ಬಂದ್ ತಡೆಯಲು ಬಂದ ಪೊಲೀಸರಿಗೆ ರೇಣುಕಾಚಾರ್ಯ ಆವಾಜ್
ಶಿವಮೊಗ್ಗ, ಮೇ 29: ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಪೊಲೀಸರಿಗೆ ಆವಾಜ್ ಹಾಕಿದ ದೃಶ್ಯವೊಂದು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಮಿ ಸಾಲಮನ್ನಾ ಘೋಷಣೆ ಮಾಡದಿದ್ದರೆ ಕರ್ನಾಟಕ ಬಂದ್ ಮಾಡುವುದಾಗಿ ಹೇಳಿದ್ದ ಬಿಜೆಪಿ, ನಿನ್ನೆ ರಾಜ್ಯ ಬಂದ್ ಗೆ ಕರೆನೀಡಿತ್ತು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ನೇತ್ರತ್ವದಲ್ಲಿ ಬಂದ್ ನಡೆಯುತ್ತಿತ್ತು.
ಬಂದ್ಗೆ ನೀರಸ ಪ್ರತಿಕ್ರಿಯೆ: ಮೈಸೂರಲ್ಲಿ ಸಂಸದ ಪ್ರತಾಪ್ ಸಿಂಹ ವಶಕ್ಕೆ
ಈ ಸಂದರ್ಭದಲ್ಲಿ ಬಂದ್ ಅನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ ಸರ್ಕಲ್ ಇನ್ಸ್ ಪೆಕ್ಟರ್ ಮೇಲೆ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಅವರ ಬೆಂಬಲಿಗರು ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ಅಲ್ಲದೆ ಅವರು ಪೊಲಿಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸಹ ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯಾ, 'ನಾನೊಬ್ಬ ಜವಾಬ್ದಾರಿಯುತ ಶಾಸಕ. ನಾನ್ಯಾಕೆ ಅವಾಚ್ಯ ಶಬ್ದಗಳನ್ನು ಬಳಸಲಿ? ನಾವು ಶಾಂತರೀತಿಯಲ್ಲಿಯೇ ಬಂದ್ ಆಚರಿಸುತ್ತಿದ್ದರೂ ಪೊಲೀಸರು ನಮ್ಮನ್ನು ತಡೆಯುವುದಕ್ಕೆ ಪ್ರಯತ್ನಿಸಿದರು. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಹೀಗಿರುವಾಗ ನಾವು ಶಾಂತಿಯುತವಾಗಿ ಬಂದ್ ನಡೆಸುತ್ತಿದ್ದರೂ ನಮ್ಮನ್ನು ತಡೆಯುವುದಕ್ಕೆ ಬಂದಿದ್ದರಿಂದ ನಾವು ಅವರನ್ನು ವಿರೋಧಿಸಿದೆವು' ಎಂದಿದ್ದಾರೆ.