ಮತದಾರರ ಪಟ್ಟಿಯಿಂದ ಹಾಲಿ ಗ್ರಾ.ಪಂ ಸದಸ್ಯೆ ಹೆಸರು ಕಾಣೆ: ಪ್ರತಿಭಟನೆ
ಶಿವಮೊಗ್ಗ, ಡಿಸೆಂಬರ್ 8: ಭದ್ರಾವತಿ ತಾಲೂಕಿನ ಕೊರಲಕೊಪ್ಪ ಗ್ರಾಮ ಪಂಚಾಯಿತಿ ಹಾಲಿ ಸದಸ್ಯೆ ಬಿ.ಆರ್ ಸಿಂಧೂ ಎಂಬುವವರ ಹೆಸರನ್ನು ರಾಜಕೀಯ ದುರುದ್ದೇಶದಿಂದ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಆಗ್ರಹಿಸಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಬಾರದೆಂಬ ದುರುದ್ದೇಶದಿಂದ ಹಾಲಿ ಸದಸ್ಯೆ ಬಿ.ಆರ್ ಸಿಂಧೂ ಹೆಸರನ್ನು ಪಂಚಾಯತಿಗೆ ಕೈ ಬಿಟ್ಟು, ನಗರ ವ್ಯಾಪ್ತಿಗೆ ಸೇರಿಸಲಾಗಿದ್ದು, ಕೀಳುಮಟ್ಟದ ಕುತಂತ್ರ ರಾಜಕಾರಣದ ಆಮಿಷಕ್ಕೆ ಬಲಿಯಾಗಿ ಬೂತ್ ಲೇವಲ್ ಅಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.
ಶಿವಮೊಗ್ಗದಲ್ಲಿ ಭಾರತ್ ಬಂದ್ಗೆ ಮಿಶ್ರ ಪ್ರತಿಕ್ರಿಯೆ; ಎಂದಿನಂತೆ ಜನ ಜೀವನ
ಜಯ ಕರ್ನಾಟಕ ಜನಪರ ವೇದಿಕೆ ಶಿವಮೊಗ್ಗ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸುದೀಪ್ ಕುಮಾರ್ ಮಾತನಾಡಿ, ಇದು ಸಂವಿಧಾನದ ಕಗ್ಗೊಲೆಯಾಗಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಸಿ ತಕ್ಷಣ ನಡೆದಿರುವ ತಪ್ಪನ್ನು ಸರಿಪಡಿಸಿ ಬಿ.ಅರ್ ಸಿಂಧೂ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭದ್ರಾವತಿಯ ಶಾಸಕರ ಸಂಗಮೇಶ್ ಪುತ್ರ ಬಿ.ಎಸ್ ಬಸವೇಶ್ವರ ಸಂಘಟನೆಯ ಪರವಾಗಿ ಭಾಗವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಗಿ ಕೃಷ್ಣ, ಕಾರ್ಯಾಧ್ಯಕ್ಷ ಶಫಿ, ಅಬೀದ್, ಸದಸ್ಯೆ ಬಿ.ಆರ್ ಸಿಂಧೂ ಹಾಗೂ ಕೊರಲಕೊಪ್ಪದ ಗ್ರಾಮಸ್ಥರು ಇದ್ದರು.