ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ
ಶಿವಮೊಗ್ಗ, ಆಗಸ್ಟ್ 16: ಆಗುಂಬೆ ಘಾಟಿಯಲ್ಲಿ ಅತಿಯಾದ ಮಳೆಯಿಂದಾಗಿ 12 ಟನ್ ಗಿಂತಲೂ ಹೆಚ್ಚು ತೂಕದ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವುದಾಗಿ ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಮಲೆನಾಡಿನ ಆಗುಂಬೆ ಘಾಟಿಯಲ್ಲಿ ಅತೀ ಹೆಚ್ಚು ಮಳೆಯಿಂದಾಗಿ ರಸ್ತೆ, ಗುಡ್ಡ ಕುಸಿಯುವ ಸಂಭವ ಇದ್ದು, ಮಿನಿ ಬಸ್ಸು, ಕಾರು, ಜೀಪು ಬೈಕ್ ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಆಗಸ್ಟ್ 15ರಿಂದ ಸೆಪ್ಟೆಂಬರ್ 14ರವರೆಗೆ ಚಾರ್ಮಾಡಿ ಘಾಟ್ ರಸ್ತೆ ಬಂದ್
ಕಳೆದ ವರ್ಷ ಇದೇ ಸಮಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಘಾಟಿಯ ರಸ್ತೆಗಳು ಬಿರುಕು ಬಿಟ್ಟು ಕೆಲವು ಭಾಗದಲ್ಲಿ ಕುಸಿದು ಬಿದ್ದಿದ್ದವು. ಈ ವರ್ಷ ಕೂಡ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳು ವರದಿ ನೀಡಿದ್ದು, ಜಿಲ್ಲಾಧಿಕಾರಿ ಆದೇಶವನ್ನು ಹೊರಡಿಸಿದ್ದಾರೆ.
ಈ ವರ್ಷದ ಮಳೆಗಾಲ ಮುಗಿಯುವವರೆಗೂ ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಈ ವರ್ಷದ ಮಳೆಯೂ ಮಲೆನಾಡಿನ ಜನತೆಗೆ ಅತ್ಯಂತ ಸಮಸ್ಯೆ ತಂದೊಡ್ಡಿದ್ದು, ಆಗುಂಬೆ ಉಡುಪಿ ಮಣಿಪಾಲಕ್ಕೆ ಹೋಗುವ ವ್ಯಾಪಾರ ವಹಿವಾಟು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.