ಗ್ರಾಮ ಪಂಚಾಯಿತಿ ಅಧಿಕಾರ ಮೊಟಕು; ಕಸಗುಡಿಸಿ ಪ್ರತಿಭಟನೆ
ಶಿವಮೊಗ್ಗ ಮೇ 12: ಗ್ರಾಮ ಪಂಚಾಯಿತಿ ಅಧಿಕಾರವನ್ನು ಮೊಟಕುಗೊಳಿಸಿ ಅಧಿಕಾರಿಗಳೇ ಫಲಾನಭವಿಗಳ ಪಟ್ಟಿ ಸಿದ್ದಪಡಿಸಿದ ಕ್ರಮ ಖಂಡಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ. ತಾಲೂಕು ಪಂಚಾಯಿತಿ ಕಚೇರಿಯ ಕಸ ಗುಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಅರಬೆತ್ತಲಾಗಿ ಹೊಸನಗರ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕಸ ಗೂಡಿಸಿದರು. ನರೇಗಾ ಯೋಜನೆಯಡಿ ಅಡಕೆ ಗಿಡ ನೆಡಲು ಅನುದಾನ ಬಿಡುಗಡೆ ವಿಚಾರದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಸಿದ್ಧವಾಗುತ್ತಿದೆ ಮೊಟ್ಟಮೊದಲ ಚಿಟ್ಟೆ ಪಾರ್ಕ್
ಅನುದಾನ ಬಿಡುಗಡೆ ವಿಚಾರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧಾರವಾಗಬೇಕು. ಫಲಾನುಭವಿಗಳ ಪಟ್ಟಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಒ ಅವರು ಸಹಿ ಮಾಡಿ ತಾಲೂಕು ಕಚೇರಿಗೆ ಕಳುಹಿಸಬೇಕು. ಆ ಬಳಿಕ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಲಿದೆ. ಆದರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿಯನ್ನು ಪರಿಗಣಿಸದೆಯೆ ಪಟ್ಟಿ ಸಿದ್ಧಪಡಿಸಿ ಅನುದಾನ ಬಿಡುಗಡೆ ಮಾಡಿರುವ ಸಂಗತಿ ಕುರುಣಾಕರ ಶೆಟ್ಟಿ ಆಕ್ರೋಶಕ್ಕೆ ಕಾರಣವಾಗಿದೆ.
36 ಲಕ್ಷ ರೂ. ಬಿಡುಗಡೆ; ಮೂಡುಗೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರಿಗೆ 36 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 36 ರೈತರಲ್ಲ ಇನ್ನೂ ಹೆಚ್ಚಿನ ರೈತರಿಗೆ ಅನುದಾನ ಬಿಡುಗಡೆ ಮಾಡಲಿ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಗ್ರಾಮ ಪಂಚಾಯಿತಿ ಗಮನಕ್ಕೆ ತರದೆ ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಶಂಕೆ ಇದೆ ಎಂದು ಕುರಣಾಕರ ಶೆಟ್ಟಿ ಆರೋಪಿಸಿದ್ದಾರೆ.
ಪರಮಾಧಿಕಾರ ಕಸಿದುಕೊಂಡಿದ್ದಾರೆ; ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಸಿದ್ದಪಡಿಸಬೇಕು. ಇದು ಗ್ರಾಮ ಪಂಚಾಯಿತಿಗೆ ಇರುವ ಪರಮಾಧಿಕಾರ. ಆದರೆ ಅಧಿಕಾರಿಗಳು ತಮ್ಮ ಪರಮಾಧಿಕಾರವನ್ನು ಕಸಿದುಕೊಂಡಿದ್ದಾರೆ ಎಂದು ಕರುಣಾಕರ ಶೆಟ್ಟಿ ಆರೋಪಿಸಿದ್ದಾರೆ. "ಗ್ರಾಮ ಪಂಚಾಯಿತಿ ಮಾಡಬೇಕಿದ್ದ ಕೆಲಸವನ್ನು ಅಧಿಕಾರಿಗಳೆ ಮಾಡಿದ್ದಾರೆ. ಹಾಗಾಗಿ ಗ್ರಾಮ ಪಂಚಾಯಿತಿಯಲ್ಲಿ ನಮಗೇನು ಕೆಲಸವಿಲ್ಲ. ಆದ್ದರಿಂದ ನಮ್ಮ ಕೆಲಸ ಮಾಡಿದ ಅಧಿಕಾರಿಗಳಿಗೆ ಸಹಾಯ ಮಾಡಬೇಕಿದೆ. ಅವರ ಕೆಲಸವನ್ನು ನಾವು ಮಾಡಬೇಕಿದೆ. ಹಾಗಾಗಿ ತಾಲೂಕು ಪಂಚಾಯಿತಿ ಕಚೇರಿಯ ಕಸ ಗುಡಿಸಿದ್ದೇನೆ" ಎಂದು ಕರುಣಾಕರ ಶೆಟ್ಟಿ ತಿಳಿಸಿದರು.
ತಮ್ಮ ಬೇಡಿಕೆ ಈಡೇರುವವರೆಗೂ ತಾಲೂಕು ಪಂಚಾಯಿತಿ ಕಚೇರಿಯ ಕಸ ಗುಡಿಸಿ, ಪ್ರತಿಭಟನೆ ಮುಂದುವರೆಸಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ನಿರ್ಧರಿಸಿದ್ದಾರೆ. ವಿಭಿನ್ನವಾಗಿ ಪ್ರತಿಭಟನೆಗಳನ್ನು ನಡೆಸಿ ಗಮನ ಸೆಳೆದಿದ್ದಾರೆ.
ಕರ್ನಾಟಕದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆಯಲ್ಲ
ವಿವಿಧ ಬೇಡಿಕೆ ಈಡೇರಿಕೆಗಾಗಿ ಈ ಹಿಂದೆ ಅವರು ಪಾದಯಾತ್ರೆ ಮಾಡಿದ್ದರು. ಒಮ್ಮೆ ಅರಣ್ಯ ಇಲಾಖೆಯ ರೇಂಜ್ ಕಚೇರಿ ಛಾವಣಿ ಏರಿ ಕುಳಿತು ಪ್ರತಿಭಟಿಸಿದ್ದರು. ಮತ್ತೊಮ್ಮೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಮರ ಏರಿ ಕುಳಿತು ಹೋರಾಟ ಮಾಡಿದ್ದರು. ಈಗ ಗ್ರಾಮ ಪಂಚಾಯಿತಿಯ ಪರಮಾಧಿಕಾರ ಮೊಟಕುಗೊಳಿಸಿದ್ದಕ್ಕೆ ತಾಲೂಕು ಪಂಚಾಯಿತಿ ಕಚೇರಿ ಕಸ ಗುಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.