ಶಿವಮೊಗ್ಗದಲ್ಲಿ ಭಾರಿ ಮಳೆ ಸೂಚನೆ, ಭದ್ರಾವತಿಯಲ್ಲಿ ರೆಡ್ ಅಲರ್ಟ್
ಶಿವಮೊಗ್ಗ, ಆಗಸ್ಟ್ 6: ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಕಳೆದ ಎರಡು ದಿನಗಳಲ್ಲಿ ಹಲವೆಡೆ ಸುರಿದ ಮಳೆಗೆ ಭಾರಿ ಅವಾಂತರ ಸೃಷ್ಟಿಯಾಗಿದೆ. ಇನ್ನು ಭಾರಿ ಮಳೆ ಮುನ್ಸೂಚನೆ ಮತ್ತು ಭದ್ರಾ ಜಲಾಶಯದ ಒಳ ಹರಿವು ಹೆಚ್ಚಳವಾಗಿರುವುದರಿಂದ ಭದ್ರಾವತಿ ತಾಲೂಕಿನ ಜನತೆಯಲ್ಲಿ ಆತಂಕ ಮೂಡಿದೆ. ಹಾಗಾಗಿ ತಾಲೂಕಿನಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಜೋರು ಮಳೆಯಿಂದಾಗಿ ಭದ್ರಾ ಜಲಾಶಯದ ಒಳ ಹರಿವು ಪ್ರಮಾಣ ಹೆಚ್ಚಳವಾಗಿದೆ. ಈಗಾಗಲೇ ಜಲಾಶಯ ಭರ್ತಿಯಾಗಿರುವುದರಿಂದ ಹೆಚ್ಚುವರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಇದು ಭದ್ರಾವತಿ ನಗರದಲ್ಲಿ ಆತಂಕ ಮೂಡಿಸಿದೆ. ಭದ್ರಾ ಜಲಾಶಯಕ್ಕೆ ಗುರುವಾರದಿಂದ ಒಳ ಹರಿವು ಹೆಚ್ಚಳವಾಗಿದೆ. ಶುಕ್ರವಾರವು ಒಳ ಹರಿವು ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಪ್ರಸ್ತುತ ಜಲಾಶಯದ ಒಳ ಹರಿವು 31,069 ಕ್ಯೂಸೆಕ್ ಇದೆ. ಹೊರ ಹರಿವು 33,175 ಕ್ಯೂಸೆಕ್ ಇದೆ. ಇನ್ನು ಜಲಾಶಯದ ನೀರಿನ ಮಟ್ಟ 186 ಅಡಿಯಷ್ಟು ಇದೆ.
ಮಳೆ ಅಬ್ಬರಕ್ಕೆ ಹೊಗೆನಕಲ್ ಜಲಪಾತವೇ ಮುಳುಗಡೆ!!
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಮಂಡಳಿ ಹಾಗೂ ಭಾರತೀಯ ಹವಾಮಾನ ಇಲಾಖೆ ಜಿಲ್ಲೆಯಲ್ಲಿ 100ರಿಂದ 200 ಮಿ.ಮೀ ಮಳೆಯಾಗಬಹುದು ಎಂದು ಮುನ್ಸೂಚನೆ ಮಾಡಿದೆ. ಘಟ್ಟ ಪ್ರದೇಶದಲ್ಲಿ ಗರಿಷ್ಠ 200 ಮಿಮೀ ವರೆಗೆ ಮಳೆಯಾಗಬಹುದು ಎನ್ನಲಾಗುತ್ತಿದೆ.
ರೆಡ್ ಅಲರ್ಟ್ ಘೋಷಣೆ
ಮಳೆ ಪ್ರಮಾಣ ಹೆಚ್ಚಳವಾದರೆ ಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತದೆ. ಇದರಿಂದ ಭದ್ರಾವತಿ ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕವಿದೆ. ಮತ್ತೊಂದೆಡೆ ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಇದೆ ಕಾರಣಕ್ಕೆ ಭದ್ರಾವತಿ ತಾಲೂಕಿನಲ್ಲಿ ರೆಡ್ ಅಲರ್ಟ್ ಘೋಷಿಸಿ ತಹಶೀಲ್ದಾರ್ ಆರ್.ಪ್ರದೀಪ್ ಆದೇಶ ಹೊರಡಿಸಿದ್ದಾರೆ.
