ಕೊರೊನಾ ಸೋಂಕಿತನಿಗೆ ಧೈರ್ಯ ಹೇಳಿ ಆಸ್ಪತ್ರೆಗೆ ಕರೆತಂದ ಪ.ಪಂ ಸದಸ್ಯ
ಶಿವಮೊಗ್ಗ, ಜೂನ್ 7: ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಕೊರೊನಾ ಸೋಂಕಿತನನ್ನು ಹೊಸನಗರ ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಕರೆತಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೊಸನಗರದಿಂದ ಶಿವಮೊಗ್ಗದವರೆಗೆ ಕೊರೊನಾ ಸೋಂಕಿತನ ಜೊತೆಗಿದ್ದು, ಧೈರ್ಯ ತುಂಬಿದ್ದಾರೆ. ಇವರ ಕೆಲಸಕ್ಕೆ ಹೊಸನಗರ ಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೊಸನಗರ ಪಟ್ಟಣ ಪಂಚಾಯಿತಿ ಸದಸ್ಯ ಸುರೇಂದ್ರ ಕೋಟ್ಯಾನ್ ಅವರು ಸೋಂಕಿತನೊಂದಿಗೆ ಆಂಬ್ಯುಲೆನ್ಸ್ನಲ್ಲಿ ಶಿವಮೊಗ್ಗದವರೆಗೆ ಬಂದಿದ್ದಾರೆ.
ಹೊಸನಗರದ ಟ್ರಯಾಜ್ ಸೆಂಟರ್ನಲ್ಲಿದ್ದ ಸೋಂಕಿತರೊಬ್ಬರಿಗೆ ಉಸಿರಾಟದ ಸಮಸ್ಯೆ ಉಂಟಾಯಿತು. ಕೂಡಲೇ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಆದರೆ, ಸೋಂಕಿತ ವ್ಯಕ್ತಿ ಆಕ್ಸಿಜನ್ ಮಾಸ್ಕನ್ನು ಪದೇ ಪದೇ ಕಿತ್ತೊಗೆಯುತ್ತಿದ್ದರು. ಹೀಗಾಗದಂತೆ ನೋಡಿಕೊಳ್ಳಲು ಅವರೊಂದಿಗೆ ಯಾರಾದರೊಬ್ಬರು ಇರಬೇಕಿತ್ತು.
ಜವಾಬ್ದಾರಿ ಮೆರೆದಿದ್ದಕ್ಕೆ ಮೆಚ್ಚುಗೆ
ಸೋಂಕಿತ ವ್ಯಕ್ತಿ ಜೊತೆಗೆ ಶಿವಮೊಗ್ಗದವರೆಗೆ ತೆರಳಲು ಪಟ್ಟಣ ಪಂಚಾಯಿತಿ ಸದಸ್ಯ ಸುರೇಂದ್ರ ಕೋಟ್ಯಾನ್ ಮುಂದಾದರು. ಪಿಪಿಇ ಕಿಟ್ ಧರಿಸಿ, ಆಂಬ್ಯುಲೆನ್ಸ್ ಏರಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೋಂಕಿತನನ್ನು ದಾಖಲು ಮಾಡಿ, ಹೊಸನಗರಕ್ಕೆ ಹಿಂತಿರುಗಿದ್ದಾರೆ.
ಸುರೇಂದ್ರ ಕೋಟ್ಯಾನ್ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕೊರೊನಾ ವೈರಸ್ ಅಂದರೆ ಭೀತಿ ಆವರಿಸಿದ್ದು, ಸೋಂಕಿತರ ಆರೈಕೆಗೆ ಕುಟುಂಬದವರೆ ಬಾರದ ಉದಾಹರಣೆಗಳು ಇದ್ದಾವೆ. ಈ ಮಧ್ಯೆ ಜನಪ್ರತಿನಿಧಿಯೊಬ್ಬರು ಸೋಂಕಿತನ ಜೀವ ಉಳಿಸಲು ನೆರವಾಗಿದ್ದು ಮಾದರಿ ಅನಿಸಿದೆ.