3 ರೂ 46 ಪೈಸೆ ಕಟ್ಟಲು 15 ಕಿ.ಮೀ ನಡೆದ ಶಿವಮೊಗ್ಗದ ರೈತ!
ಶಿವಮೊಗ್ಗ, ಜೂನ್ 30: ಬ್ಯಾಂಕ್ ನಿಂದ ಲಕ್ಷಾಂತರ, ಕೋಟ್ಯಂತರ ರೂಪಾಯಿ ಸಾಲ ಮಾಡಿ ಹಿಂತಿರುಗಿಸದೇ, ಹಿಂದಿರುಗಿಸುವ ಗೊಡವೆಗೂ ಹೋಗದೇ ಇರುವ ಎಷ್ಟೋ ಮಂದಿ ಇದ್ದಾರೆ. ಅಂಥವರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲೂ ಹಿಂದೆ ಮುಂದೆ ನೋಡುತ್ತಾರೆ. ಆದರೆ ಶಿವಮೊಗ್ಗದಲ್ಲಿ ಒಬ್ಬ ರೈತನನ್ನು ಬ್ಯಾಂಕೊಂದು ಅವಮಾನವೀಯವಾಗಿ ನಡೆಸಿಕೊಂಡಿದೆ.
Recommended Video
ಬ್ಯಾಂಕ್ ಗೆ ರೈತನೊಬ್ಬ ಕೇವಲ 3 ರೂಪಾಯಿ 46 ಪೈಸೆ ಕಟ್ಟಬೇಕಿದ್ದು, ಸುಮಾರು 15 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲೇ ನಡೆದುಕೊಂಡು ಹೋಗಿ ಆ ರೈತ ಸಾಲ ಮರುಪಾವತಿ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮಡೆ ಗ್ರಾಮದಲ್ಲಿ ನಡೆದಿದೆ. ಇದರ ಇನ್ನಷ್ಟು ವಿವರ ಮುಂದಿದೆ...
35 ಸಾವಿರ ಬೆಳೆ ಸಾಲ ಪಡೆದಿದ್ದ ಅಮಡೆ ಗ್ರಾಮದ ರೈತ
ಅಮಡೆ ಗ್ರಾಮದ ರೈತ ಲಕ್ಷ್ಮೀನಾರಾಯಣ ಅವರು ನಿಟ್ಟೂರಿನ ಬ್ಯಾಂಕ್ ವೊಂದರಲ್ಲಿ 35 ಸಾವಿರ ರೂಪಾಯಿ ಬೆಳೆ ಸಾಲ ಪಡೆದಿದ್ದರು. ಇದರಲ್ಲಿ 32 ಸಾವಿರ ರೂಪಾಯಿ ಸಾಲ ಮನ್ನಾ ಯೋಜನೆಯಡಿ ಮನ್ನಾ ಆಗಿತ್ತು. ಉಳಿದ 3 ಸಾವಿರ ರೂಪಾಯಿಯನ್ನು ಬಡ್ಡಿ ಸಮೇತ ವಾಪಸ್ ಮಾಡಿದ್ದರು.
ಹಳ್ಳಿ ಕಡೆ ಮುಖ ಮಾಡಿದ ಯುವಜನತೆ: ಹಾಲು ಉತ್ಪಾದನೆ ಹೆಚ್ಚಳ
3 ರೂ 46 ಪೈಸೆ ಬಾಕಿ ಕಟ್ಟಲು ಕರೆಸಿದರು
ಆದರೆ ಕಳೆದ ಗುರುವಾರ ಬ್ಯಾಂಕ್ ನಿಂದ ಲಕ್ಷ್ಮೀ ನಾರಾಯಣ್ ಅವರಿಗೆ ಫೋನ್ ಮಾಡಿದ ಸಿಬ್ಬಂದಿ, ತಕ್ಷಣ ನೀವು ಬ್ಯಾಂಕ್ ಗೆ ಬಂದು ಹೋಗಿ ಎಂದು ತಿಳಿಸಿದ್ದಾರೆ. ವಿಷಯ ತಿಳಿಯಲು ಅವರು ಸುಮಾರು 15 ಕಿ.ಮೀ. ದೂರ ನಡೆದು ಹೋಗಿ ಬ್ಯಾಂಕ್ ನಲ್ಲಿ ವಿಚಾರಿಸಿದ್ದಾರೆ. ಆಗ, ನಿಮ್ಮ ಸಾಲದ ಹಣದಲ್ಲಿ 3 ರೂ 46 ಪೈಸೆ ಬಾಕಿ ಇದೆ ಅದನ್ನು ಕಟ್ಟಿ ಎಂದು ಹೇಳಿದ್ದಾರೆ.
"ಹೀಗೆ ಮಾಡಿದ್ದು ಎಷ್ಟು ಸರಿ?"
ಸಿಬ್ಬಂದಿ ಹೀಗೆ ಹೇಳುತ್ತಿದ್ದಂತೆ ಲಕ್ಷ್ಮಿ ನಾರಾಯಣ್ ಅವರಿಗೆ ಆಶ್ಚರ್ಯವಾಗಿದೆ. ಇದನ್ನು ಫೋನ್ ನಲ್ಲಿಯೇ ತಿಳಿಸಿದ್ದರೆ, ನಿಟ್ಟೂರಿನಲ್ಲಿನ ತನ್ನ ಸ್ನೇಹಿತರಿಂದ ಹಣ ಕಟ್ಟಿಸುತ್ತಿದ್ದೆ. ಹಿಂದೆ ಸಾಲದ ಬಡ್ಡಿ ಕಟ್ಟಲು ಬಂದಾಗ ಕೇಳಿದ್ದರೆ ಅಂದೇ ಕಟ್ಟುತ್ತಿದ್ದೆ. ಆದರೆ ಬ್ಯಾಂಕ್ ನವರು ಅರ್ಜೆಂಟ್ ಆಗಿ ಬಂದು ಹೋಗಿ ಎಂದು ಕರೆದು ಈಗ ಸಾಲ ಕಟ್ಟಿ ಎಂದಿದ್ದು ಎಷ್ಟು ಸರಿ ಎಂದಿದ್ದಾರೆ.
"ಚಿಲ್ಲರೆ ಸಾಲಕ್ಕೆ ಹೀಗೆ ಮಾಡಿದ್ದು ಸರಿಯೇ?"
ಲಾಕ್ ಡೌನ್ ನಿಂದ ಜನ ಆರ್ಥಿಕ ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ ಜನರಿಗೆ ಮೂರು ತಿಂಗಳು ಸಾಲ ಕಟ್ಟದಂತೆ ತಿಳಿಸಿದೆ. ಇಷ್ಟಾದರೂ ಬ್ಯಾಂಕ್ ನವರು ಹೀಗೆ ಮಾಡಿದ್ದು ಎಷ್ಟು ಸರಿ? ಅದೂ ಕೇವಲ ಚಿಲ್ಲರೆ ಸಾಲವನ್ನು ವಾಪಸ್ ಪಡೆಯಲು ಹೀಗೆ ಮಾಡಿದ್ದು ಸರಿಯೇ?