ಸುರಕ್ಷಿತ ಸ್ಥಳಗಳಿಗೆ ತೆರಳಲು ಮನವಿ
ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊಳೆಗೆ ಹರಿಸುವ ಸಾದ್ಯತೆ ಇದೆ. ಆದ್ದರಿಂದ ಭದ್ರಾವತಿ ತಾಲೂಕಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಂಭವವಿದೆ. ಈ ಭಾಗದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ತಹಶೀಲ್ದಾರ್ ಆರ್.ಪ್ರದೀಪ್ ಮನವಿ ಮಾಡಿದ್ದಾರೆ. ಇನ್ನು, ತುರ್ತು ಸಂದರ್ಭವನ್ನು ಎದುರಿಸಲು ಅಧಿಕಾರಿಗಳು ಸನ್ನದ್ಧವಾಗಿರಬೇಕು ಎಂದು ಸೂಚಿಸಲಾಗಿದೆ.
ಶಿವಮೊಗ್ಗದಲ್ಲಿ ಮುಂದುವರಿದ ಮಳೆ, ರಸ್ತೆ ಜಲಾವೃತ, ಬೆಳೆ, ಮನೆಗಳಿಗೆ ಹಾನಿ
ಕಳೆದ ತಿಂಗಳು ಮುಳುಗಿದ್ದ ಭದ್ರಾವತಿ
ಕಳೆದ ತಿಂಗಳು ಭಾರಿ ಮಳೆ ಮತ್ತು ಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗಿತ್ತು. ಇದರಿಂದ ಭದ್ರಾವತಿ ಪಟ್ಟಣದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಹೊಸ ಸೇತುವೆ ಜಲಾವೃತವಾಗಿತ್ತು. ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಈ ಮಧ್ಯೆ ಮಳೆ ಪ್ರಮಾಣ ತಗ್ಗಿದ್ದರಿಂದ ಜನರು ನಿಟ್ಟುಸಿರು ಬಿಟ್ಟಿದ್ದರು. ಈಗ ಪುನಃ ಮಳೆ ಅಬ್ಬರಿಸುತ್ತಿದ್ದು, ಹವಾಮಾನ ಇಲಾಖೆ ಕೂಡ ಜೋರು ಮಳೆಯ ಮುನ್ಸೂಚನೆ ನೀಡಿದೆ. ಇದು ಭದ್ರಾವತಿ ತಾಲೂಕಿನಲ್ಲಿ ಆತಂಕ ಮೂಡಿಸಿದೆ.
ಜಲಾಶಯಗಳ ಒಳ ಹರಿವು ಹೆಚ್ಚಳ
ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಜಲಾಶಯಗಳಿಗೆ ಒಳ ಹರಿವು ಏರಿಕೆಯಾಗುತ್ತಿದೆ. ಮಾಣಿ, ಪಿಕಪ್ ಡ್ಯಾಂ, ಚಕ್ರಾ, ಸಾವೇಹಕ್ಲು ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 165 ಮಿ.ಮೀ ಮಳೆ ದಾಖಲಾಗಿದೆ. ಈ ಹಿನ್ನೆಲೆ ಜಲಾಶಯಕ್ಕೆ 6102 ಕ್ಯೂಸೆಕ್ ಒಳ ಹರಿವು ಇದೆ. ಇನ್ನು, ಪಿಕಪ್ ಡ್ಯಾಂಗೆ 2132 ಕ್ಯೂಸೆಕ್ ಒಳ ಹರಿವು ಇದೆ.
ಚಕ್ರಾ ಜಲಾಶಯ ವ್ಯಾಪ್ತಿಯಲ್ಲಿ 161 ಮಿ.ಮೀ ಮಳೆಯಾಗಿದೆ. ಹಾಗಾಗಿ ಡ್ಯಾಂಗೆ 2467 ಕ್ಯೂಸೆಕ್ ಒಳ ಹರಿವು ಇದೆ. ಸಾವೇಹಕ್ಲು ಜಲಾಶಯಕ್ಕೆ 2318 ಕ್ಯೂಸೆಕ್ ಒಳ ಹರಿವು ಇದೆ. ಈ ಜಲಾಶಯದ ಭಾಗದಲ್ಲಿ 160 ಮಿ.ಮೀ ಮಳೆಯಾಗಿದೆ.
ಇನ್ನು, ಕಳೆದ 24 ಗಂಟೆ ಅವಧಿಯಲ್ಲಿ ಹೊಸನಗರ ತಾಲೂಕಿನ ಯಡೂರು ಭಾಗದಲ್ಲಿ 137 ಮಿ.ಮೀ, ಹುಲಿಕಲ್ನಲ್ಲಿ 186 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 183 ಮಿ.ಮೀ ಮಳೆಯಾಗಿದೆ.