ಸರ್ಕಾರಿ ಆದೇಶ ಉಲ್ಲಂಘಿಸುತ್ತಿರುವ ಸಾಗರ ತಾಲ್ಲೂಕು ಆಡಳಿತ
ಶಿವಮೊಗ್ಗ, ಏಪ್ರಿಲ್ 19: ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜನರ ಸಹಕಾರ ಕೋರಿದ್ದು, ಸಾಗರ ತಾಲ್ಲೂಕಿನ ಜನರು ಹೆಚ್ಚಿನ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಆದರೆ ಸಾಗರ ತಾಲ್ಲೂಕು ಆಡಳಿತವು ಸರ್ಕಾರದ ಆದೇಶದಂತೆ ಅಗತ್ಯ ವಸ್ತುಗಳು, ದಿನಸಿ ಸಾಮಾನುಗಳು, ಹಣ್ಣು, ತರಕಾರಿಗಳನ್ನು ತೊಂದರೆ ಆಗದಂತೆ ಜನರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ.
ಕಳೆದ ಒಂದು ವಾರದಿಂದ ತರಕಾರಿ, ಹಣ್ಣು-ಹಂಪಲು ಜನರಿಗೆ ಸುಲಭವಾಗಿ ಸಿಗುವಂತೆ ಮಾಡಿರುವ ಸಾಗರ ತಾಲೂಕು ಆಡಳಿತದ ಆದೇಶ ಮಾರಕವಾಗಿದೆ. ಈ ಆದೇಶದಲ್ಲಿ ನಗರಸಭೆ ತರಕಾರಿ ಮಾರುಕಟ್ಟೆ ಸೇರಿದಂತೆ, ಬೀದಿ ಬದಿಯಲ್ಲಿ ಸಮೀಪದ ಹಳ್ಳಿಗಳಿಂದ ಬರುವ ಜನ ವ್ಯಾಪಾರ ಮಾಡುವಂತಿಲ್ಲ ಎಂದು ತಿಳಿಸಿದೆ.
ಎಲ್ಲಾ ತರಕಾರಿ ವ್ಯಾಪಾರ ಮಾಡುವವರು, ಹಣ್ಣು ಮಾರುವವರು ಸಾಗರ ನಗರದ ಬಡಾವಣೆಗಳಿಗೆ ಹೋಗಿ ಮಾರಾಟ ಮಾಡಲು ನಗರಸಭೆ ಆಡಳಿತಾಧಿಕಾರಿಯಾಗಿರುವ ಪ್ರಾಂತ್ಯಾಧಿಕಾರಿ ಆದೇಶಿಸಿದ್ದಾರೆ. ತಳ್ಳುವ ಗಾಡಿಗಳಲ್ಲಿ, ವಾಹನಗಳಲ್ಲಿ ಬಡಾವಣೆಗಳಿಗೆ ಹೋಗಿ ಮಾರಾಟ ಮಾಡಲು ತಿಳಿಸಿದ್ದಾರೆ.
ಈ ಆದೇಶ ತರಕಾರಿ ಮಾರುವವರಿಗೆ ಹಾಗೂ ತರಕಾರಿ ತೆಗೆದುಕೊಳ್ಳುವ ಗ್ರಾಹಕರಿಗೆ ಪೂರಕವಾಗಿವಾಗಿದೆ. ಸಾಗರ ಪಟ್ಟಣಕ್ಕೆ 150 ಕ್ಕಿಂತ ಹೆಚ್ಚು ತಳ್ಳುವ ಗಾಡಿಗಳು ಅವಶ್ಯಕತೆ ಇದೆ. ಆದರೆ ಸಾಗರದಲ್ಲಿ ಈ ಗಾಡಿಗಳೇ ಇಲ್ಲ ಎಂಬುದು ವಿಪರ್ಯಾಸ.
