ಯುವಕರ ಭವಿಷ್ಯ ಉಜ್ವಲಗೊಳಿಸುವುದೇ ಸರ್ಕಾರದ ಉದ್ದೇಶ ಎಂದ ಸಿಎಂ
ಶಿವಮೊಗ್ಗ, ಫೆಬ್ರವರಿ 24: ಶಿವಮೊಗ್ಗ ನಗರದಲ್ಲಿ ಕೌಶಲ ಕರ್ನಾಟಕ ಯೋಜನೆಯಡಿ ಎನ್ಈಎಸ್ ಮೈದಾನದಲ್ಲಿ ಆಯೋಜಿಸಿರುವ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಯುವಕರ ಭವಿಷ್ಯವನ್ನು ಉಜ್ವಲಗೊಳಿಸುವುದೇ ನಮ್ಮ ಸರ್ಕಾರದ ಉದ್ದೇಶ" ಎಂದರು.
ಈ ಸಂದರ್ಭ ಮಾತನಾಡಿದ ಅವರು, "ಈ ಹಿಂದೆ ಮುಖ್ಯಮಂತ್ರಿ ಆದಾಗ ಉದ್ಯೋಗ ಮೇಳ ಮಾಡುವ ಕೆಲಸ ಆರಂಭಿಸಿದ್ದೆ. ನಂತರ ಬಂದವರು ಉದ್ಯೋಗ ಮೇಳ ಆಯೋಜಿಸುವುದನ್ನು ಬಿಟ್ಟರು. ಈಗ ಮತ್ತೊಮ್ಮೆ ಜಿಲ್ಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ .ಈ ಮೂಲಕ ವಿದ್ಯಾವಂತ ಯುವಕರಿಗೆ, ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿಸುವ ಮಹತ್ವಕಾಂಕ್ಷೆಯ ಯೋಜನೆಯಿದೆ" ಎಂದರು.
ಇದರಿಂದ ಶಿವಮೊಗ್ಗದ ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳ ಯುವಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. "ವಿದ್ಯಾವಂತರು ಹೆಚ್ಚಾದಂತೆಲ್ಲಾ ನಿರುದ್ಯೋಗ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಸ್ವಂತ ಉದ್ಯೋಗ ಮಾಡುವವರಿಗೆ ಹಣಕಾಸಿನ ಸೌಲಭ್ಯ ಕೊಡುವ ಚಿಂತನೆ ಮಾಡಲಾಗುತ್ತಿದೆ. ಬೆಂಗಳೂರು ಬಿಟ್ಟು ಬೇರೆಡೆ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತಿದೆ. ಕೈಗಾರಿಕೋದ್ಯಮಿಗಳು ಇದರ ಲಾಭ ಪಡೆದು, ಉದ್ಯೋಗ ಸೃಷ್ಟಿಗೆ ಮುಂದಾಗಬೇಕು" ಎಂದು ಹೇಳಿದರು.