ಸತತ 18 ಗಂಟೆ ಮೆರವಣಿಗೆ ಬಳಿಕ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ
ಶಿವಮೊಗ್ಗ, ಸೆಪ್ಟೆಂಬರ್ 10: ಸತತ 18 ಗಂಟೆಗಳ ಮೆರವಣಿಗೆ ಬಳಿಕ ಶಿವಮೊಗ್ಗದ ಹಿಂದೂ ಸಂಘಟನೆಗಳ ಮಹಾಮಂಡಳದ ಗಣಪತಿ ವಿಸರ್ಜನೆ ನೆರವೇರಿಸಲಾಯಿತು. ಶನಿವಾರ ಬೆಳಗಿನ ಜಾವ 4 ಗಂಟೆಗೆ ತುಂಗಾ ನದಿಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಕೋಟೆ ಶ್ರೀ ಭೀಮೇಶ್ವರ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಲಾಗಿತ್ತು. ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಅಮೀರ್ ಅಹಮದ್ ಸರ್ಕಲ್, ಗಾಂಧಿ ಬಜಾರ್, ದುರ್ಗಿಗುಡಿ, ಕುವೆಂಪು ರಸ್ತೆ, ಸವಳಂಗ ರಸ್ತೆ, ಕಾನ್ವೆಂಟ್ ರೋಡ್, ಕೋಟೆ ರಸ್ತೆ ಮೂಲಕ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದ ಬಳಿ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಶಿವಮೊಗ್ಗದಲ್ಲಿ ರಾಷ್ಟ್ರ ಲಾಂಛನದ ಮೇಲೆ ಹಾರಾಡಿದ ಕೇಸರಿ ಧ್ವಜ ಪೊಲೀಸ್ ವಶ
ಹಿಂದೂ ಮಹಾಸಭಾ ಗಣಪತಿಯ ದರ್ಶನಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ನಗರದ ವಿವಿಧೆಡೆಯಿಂದ ಕುಟುಂಬ ಸಹಿತ ಬಂದಿದ್ದ ಜನರು, ರಸ್ತೆಯ ಇಕ್ಕೆಲಗಳಲ್ಲಿ ನಿಂತು ಗಣಪತಿಯ ದರ್ಶನ ಪಡೆದರು. ನಿರ್ಮಾಣ ಹಂತದ ಕಟ್ಟಡ ಸೇರಿದಂತೆ ವಿವಿಧ ಕಟ್ಟಡಗಳು, ಕಾಂಪೌಂಡ್ ಮೇಲೆ ನಿಂತು ಜನರು ದೇವರ ದರ್ಶನ ಪಡೆದರು.
ಇನ್ನು, ಕೋಟೆ ರಸ್ತೆಯಾದ್ಯಂತ ಅಕ್ಕಪಕ್ಕದ ರಸ್ತೆಯ ಜನರು ಗಣಪತಿ ಹೂವು, ಹಣ್ಣು, ಕಾಯಿ ಮಾಡಿಸಿದರು. ಪುಟ್ಟ ಮಕ್ಕಳನ್ನು ದೇವರಿಗೆ ಮುಟ್ಟಿಸಿ ಆಶೀರ್ವಾದ ಪಡೆದರು. ಜನರೆ ಮಂಗಳಾರತಿ ಬೆಳಗಿ ಪುನೀತರಾದರು.
ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡ ಮಹಿಳೆಯರು
ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯಲ್ಲಿ ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದಾರೆ. ಮೆರವಣಿಗೆಯ ಹಾದಿ ಉದ್ದಕ್ಕೂ ಮಹಿಳೆಯರು ಭಜನೆ, ನೃತ್ಯ ಮಾಡುತ್ತ ಗಮನ ಸೆಳೆಯುತ್ತಿದ್ದಾರೆ.
ಮೆರವಣಿಗೆಯ ಆರಂಭದಿಂದಲೂ ಮಹಿಳೆಯರು ಪಾಲ್ಗೊಂಡಿದ್ದಾರೆ. ಕೇಸರಿ ಶಾಲು ಧರಿಸಿ, ಕೇಸರಿ ಧ್ವಜಗಳನ್ನು ತಿರುಗಿಸುತ್ತ, ಘೋಷಣಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು. ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳಿಗೆ ಮಹಿಳೆಯರು ಹೆಜ್ಜೆ ಹಾಕಿದರು. ಮತ್ತೊಂದೆಡೆ ಬಿಜೆಪಿ ಮಹಿಳಾ ಘಟಕದ ಸದಸ್ಯೆಯರು ಕೇಸರಿ ಸೀರೆ, ಪೇಟಾ ಧರಿಸಿ ಮೆರವಣಿಗೆಯಲ್ಲಿ ಭಾಗಹಿಸಿದ್ದರು.
ಗೋಪಿ ಸರ್ಕಲ್ನಲ್ಲಿ ಡಿಜೆ ಅಬ್ಬರ
ತಡರಾತ್ರಿವರೆಗೂ ಹಾಡು, ಡಾನ್ಸ್, ಡಿಜೆಗೆ ಕುಣಿತ. ನಡು ಬೀದಿಯಲ್ಲಿ ಹೆಜ್ಜೆ ಹಾಕಿದ ಮಹಿಳೆಯರು, ಮಕ್ಕಳು. ಇದು ಹಿಂದೂ ಸಂಘಟನೆಗಳ ಮಹಾ ಮಂಡಳದ ಗಣಪತಿ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯ. ಸಾವಿರಾರು ಜನರ ಒಂದು ಗುಂಪು ಗಣಪತಿಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಈ ಗುಂಪು ಗಣಪತಿ ಮೂರ್ತಿಯೊಂದಿಗೆ ಕೋಟೆ ರಸ್ತೆ, ಗಾಂಧಿ ಬಜಾರ್, ನೆಹರೂ ರಸ್ತೆವೆರಗೂ ಸಾಗಿತು. ಸಾವಿರಾರು ಜನರು ಗೋಪಿ ಸರ್ಕಲ್, ದುರ್ಗಿಗುಡಿಯಲ್ಲಿ ಜಮಾಯಿಸಿದ್ದರು.