ಎಸಿ ಆದೇಶ ಪಾಲನೆ ಮಾಡಲು ಹೊರಟಿರುವ ನಗರಸಭೆ ಅಧಿಕಾರಿಗಳು, ಆದೇಶವಾಗಿ ಎರಡು ದಿನ ಆದರೂ ತರಕಾರಿ ಮಾರುವವರು ಕ್ರಮವಾಗಿ ಯಾವ ಯಾವ ಪ್ರದೇಶದಲ್ಲಿ ಹೋಗಿ ಮಾಡಬೇಕೆಂದು ಸೂಚಿಸಿಲ್ಲ. ನಗರ ವಿಶಾಲವಾಗಿದ್ದು, ಜನ ಸಂದಣಿ ಇರುವ ಪ್ರದೇಶಕ್ಕೆ ಮಾತ್ರ ಮಾರುವವರು ಹೋದರೆ, ಕಡಿಮೆ ಜನಸಂಖ್ಯೆ ಇರುವ ಬಡಾವಣೆಯವರು ಎಲ್ಲಿ ತೆಗೆದುಕೊಳ್ಳಬೇಕು? ಎಂಬ ಪ್ರಶ್ನೆ ಕಾಡುತ್ತಿದೆ.
ಸರ್ಕಾರ ರೈತರು ಬೆಳೆದ ತರಕಾರಿ ಇತರ ಬೆಳೆಗಳ ಮಾರಾಟಕ್ಕೆ ಯಾವುದೇ ಅಡ್ಡಿ ಆಗಬಾರದೆಂದು ಆದೇಶಿಸಿದೆ. ಇಂದು ನಗರ ಪೊಲೀಸ್ ಠಾಣೆ ಸರ್ಕಲ್ ಇತರ ಭಾಗಗಳಲ್ಲಿ ರೈತರನ್ನು ಎಬ್ಬಿಸಿ ಓಡಿಸಿರುವುದು ಸಾರ್ವಜನಿಕರು ಖಂಡಿಸಿದ್ದಾರೆ.
ರೈತರ ಮೇಲಿನ ದೌರ್ಜನ್ಯ ಅಮಾನವೀಯ ಹಾಗೂ ಕಾನೂನು ಬಾಹಿರ. ಪ್ರತಿನಿತ್ಯ ಹಣ್ಣಿನ ಅಂಗಡಿಗಳಲ್ಲಿ ಹಣ್ಣುಗಳು ಹೆಚ್ಚಿನ ವ್ಯಾಪಾರ ಆಗದೇ ಕೊಳೆಯುತ್ತಿವೆ. ಆ ಹಣ್ಣುಗಳನ್ನು ಹೊತ್ತು ಇಡೀ ಊರಿನಲ್ಲಿ ತಿರುಗಿ ಮಾರಾಟ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸುತ್ತಿದ್ದಾರೆ.
ಯಾವುದೇ ಸ್ಥಳೀಯ ಆಡಳಿತ ಆದೇಶ ಮಾಡುವಾಗ ಸ್ಥಳೀಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳಿಂದ ಮಾಹಿತಿ ಪಡೆಯಬೇಕು. ತರಕಾರಿ, ಹಣ್ಣುಗಳನ್ನು ಮಾರುವವರಿಗೆ ಲಾಕ್ ಡೌನ್ ಆದೇಶ ಉಲ್ಲಂಘನೆಯಾಗದ ರೀತಿಯಲ್ಲಿ ಮಾರಾಟ ಮಾಡಲು ಬೇಕಾದಷ್ಟು ಸಾಧ್ಯತೆಗಳು ಇದ್ದರೂ, ಜನರಿಗೆ ಪೂರಕವಾಗಿರದ ಎಸಿ ಆದೇಶ ಹೊರಡಿಸಿರುವುದು ಬಡ ರೈತರು, ವ್ಯಾಪಾರಿಗಳು, ಜನಸಾಮಾನ್ಯರು ಪ್ರತಿಭಟನೆ ಮಾಡುವಂತೆ ಪ್ರೇರೆಪಿಸಿದೆ.