ಎಚ್ಡಿಕೆ ಹತ್ತು ಜನ್ಮ ಎತ್ತಿದರೂ ಮತ್ತೆ ಸಿಎಂ ಆಗಲ್ಲ: ಈಶ್ವರಪ್ಪ ಕಿಡಿ
ಶಿವಮೊಗ್ಗ, ಜನವರಿ 10: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇನ್ನೆಷ್ಟೇ ವೀಡಿಯೋ ಬಿಡುಗಡೆ ಮಾಡಿ, ಹತ್ತು ಜನ್ಮ ಎತ್ತಿ ಬಂದರೂ ಮತ್ತೆ ಸಿಎಂ ಆಗಲು ಸಾಧ್ಯವಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ""ಜೆಡಿಎಸ್ ನವರೂ ಈಗಾಗಲೇ ಅಲ್ಲೊಂದು, ಇಲ್ಲೊಂದು ಕಡೆ ಗೆಲ್ಲುತ್ತಿದ್ದಾರೆ. ಇದೆಲ್ಲವೂ ಗೊತ್ತಾಗಿ ಕುಮಾರಸ್ವಾಮಿ ಅವರು ತಮ್ಮ ಪಕ್ಷ ಜೀವಂತವಾಗಿದೆ ಎಂದು ತೋರಿಸಲು ಮಂಗಳೂರು ಗಲಾಟೆ ವೀಡಿಯೊ ಇಟ್ಟುಕೊಂಡು ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪರಿಗೆ ಪ್ರಾಣ ಬೆದರಿಕೆ ಕರೆ!
ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲ್ಲ, ಎಚ್ಡಿಕೆ ಹತ್ತು ಜನ್ಮ ಎತ್ತಿ ಬಂದರೂ ಸಿಎಂ ಆಗೋದಿಲ್ಲ. ಅವರ ಗುಣ ಎಲ್ಲರಿಗೂ ಗೊತ್ತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಕಾಲೆಳೆದರು.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ ಸಿ ವಿರೋಧಿಸಿ ಮಂಗಳೂರು ಗಲಾಟೆ ವೀಡಿಯೋ ಈ ಹಿಂದೆಯೇ ಎಲ್ಲ ಮಾದ್ಯಮಗಳಲ್ಲೂ ಬಂದಿದೆ. ಕಲ್ಲನ್ನು ಮೂಟೆ ಕಟ್ಟಿ ಆಟೋದಲ್ಲಿ ತಂದಿದ್ದು ಸಂಚುಕೋರರು ಎಂಬುದು ವೀಡಿಯೋದಿಂದ ಗೊತ್ತಾಗಿದೆ. ಗೂಂಡಾಗಳು ಸಂಚು ನಡೆಸಿ ಗಲಭೆ ಮಾಡಿದ್ದು ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಬಂದಿದ್ದನ್ನು ಕುಮಾರಸ್ವಾಮಿ ನಂಬುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ರಾಜ್ಯದ ಜನ ಕಣ್ಣಾರೆ ಆ ದೃಶ್ಯಗಳನ್ನು ನೋಡಿದ್ದಾರೆ ಎಂದರು.
ಪೊಲೀಸರ ಮೇಲೆ ಹಲ್ಲೆ ನಡೆಸಿ, ಕಲ್ಲು ತೂರಾಟದ ವ್ಯವಸ್ಥಿತ ಸಂಚನ್ನು ಮಾಡಿದ್ದ ಕುತಂತ್ರಿಗಳ ಮೇಲೆ ನ್ಯಾಯಾಂಗ ತನಿಖೆ ನಡೆಸುವಂತೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಒತ್ತಾಯಿಸಿದ್ದರು. ಅವರ ಒತ್ತಾಯದಂತೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ. ನ್ಯಾಯಾಂಗ ತನಿಖೆಯ ವರದಿ ಬರುವವರೆಗೆ ಇವರಿಗೆ ಕಾಯಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ರೈಲ್ವೆ ಇಲಾಖೆಯಿಂದ ಶಿವಮೊಗ್ಗಕ್ಕೆ ಮತ್ತೊಂದು ಕೊಡುಗೆ
ತನ್ನ ಪಕ್ಷ ಬದುಕಿದೆ ಎಂದು ತೋರಿಸಿಕೊಳ್ಳಲು ಕುಮಾರಸ್ವಾಮಿ ಬಿಜೆಪಿ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ ಯಾವುದೇ ಕಾರಣಕ್ಕೂ ಕುತಂತ್ರ ರಾಜಕಾರಣಕ್ಕೆ ಬಿಜೆಪಿ ಸರ್ಕಾರ ಬಗ್ಗಲ್ಲ. ರಾಜ್ಯದ ಜನ ಕಾಂಗ್ರೆಸ್ ನ ಮೂಲೆಗುಂಪು ಮಾಡಿದೆ. ಜೆಡಿಎಸ್ ಅನ್ನು ಎಲ್ಲಿದೆ ಎಂದು ದುರ್ಬಿನ್ ಹಾಕಿ ಹುಡುಕುವಂತೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಮಾತನಾಡಿದ ಈಶ್ವರಪ್ಪ, ಮುಖ್ಯಮಂತ್ರಿ ಸ್ಥಾನ ಹಾಗೂ ಚಾಮುಂಡೇಶ್ವರಿ ಕ್ಷೇತ್ರ ಎರಡು ಕಳೆದುಕೊಂಡರು ಸಿದ್ದರಾಮಯ್ಯಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಪಂಚದ ಜನರೇ ನರೇಂದ್ರ ಮೋದಿಯನ್ನು ಒಪ್ಪುತ್ತಿದ್ದಾರೆ, ಅದರೆ ಆದರೆ ಸಿದ್ದರಾಮಯ್ಯ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಹಿಟ್ಲರ್ ಎನ್ನುತ್ತಿದ್ದಾರೆ. ದೇಶದ ಜನ ಒಪ್ಪದಿದ್ದರೆ ನರೇಂದ್ರ ಮೋದಿ ಎರಡೆರಡು ಬಾರಿ ಪ್ರಧಾನಮಂತ್ರಿ ಆಗುತ್ತಿದ್ದರೇ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು.
ನರೇಂದ್ರ ಮೋದಿಯನ್ನು ಹಿಟ್ಲರ್ ಎನ್ನುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸನ್ನು ರಾಜ್ಯದ ಜನ ಎಲ್ಲಿ ಕೂರಿಸುತ್ತಾರೆ ಕಾದುನೋಡಿ ಎಂದರು.
ಜನ ಬಿಜೆಪಿ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.