ಶಿವಮೊಗ್ಗ: "ಗಾಂಧಿ ಬಜಾರ್ ಬಣಗುಡಲು ಲಾಕ್ಡೌನ್ ಈಶ್ವರಪ್ಪ ಕಾರಣ''
ಶಿವಮೊಗ್ಗ, ಜೂನ್ 7: ""ಖಾಸಗಿಯವರಿಗೆ ಲಾಭ ಮಾಡಿಕೊಡಲು ರಾಜ್ಯ ಸರ್ಕಾರ ಲಸಿಕೆ ಕುರಿತು ಗೊಂದಲ ಸೃಷ್ಟಿಸಿರುವ ಅನುಮಾನ ಮೂಡುತ್ತಿದೆ'' ಎಂದು ಶಿವಮೊಗ್ಗ ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಬಿ ಪ್ರಸನ್ನ ಕುಮಾರ್, ""ಸರ್ಕಾರ ಲಸಿಕೆ ಕೊಡುವ ವಿಚಾರದಲ್ಲಿ ಗೊಂದಲ ಸೃಷ್ಟಿಸಿತು. ಈಗ ಖಾಸಗಿಯವರಿಗೆ ಲಸಿಕೆ ಪೂರೈಕೆ ಮಾಡಿ, ಸರ್ಕಾರ ತನ್ನ ಹೊಣೆ ಮರೆತಿದೆ. ಜನರು ಸಾಲ ಮಾಡಿಕೊಂಡು ಬಂದು ಲಸಿಕೆ ಹಾಕಿಸಿಕೊಳ್ಳುವಂತಾಗಿದೆ. ಖಾಸಗಿಯವರಿಗೆ ಲಾಭ ಮಾಡಿಕೊಡಲು ಮುಂದಾಗಿದೆ'' ಎಂದು ಆರೋಪಿಸಿದರು.
ಲಾಕ್ಡೌನ್ ಈಶ್ವರಪ್ಪ ಅವರಿಂದ ಸಂಕಷ್ಟ
ಸಚಿವ ಕೆ.ಎಸ್ ಈಶ್ವರಪ್ಪ ಅವರನ್ನು ಶಿವಮೊಗ್ಗದ ಜನರು ಲಾಕ್ಡೌನ್ ಈಶ್ವರಪ್ಪ ಅಂತಾ ಕರೆಯುವಂತಾಗಿದೆ. ಇವರ ಲಾಕ್ಡೌನ್ ನೀತಿಯಿಂದ ಗಾಂಧಿ ಬಜಾರ್ ಬಣಗುಡುವಂತಾಗಿದೆ ಎಂದು ಪ್ರಸನ್ನ ಕುಮಾರ್ ಆರೋಪಿಸಿದರು.
ಸಮಯ ಬದಲಾಯಿಸಿ.
ಬೆಳಗ್ಗೆ 6 ರಿಂದ 8 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಅಂತಾರೆ. ಆದರೆ ಅರ್ಧ ಗಂಟೆ ಮೊದಲೇ ಪೊಲೀಸರು ಲಾಠಿ ಹಿಡಿದು ಓಡಾಡುತ್ತಾರೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10 ಗಂಟೆವರೆಗೆ ಅವಕಾಶ ನೀಡಬೇಕು. ಕೃಷಿ ಚಟುವಟಿಕೆಗೆ ಅಗತ್ಯ ಇರುವ ಪರಿಕರಗಳನ್ನು ಕೊಳ್ಳಲು ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ನೀಡಬೇಕು ಎಂದರು.
ಮದುವೆಗಳಿಗೆ ಜಿಲ್ಲಾಡಳಿತ ಅವಕಾಶ ನೀಡುತ್ತದೆ. ಆದರೆ ಮದುವೆಗೆ ತಾಳಿ ಖರೀದಿಸಲು ಆಭರಣ ಮಳಿಗೆಗಳು, ಮಧುಮಕ್ಕಳ ಬಟ್ಟೆ ಖರೀದಿಗೆ ಅವಕಾಶ ನೀಡದಿರುವುದು ವಿಪರ್ಯಾಸ ಎಂದು ಮಾಜಿ ಶಾಸಕ ಪ್ರಸನ್ನ ಕುಮಾರ್ ಆರೋಪಿಸಿದರು.
ಕ್ರಷರ್ಗಷ್ಟೆ ಪರ್ಮಿಷನ್ ಕೊಡಿಸುತ್ತಾರೆ
ಲಾಕ್ಡೌನ್ ಈಶ್ವರಪ್ಪ ಅವರು ಬ್ಲಾಸ್ಟ್ ಮಾಡುವ ಕ್ರಷರ್ಗಳಿಗೆ ಅನುಮತಿ ಕೊಡಿಸುತ್ತಾರೆ. ಆದರೆ ವ್ಯಾಪಾರಕ್ಕೆ ಅನುಮತಿ ಕೊಡಿಸುವ ವಿಚಾರದಲ್ಲಿ ವಿಫಲರಾಗಿದ್ದಾರೆ ಎಂದು ಪ್ರಸನ್ನ ಕುಮಾರ್ ಗಂಭೀರವಾಗಿ ಆರೋಪಿಸಿದರು.