವು ನಡೆಸುತ್ತಿದ್ದೀರಾ ಎಂದರೆ ಹೇಗೆ ಎಂದು ಮುಖ್ಯಮಂತ್ರಿ ನಮ್ಮನ್ನೇ ಪ್ರಶ್ನಿಸುತ್ತೀರಿ . 40 ಲಕ್ಷದ ವಾಚ್ ಭ್ರಷ್ಟಾಚಾರದಿಂದ ಅಲ್ಲದೆ ಇನ್ಯಾವ ಮೂಲದಿಂದ ಬರಲು ಸಾಧ್ಯ ಎಂದು ಪ್ರಶ್ನಿಸಿದರು.
ಹಿಂದಿನ ಯುಪಿಎ ಸರಕಾರವು ರಾಜ್ಯಕ್ಕೆ 88 ಸಾವಿರ ಕೋಟಿ ಅನುದಾನ ಕೊಟ್ಟಿತ್ತು. ನಮ್ಮ ಸರಕಾರವು ರಾಜ್ಯಕ್ಕೆ 3.30 ಲಕ್ಷ ಕೋಟಿ ರುಪಾಯಿ ಅನುದಾನ ನೀಡಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನು ಕೆಟ್ಟ ಟ್ರಾನ್ಸ್ ಫಾರ್ಮರ್ ಎಂದು ಬಣ್ಣಿಸಿದ ಅಮಿತ್ ಶಾ, ಮನೆಗೆ ಒಳ್ಳೆ ಟ್ರಾನ್ಸ್ ಫಾರ್ಮರ್ ಇದ್ದರೆ ಗುಣಮಟ್ಟದ ವಿದ್ಯುತ್ ಪಡೆಯಲು ಸಾಧ್ಯ. ಪ್ರಧಾನಿ ಮೋದಿ ಉತ್ತಮ ಯೋಜನೆ ಹಾಗೂ ಅನುದಾನ ನೀಡಿದರೆ ನಿಮ್ಮನ್ನು ತಲುಪಲು ರಾಜ್ಯದಲ್ಲಿ ಉತ್ತಮ ಟ್ರಾನ್ಸ್ ಫಾರ್ಮರ್ ಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಕೆಟ್ಟ ಟ್ರಾನ್ಸ್ ಫಾರ್ಮರ್ ಆದುದರಿಂದ ಕೇಂದ್ರದ ಯೋಜನೆ ಇಲ್ಲಿನವರಿಗೆ ಸಿಗುತ್ತಿಲ್ಲ. ಇಂತಹ ಸರಕಾರವನ್ನ ಕಿತ್ತು ಹಾಕಿ, ಯಡಿಯೂರಪ್ಪ ನೇತೃತ್ವದ ಸರಕಾರ ತನ್ನಿ ಎಂದು ವಿನಂತಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್, ಸಂಸದ ಪ್ರಹ್ಲಾದ ಜೋಷಿ, ಬಿಜೆಪಿ ರಾಷ್ಟೀಯ ಕಾರ್ಯದರ್ಶಿ ಮುರಳೀಧರ್ ರಾವ್, ಶಾಸಕ ಜೀವರಾಜ್, ಬಿ.ವೈ.ರಾಘವೇಂದ್ರ, ಬಿಜೆಪಿ ಮುಖಂಡರಾದ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ, ಕುಮಾರ್ ಬಂಗಾರಪ್ಪ ಮೊದಲಾದವರು ಉಪಸ್ಥಿತರಿದ್ದರು.