ಸಾಗರದಲ್ಲಿ ವೈದ್ಯರ ಕರ್ತವ್ಯಕ್ಕೆ ಅಡ್ಡಿ: ಕೇಸ್ ದಾಖಲು
ಶಿವಮೊಗ್ಗ, ಮೇ 1: ಕರ್ತವ್ಯ ನಿರತ ವೈದ್ಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಅವಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ನಡೆದಿದೆ.
ಕೀಲು ಮೂಳೆ ತಜ್ಞರಾದ ಡಾ.ಕೆ ಪರಪ್ಪ ಇವರು ಹೊರ ರೋಗಿಗಳ ವಿಭಾಗದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ರೋಗಿಗಳನ್ನು ಸರತಿ ಸಾಲಿನಲ್ಲಿ ಪರೀಕ್ಷಿಸುವ ವೇಳೆಯಲ್ಲಿ ಯುವಕ ನಿಂದಿಸಿದ್ದಾನೆ.
ಸಾಗರ ನಗರದ ನಿವಾಸಿ ಶಮೀರ್ ಎಂಬ ಯುವಕನೇ ಕರ್ತವ್ಯ ನಿರತ ವೈದ್ಯರಿಗೆ ಅಡ್ಡಿಪಡಿಸಿದ್ದಾನೆ. ಆಗ ಸ್ಥಳದಲ್ಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಸಾಗರದ ಡಿವೈಎಸ್ಪಿ ವಿನಾಯಕ್ ಅವರು ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಕಾನೂನು ಕ್ರಮ ಕೈಗೊಂಡು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರಿಗೆ ಧೈರ್ಯ ಮತ್ತು ರಕ್ಷಣೆಯನ್ನು ನೀಡಿದ್ದಾರೆ.
ಪೊಲೀಸ್ ಇಲಾಖೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೌಕರರ ಸಂಘದ ಅಧ್ಯಕ್ಷ ಮ.ಸ. ನಂಜುಂಡಸ್ವಾಮಿ ಹಾಗೂ ಸಾಗರ ಸಾರ್ವಜನಿಕ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಕೆ.ಆರ್ ಪ್ರಕಾಶ್ ಬೋಸ್ಲೆ ಸಾಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಯುವಕನಿಗೆ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗಿದ್ದು, ಶಮೀರ್ ಎಂಬ ಯುವಕ ಕೆಲದಿನಗಳ ಹಿಂದೆ ಹೊನ್ನಾವರಕ್ಕೆ ಹೋಗಿ ಬಂದಿರುವ ಮಾಹಿತಿ ಇದ್ದು, ಆತನ ಟ್ರಾವೆಲ್ ಹಿಸ್ಟರಿ ಕಲೆಹಾಕಲಾಗಿದೆ.