'ಬೆಂಗಳೂರಿಗೆ ಶರಾವತಿ ನದಿಯಿಂದ ನೀರು ತರುವ ಯೋಜನೆ ಇಲ್ಲ'
ಶಿವಮೊಗ್ಗ, ಮಾರ್ಚ್ 3: ಅರಬ್ಬಿ ಸಮುದ್ರ ಸೇರುತ್ತಿರುವ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಜೋಗದಲ್ಲಿ ಶುಕ್ರವಾರ ಶರವಾತಿ ಯೋಜನೆಯ 1,035 ಮೆಗಾವ್ಯಾಟ್ ನವೀಕೃತ ಶರತಾವತಿ ವಿದ್ಯುದಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಹಿರಿಯರು ಮಾಡಿರುವ ಈ ಘಟಕವನ್ನು ಹಾಗೂ ಇಲ್ಲಿನ ಪ್ರಕೃತಿ ಸಂಪನ್ಮೂಲವನ್ನು ಇಲ್ಲಿಯೇ ಸದ್ಬಳಕೆ ಮಾಡುವ ಚಿಂತನೆ ನಮ್ಮದು. ಮುಂದಿನ ವರ್ಷದಿಂದ ನಿಗಮದ ಫೌಂಡೇಶನ್ ದಿನವನ್ನು ರಾಜ್ಯದ ಬೇರೆ ಬೇರೆ ಕಡೆಯ ವಿದ್ಯುದಾಗಾರದಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.
ಬೆಂಗಳೂರಲ್ಲಿ ನೀರಿನ ಅಭಾವ: ಬಿಬಿಸಿ ವರದಿ ತಳ್ಳಿ ಹಾಕಿದ ಜಾರ್ಜ್
ಎಂತಹ ಪರಿಸ್ಥಿತಿಯಲ್ಲೂ ಈ ಬಾರಿ ರಾಜ್ಯಕ್ಕೆ ವಿದ್ಯುತ್ ಬರ ಬರುವುದಿಲ್ಲ. ವಿದ್ಯುತ್ ಸಮಸ್ಯೆ ಎದುರಿಸಲು ಎಲ್ಲಾ ರೀತಿಯಲ್ಲೂ ರಾಜ್ಯ ಸರ್ಕಾರ ಸಜ್ಜಾಗಿದೆ. ಕಳೆದ ಬಾರಿ ನಾವು ನಿರೀಕ್ಷೆ ಮಾಡಿದಷ್ಟು ಮಳೆ ಬಂದಿಲ್ಲ.
ಲಿಂಗನಮಕ್ಕಿ ಅಣೆಕಟ್ಟು ಭರ್ತಿಯಾಗಿರಲಿಲ್ಲ. ಆದರೂ ಶೇ.60 ರಷ್ಟು ನೀರನ್ನು ಸಂಗ್ರಹಿಸಿಟಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಬೇಕಾದ ವಿದ್ಯುತ್ ಉತ್ಪಾದನೆ ಮಾಡಿ ರಾಜ್ಯಕ್ಕೆ ಸರಬರಾಜು ಮಾಡಲಾಗುತ್ತದೆ. ಇದರ ಜತೆಗೆ 4.08ರೂ. ದರದಲ್ಲಿ ವಿದ್ಯುತ್ ಖರೀದಿಗೆ ಚಿಂತನೆ ನಡೆಸಲಾಗಿದೆ. ಡಿಸೆಂಬರ್ ನೊಳಗೆ ವಿದ್ಯುತ್ ಸ್ವಾವಲಂಬಿ ರಾಜ್ಯವಾಗಿ ಹೊರಹೊಮ್ಮೆಲಿ ಎಂದು ಹೇಳಿದ್ದಾರೆ.
ಎರಡು ಹೊಸ ಯೋಜನೆ: ಲಿಂಗನಮಕ್ಕಿ ಅಣೆಕಟ್ಟಿನ ತಳಕಳಲೆ ಡ್ಯಾಂ ಬಳಿ ಮತ್ತು ಶಿವನಸಮುದ್ರದಲ್ಲಿ 2 ಸಾವಿರ ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.