ಸೊರಬದ ಅಂಡಿಗೆ, ತೀರ್ಥಹಳ್ಳಿಯ ಹೊನ್ನೇತಾಳುವಿನಲ್ಲಿ ಗರಿಷ್ಠ ಮಳೆ ದಾಖಲು
ಶಿವಮೊಗ್ಗ, ಆಗಸ್ಟ್ 10: ಕಳೆದ ಒಂದು ವಾರದಿಂದ ರಾಜ್ಯದ ಹಲವೆಡೆ ಮಳೆರಾಯನ ಅಬ್ಬರ ಜೋರಾಗಿದೆ. ಶಿವಮೊಗ್ಗ ಜಿಲ್ಲೆಯ ಎರಡು ಕಡೆ ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾಗಿದೆ. ಹವಾಮಾನ ಇಲಾಖೆ ಬುಧವಾರವೂ ಮಳೆ ಮುನ್ಸೂಚನೆ ನೀಡಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ.
ಇನ್ನು ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ ಅಗ್ರ ಮೂರು ಜಾಗಗಳ ಪೈಕಿ ಶಿವಮೊಗ್ಗ ಜಿಲ್ಲೆಯ ಎರಡು ಗ್ರಾಮಗಳು ಸೇರಿಕೊಂಡಿವೆ. ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಪ್ರಕಾರ ಸೊರಬ ತಾಲೂಕು ಅಂಡಿಗೆಯಲ್ಲಿ 129 ಮಿ.ಮೀ ಮಳೆಯಾಗಿದೆ.
ಶಿವಮೊಗ್ಗ; ಆಗಸ್ಟ್ 12ರಂದು ಉದ್ಯೋಗ ಮೇಳ
ಕಳೆದ 24 ಗಂಟೆಯಲ್ಲಿ ಒಂದೇ ಸ್ಥಳದಲ್ಲಿ ಇಷ್ಟೊಂದು ಮಳೆಯಾಗಿರುವುದು ಅಂಡಿಗೆಯಲ್ಲಿ ಮಾತ್ರ. ಇನ್ನು ತೀರ್ಥಹಳ್ಳಿ ತಾಲೂಕು ಅಗುಂಬೆ ಸಮೀಪದ ಹೊನ್ನೇತಾಳು ಗ್ರಾಮದಲ್ಲೂ ಅತಿ ಹೆಚ್ಚು ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊನ್ನೇತಾಳು ಗ್ರಾಮದಲ್ಲಿ 126.5 ಮಿ.ಮೀ ಮಳೆಯಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ 2ನೇ ಸ್ಥಳವಾಗಿದೆ.
ಜಿಲ್ಲೆಯಲ್ಲಿ ಹಳದಿ ಅಲರ್ಟ್; ಜಿಲ್ಲೆಯಲ್ಲಿ ಮಳೆ ಪ್ರಮಾಣ ಸ್ವಲ್ಪ ತಗ್ಗಿದೆ. ಈ ನಡುವೆ ಹಳದಿ ಅಲರ್ಟ್ ಘೋಷಿಸಿ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 11ರ ಬೆಳಗ್ಗೆವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ 64.5 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ.
ಪ್ರತಿ ಮಳೆಯಲ್ಲೂ ಇದೇ ಸಮಸ್ಯೆ; ವಾರದಿಂದ ಮಳೆ ಅಬ್ಬರದಿಂದ ಭದ್ರಾ ನದಿ ತುಂಬಿ ಹರಿಯುತ್ತಿದೆ. ಇದರಿಂದ ನೆರೆಯುಂಟಾಗಿದ್ದು ಭದ್ರಾವತಿಯ ಗುಂಡೂರಾವ್ ಶೆಡ್ನಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಈ ಪ್ರದೇಶದಲ್ಲಿ ಕಳೆದ 30 ವರ್ಷಗಳಿಂದ ಇಲ್ಲಿನ ಜನರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿ ವರ್ಷ ಮಳೆ ಬಂದಾಗಲೂ ಹೊಳೆ ತುಂಬಿ ಮನೆಗಳಿಗೆ ನೀರು ನುಗ್ಗುತ್ತದೆ. ಭಾರಿ ನೀರು ಬಂದಾಗ ಮಾತ್ರ ಮನೆ ಖಾಲಿ ಮಾಡಿಕೊಂಡು ಬರುವಂತೆ ಛತ್ರದಲ್ಲಿ ಆಶ್ರಯ ಪಡೆಯುವಂತೆ ಹೇಳುತ್ತಾರೆ ಸ್ಥಳೀಯರ ತಮ್ಮ ಅಳಲನ್ನೂ ತೋಡಿಕೊಂಡಿದ್ದಾರೆ.
ತೋಟ ಗದ್ದೆಗಳು ಜಲಾವೃತ; ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದೆ. ಇದರಿಂದ ನದಿ ಪಾತ್ರದ ಭದ್ರಾವತಿ ನಗರ, ಹೊಳೆಹೊನ್ನೂರು ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ತೋಟ, ಗದ್ದೆಗಳು ಜಲಾವೃತವಾಗಿವೆ. ಭದ್ರಾವತಿ ನಗರದ ಹೊಸ ಸೇತುವೆ ಮಂಗಳವಾರ ಕೂಡ ಜಲಾವೃತಗೊಂಡು ಸಂಚಾರ ಬಂದ್ ಆಗಿದೆ.