ತಾಳಗುಪ್ಪದಿಂದ ರೈಲು ಸಂಚಾರ ಪುನಾರಂಭ; ಹಳಿ ಪರಿಶೀಲನೆ
ಶಿವಮೊಗ್ಗ, ಜುಲೈ 25; ಶಿವಮೊಗ್ಗ ಜಿಲ್ಲೆಯ ಸಾಗರದ ತಾಳಗುಪ್ಪದಿಂದ ರೈಲು ಸಂಚಾರ ಪುನಾರಂಭವಾಗಿದೆ. ಶನಿವಾರದಿಂದಲೇ ತಾಳಗುಪ್ಪದಿಂದ ರೈಲುಗಳು ಬೆಂಗಳೂರು, ಮೈಸೂರಿಗೆ ಪ್ರಯಾಣ ಬೆಳೆಸಿವೆ.
ಭಾರೀ ಮಳೆಗೆ ವರದಾ ನದಿ ಉಕ್ಕಿ ಹರಿದಿತ್ತು. ಸಾಗರ ಜಂಬಗಾರು ಮತ್ತು ತಾಳಗುಪ್ಪ ನಡುವೆ ಹಲವು ಕಡೆ ರೈಲು ಹಳಿ ಜಲಾವೃತವಾಗಿತ್ತು. ಹಾಗಾಗಿ ಶುಕ್ರವಾರ ರಾತ್ರಿ ತೆರಳಬೇಕಿದ್ದ ತಾಳಗುಪ್ಪ-ಮೈಸೂರು ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇಂಟರ್ ಸಿಟಿ ರೈಲನ್ನು ಸಹ ಶಿವಮೊಗ್ಗಕ್ಕೆ ಸೀಮಿತಗೊಳಿಸಲಾಗಿತ್ತು.
ಶಿವಮೊಗ್ಗ: ಭಾರೀ ಮಳೆಗೆ ತಾಳಗುಪ್ಪದಲ್ಲಿ ರೈಲ್ವೆ ಹಳಿ ಜಲಾವೃತ; ಎಲ್ಲೆಲ್ಲಿ ಎಷ್ಟು ಮಳೆ?
ಶನಿವಾರದಿಂದ ರೈಲು ಸಂಚಾರ ಪುನಾರಂಭವಾಗಿದೆ. ತಾಳಗುಪ್ಪದಿಂದ ಮೈಸೂರಿಗೆ ರೈಲುಗಳು ಸಂಚರಿಸಿದವು. ಪ್ರಯಾಣಿಕರ ಸಂಖ್ಯೆಯು ದೊಡ್ಡದಾಗಿತ್ತು. ಇವತ್ತಿನಿಂದ ರೈಲು ಸಂಚಾರ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವರುಣನ ಆರ್ಭಟ: ಶಿವಮೊಗ್ಗ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ
ಹಳಿ ಪರಿಶೀಲಿಸಿದ ಅಧಿಕಾರಿಗಳು; ಹಳಿ ಜಲಾವೃತವಾಗಿದ್ದರಿಂದ ರೈಲು ಸಂಚಾರ ಪುನಾರಂಭಕ್ಕೂ ಮೊದಲು ಹಳಿ ಪರಿಶೀಲನೆ ನಡೆಸಬೇಕಾಗುತ್ತದೆ. ರೈಲ್ವೆ ಅಧಿಕಾರಿಗಳು ಶುಕ್ರವಾರ ಮತ್ತು ಶನಿವಾರ ಹಳಿ ಪರಿಶೀಲಿಸಿದರು.
ಶಿವಮೊಗ್ಗ: ಲಿಂಗನಮಕ್ಕಿ, ಭದ್ರಾ, ತುಂಗಾ ಡ್ಯಾಂ ನೀರಿನ ಮಟ್ಟ ಹೆಚ್ಚಳ
ಹಳಿ ಡ್ಯಾಮೇಜ್ ಆಗಿದೆಯೇ?, ರೈಲು ಸಂಚರಿಸಿದರೆ ನೆಲ ಕುಸಿಯಬುಹುದೆ? ಎಂದು ಅಧಿಕಾರಿಗಳು ಪರಿಶೀಲನೆ ಮಾಡಿದ ಬಳಿಕ ರೈಲು ಸಂಚಾರಕ್ಕೆ ಅವಕಾಶ ನೀಡಲಾಯಿತು.
ಭಾರೀ ಮಳೆ ಹಿನ್ನೆಲೆ ಹಳಿ ಮೇಲೆ ನೀರು ನಿಂತಿರುವುದರಿಂದ ಸಾಗರ-ತಾಳಗುಪ್ಪ ನಡುವಿನ ರೈಲು ಸಂಚಾರಕ್ಕೆ ಅಡ್ಡಿಯಾಗಿತ್ತು. ತಾಳಗುಪ್ಪ ಸಮೀಪದ ಕಾನ್ಲೆ ಎಂಬಲ್ಲಿ ರೈಲು ಹಳಿ ಮೇಲೆ ನೀರು ನಿಂತಿತ್ತು. ತಾಳಗುಪ್ಪದಿಂದ ಮೈಸೂರಿಗೆ ತೆರಳುತ್ತಿದ್ದ ಮಧ್ಯಾಹ್ನದ ರೈಲು ಸಾಗರ ಜಂಬಗಾರು ರೈಲ್ವೆ ನಿಲ್ದಾಣದಿಂದ ಸಂಚಾರ ನಡೆಸಿತ್ತು.
ಶುಕ್ರವಾರ ಸಾಗರದಲ್ಲಿ ಮಳೆ ಭಾರೀ ಅವಾಂತರ ಸೃಷ್ಟಿ ಮಾಡಿತ್ತು. ಎರಡು ದಿನದಿಂದ ಸಾಗರ ತಾಲೂಕಿನಲ್ಲಿ ಭಾರಿ ಸುರಿದಿತ್ತು. ಇದರಿಂದ ಪಟ್ಟಣದ ವಿವಿಧ ಬಡಾವಣೆಗಳು ಜಲಾವೃತವಾಗಿದ್ದವು. ಮನೆಗಳಿಗೆ ನೀರು ನುಗ್ಗಿತ್ತು, ರಸ್ತೆಗಳ ಮೇಲೂ ಮಳೆ ನೀರು ಹರಿಯುತ್ತಿತ್ತು.
ಚರಂಡಿಗಳು ಭರ್ತಿಯಾಗಿ ಕೆಳದಿ ರಸ್ತೆಯ ಮೇಲೆ ನೀರು ಹರಿದಿತ್ತು. ಅಕ್ಕಪಕ್ಕದ ಬಡಾವಣೆಗಳಿಗೆ ನೀರು ನುಗ್ಗಿದ್ದು, ಮನೆಗಳು ಜಲಾವೃತವಾಗಿದ್ದವು. ವಿಚಾರ ತಿಳಿಯುತ್ತಿದ್ದಂತೆ ಸಾಗರ ಶಾಸಕ ಹರತಾಳು ಹಾಲಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.