ತೀರ್ಥಹಳ್ಳಿ : ತಾಯಿಯ ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ
ಶಿವಮೊಗ್ಗ, ಜುಲೈ 09 : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಳೆ ಆರ್ಭಟ ಇನ್ನೂ ನಿಂತಿಲ್ಲ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.
ಮಳೆ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಯನ್ನು ಆಶಿಕಾ (15) ಎಂದು ಗುರುತಿಸಲಾಗಿದೆ. ತೀರ್ಥಹಳ್ಳಿ ತಾಲೂಕು ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂದಾಳಬೈಲು ಸಮೀಪದ ದೊಡ್ಲಿ ಮನೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ: ಪ್ರವಾಹ ಭೀತಿಯಲ್ಲಿ ಬಾಗಲಕೋಟೆ ಜನತೆ
ಸೋಮವಾರ ಮನೆಯ ಮುಂದಿನ ಹಳ್ಳವನ್ನು ದಾಟುತ್ತಿರುವಾಗ ಕಾಲು ಜಾರಿ ಆಶಿಕಾ ಹಳ್ಳಕ್ಕೆ ಬಿದಿದ್ದು ಕೊಚ್ಚಿಕೊಂಡು ಹೋಗಿದ್ದಾಳೆ. ದೊಡ್ಲಿಮನೆ ಗ್ರಾಮದ ಯೋಗೇಂದ್ರ ಗೌಡ ಹಾಗೂ ಅನಿತಾ ಅವರ ಪುತ್ರಿಯಾದ ಆಶಿಕಾ, ಶಾಲೆಯಿಂದ ಮನೆಗೆ ವಾಪಸ್ ಆಗುತ್ತಿದ್ದಳು.
ಮನೆಯ ಎದುರು ಹರಿಯುತ್ತಿದ್ದ ಹಳ್ಳ ದಾಟಲು ಚಪ್ಪಡಿ ಹಾಕಲಾಗಿತ್ತು. ಆದರೆ, ಮಳೆಯಿಂದ ಪಾಚ್ಚಿಕಟ್ಟಿ ಚಪ್ಪಡಿ ಜಾರುತ್ತಿತ್ತು. ಹಳ್ಳ ದಾಟುವಾಗ ಚಪ್ಪಲಿ ನೀರಿಗೆ ಬಿದ್ದಿದೆ. ಅದನ್ನು ಹಿಡಿಯಲು ಆಕೆ ಪ್ರಯತ್ನ ನಡೆಸಿದ್ದು, ಕಾಲುಜಾರಿ ಹಳ್ಳಕ್ಕೆ ಬಿದ್ದಿದ್ದಾಳೆ.
ಕೊಡಗಿನಲ್ಲಿ ಮುಂದುವರಿದ ಮಳೆ; ಕೃಷಿ ಚಟುವಟಿಕೆಯಲ್ಲಿ ರೈತರು
ತಾಯಿ ಅನಿತಾ ಮಗಳನ್ನು ಹಿಡಿಯಲು ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಿಲ್ಲ. ಆಶಿಕಾ ಗುಡ್ಡೇಕೇರಿ ಸರ್ಕಾರಿ ಫ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದಳು. ಭಾರೀ ಮಳೆಯ ಕಾರಣ ಇಂದು ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು.
ಆದ್ದರಿಂದ, ಆಕೆ ತಾಯಿಯ ಜೊತೆ ಮನೆಗೆ ವಾಪಸ್ ಆಗುವಾಗ ಈ ದುರ್ಘಟನೆ ನಡೆದಿದೆ. ಕಳೆದ ವರ್ಷ ಆಶಿಕಾ ತಂದೆ ಯೋಗೇಂದ್ರಗೌಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.