ಸಾಗರದಲ್ಲಿ ಬೇಳೂರು ಬೆಂಬಲ ಗಿಟ್ಟಿಸುವ ಯತ್ನದಲ್ಲಿ ಹಾಲಪ್ಪ
ಸಾಗರ, ಏಪ್ರಿಲ್ 17: ಸಾಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬೇಳೂರು ಗೋಪಾಲಕೃಷ್ಣ ಅವರ ವಿಶ್ವಾಸ ಪಡೆದುಕೊಂಡು ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯಿಂದ ಉದ್ಭವಗೊಂಡಿರುವ ಸಮಸ್ಯೆ ಬಗೆಹರಿಸಲಾಗುವುದು ಎಂದು ಹರತಾಳು ಹಾಲಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಟಿಕೆಟ್ ಸಿಗದಿದ್ದಾಗ ಅಸಮಾಧಾನ ಆಗುವುದು ಸಹಜ. ಅದೇ ರೀತಿ ಬೇಳೂರು ಅವರಿಗೂ ಆಗಿದೆ. ಪಕ್ಷದ ಮುಖಂಡರ, ಹಿತೈಶಿಗಳ ಸಮ್ಮುಖದಲ್ಲಿ ಕುಳಿತು ಅಸಮಾಧಾನ ಶಮನಗೊಳಿಸಲಾಗುವುದು," ಎಂದರು.
ಸಾಗರದಲ್ಲಿ ಐದು ಜನರು ಆಕಾಂಕ್ಷಿಗಳಿದ್ದರು. ಇದರಲ್ಲಿ ಮೂವರ ವಿಶ್ವಾಸ ಪಡೆಯಲಾಗಿದೆ. ಇದೇ ರೀತಿ ಬೇಳೂರು ಅವರ ಅಸಮಾಧಾನವನ್ನು ಶಮನಗೊಳಿಸಲಾಗುವುದು ಎಂದರು.
ಸೋಮವಾರ ರಾತ್ರಿ ವಿನಾಯಕ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಹಲ್ಲೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು. ವಿನಾಯಕ ನನ್ನ ಆಪ್ತ ಸ್ನೇಹಿತ ಅಷ್ಟೆ. ಆದರೆ ಆತ ಯಾವ ಪಕ್ಷದಲ್ಲೂ ಗುರುತಿಸಿಕೊಂಡಿರಲಿಲ್ಲ ಎಂದರು
ಏಪ್ರಿಲ್ 20ರಂದು ಸಾಗರದ ಗಣಪತಿ ದೇವಸ್ಥಾನದಿಂದ ಮೆರವಣಿಗೆ ಹೊರಟು ನಾಮಪತ್ರ ಸಲ್ಲಿಸಲಾಗುವುದು. ಇದಕ್ಕೆ ಚುನಾವಣಾ ಆಯೋಗದ ಅನುಮತಿ ಬೇಕಾಗಿದ್ದು, ಆಯೋಗ ಅನುಮತಿ ನೀಡಿದರೆ ಮಾತ್ರ ಮೆರವಣಿಗೆ ಎಂದರೆ.
ಅವರು ಇಂದು ಬಿಜೆಪಿ ಹಿರಿಯ ಮುಖಂಡರಾದ ಆಯನೂರ್ ಮಂಜುನಾಥ್ ಸೇರಿ ಹಲವು ಹಿರಿ ಕಿರಿ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದರು.