ಭಾರೀ ಮಳೆಗೆ ಸಾಗರ ಪಟ್ಟಣದ ವಿವಿಧೆಡೆ ಜಲಾವೃತ; ಶಾಸಕರಿಂದ ಸಿಟಿ ರೌಂಡ್ಸ್
ಶಿವಮೊಗ್ಗ, ಜುಲೈ 23: ಕಳೆದ ಎರಡು ದಿನದಿಂದ ಸಾಗರ ತಾಲ್ಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದ ಪಟ್ಟಣದ ವಿವಿಧ ಬಡಾವಣೆಗಳು ಜಲಾವೃತವಾಗಿವೆ. ಮನೆಗಳಿಗೂ ನೀರು ನುಗ್ಗಿದ್ದು, ರಸ್ತೆಗಳ ಮೇಲೂ ಮಳೆ ನೀರು ಹರಿಯುತ್ತಿದೆ.
ಕೆಳದಿ ರಸ್ತೆ ಮೇಲೆ ನೀರು
ಚರಂಡಿಗಳು ಭರ್ತಿಯಾಗಿ ಸಾಗರ ಪಟ್ಟಣದ ಕೆಳದಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಅಕ್ಕಪಕ್ಕದ ಬಡಾವಣೆಗಳಿಗೆ ನೀರು ನುಗ್ಗಿದ್ದು, ಮನೆಗಳು ಜಲಾವೃತವಾಗಿವೆ. ವಿಚಾರ ತಿಳಿಯುತ್ತಿದ್ದಂತೆ ಸಾಗರ ಶಾಸಕ ಹರತಾಳು ಹಾಲಪ್ಪ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜನರಿಗೆ ನೆರವಾಗುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಬಡಾವಣೆಗೆ ನುಗ್ಗಿದ ನೀರು
ಇಲ್ಲಿನ ವಿನೋಬನಗರದ ಲೇಔಟ್ ಒಂದಕ್ಕೆ ನೀರು ನುಗ್ಗಿದೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣದ ವಿವಿಧೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿರುವ ವರದಿಯಾಗಿದೆ.
ಶಾಸಕರಿಂದ ಸಿಟಿ ರೌಂಡ್ಸ್
ಭಾರಿ ಮಳೆ ಹಿನ್ನೆಲೆ ಸಾಗರ ಶಾಸಕ ಹರತಾಳು ಹಾಲಪ್ಪ ಬೆಳಗ್ಗೆಯಿಂದ ಪಟ್ಟಣದ ವಿವಿಧೆಡೆ ರೌಂಡ್ಸ್ ಹಾಕಿದ್ದಾರೆ. ಜಲಾವೃತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳು, ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು.
ಪುನರ್ವಸತಿ ಕೇಂದ್ರ ಆರಂಭ
ಭಾರಿ ಮಳೆ ಹಿನ್ನೆಲೆ ಸಾರ್ವಜನಿಕರ ಅನುಕೂಲಕ್ಕಾಗಿ ಪುನರ್ವಸತಿ ಕೇಂದ್ರ ತೆರೆಯಲಾಗಿದೆ ಎಂದು ಶಾಸಕರ ಕಾರ್ಯಾಲಯದಿಂದ ಮಾಹಿತಿ ನೀಡಲಾಗಿದೆ. 9480010111 ನಂಬರ್ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.