ಬಣ್ಣ ಬಣ್ಣದ ಬೆಳಕು, ಕೂಲ್ ಕ್ರ್ಯಾಕರ್ಸ್ಗಳು, ಕಿವಿಗಡಚ್ಚಿಕ್ಕುವ ಸ್ಪೀಕರ್ ಗಳಿಂದ ಗೋಪಿ ಸರ್ಕಲ್ ರಂಗು ಪಡೆದಿತ್ತು. ಇಡೀ ಸರ್ಕಲ್ನಲ್ಲಿ ಸಾವಿರಾರು ಯುವಕರು ಜಮಾಯಿಸಿದ್ದರು. ಡಿಜೆ ಸದ್ದಿಗೆ ಹೆಜ್ಜೆ ಹಾಕಿದರು. ಸ್ಥಳೀಯ ಕಲಾವಿದರು ವಿವಿಧ ಹಾಡುಗಳು, ಮ್ಯೂಸಿಕ್ ಪ್ರದರ್ಶಿಸಿ ಯುವಕರಲ್ಲಿ ಸ್ಪೂರ್ತಿ ತುಂಬಿದರು. ಮಧ್ಯಾಹ್ನದಿಂದಲೇ ಡಿಜೆ ಆರಂಭವಾಗಿತ್ತು.
ಕುವೆಂಪು ರಸ್ತೆಯಲ್ಲಿಯೂ ಸಂಭ್ರಮ
ಇತ್ತ ದುರ್ಗಿಗುಡಿ ರಸ್ತೆ ಉದ್ದಕ್ಕೂ ವಿವಿಧ ಸಂಘಟನೆಗಳು, ಸಂಸ್ಥೆಗಳ ವತಿಯಿಂದ ಸ್ಪೀಕರ್ಗಳನ್ನು ಅಳವಡಿಸಿ ಹಾಡು ಪ್ರಸಾರ ಮಾಡಲಾಯಿತು. ಅಲ್ಲಲ್ಲಿ ಗುಂಪು ಸೇರಿದ ಜನರು ಡಾನ್ಸ್ ಮಾಡಿ ಸಂಭ್ರಮಿಸಿದರು. ಇನ್ನೊಂದೆಡೆ ಜೈಲ್ ಸರ್ಕಲ್ ಕೂಡ ರಂಗು ಪಡೆದುಕೊಂಡಿತ್ತು. ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಿದರು. ಗಣಪತಿ ಮೆರವಣಿಗೆ ಜೈಲ್ ಸರ್ಕಲ್ ತಲುಪುವವರೆಗೂ ಹಾಡು, ಡಾನ್ಸ್ ಮುಂದುವರೆದಿತ್ತು.
ಸದಾ ವಾಹನ ದಟ್ಟಣೆ ಇರುತ್ತಿದ್ದ ಕುವೆಂಪು ರಸ್ತೆಯಲ್ಲಿಯು ಸಂಭ್ರಮವಿತ್ತು. ನಂಜಪ್ಪ ಆಸ್ಪತ್ರೆ ಮುಂಭಾಗ ವೇದಿಕೆ ನಿರ್ಮಾಣ ಮಾಡಲಾಗಿತ್ತು. ನಂಜಪ್ಪ ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರೊಂದಿಗೆ ಹಾಡು, ತಮಟೆ ಸದ್ದಿಗೆ ಡಾನ್ಸ್ ಮಾಡಿದರು. ಹಿಂದೂ ಮಹಾಸಭಾ ಗಣಪತಿಗೆ ನಂಜಪ್ಪ ಆಸ್ಪತ್ರೆ ಸಿಬ್ಬಂದಿ ಪೂಜೆ ಸಲ್ಲಿಸಿ, ಬೃಹತ್ ಹೂವಿನ ಹಾರ ಸಮರ್ಪಿಸಿದರು.
ಮುಂಜಾನೆ 4 ಗಂಟೆಗೆ ವಿಸರ್ಜಿಸ
ಹಿಂದೂ ಸಂಘಟನೆಗಳ ಮಹಾಮಂಡಳದ ಗಣಪತಿಯನ್ನು ಶನಿವಾರ ಬೆಳಗಿನ ಜಾವ ತುಂಗಾ ನದಿಯಲ್ಲಿ ಗಣಪತಿ ಮೂರ್ತಿ ವಿಸರ್ಜಿಸಲಾಯಿತು. ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದ ಹಿಂಭಾಗ ತುಂಗಾ ನದಿಯಲ್ಲಿ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ವಿಸರ್ಜಿಸಲಾಯಿತು. ಮಹಾಮಂಡಳದ ಪ್ರಮುಖರು, ಸಾರ್ವಜನಿಕರ ಈ ಸಂದರ್ಭ ಹಾಜರಿದ್ದರು.
ಗಣಪತಿ ವಿಸರ್ಜನೆಯ ವಿಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೋಟೆ ಶ್ರೀ ಪಾರ್ವತಿ ಭೀಮೇಶ್ವರ ದೇವಸ್ಥಾನದ ಹಿಂಭಾಗದ ಮಂಟಪದ ಬಳಿ ಗಣಪತಿ ಮೂರ್ತಿಯನ್ನು ಕೊಂಡೊಯ್ಯುವ ವಿಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ.