ನವೆಂಬರ್ ನಲ್ಲಿ ಹೊಸ ಪಕ್ಷ ಅಸ್ತಿತ್ವಕ್ಕೆ: ಅನುಪಮ ಶೆಣೈ
ಶಿವಮೊಗ್ಗ, ಅಕ್ಟೋಬರ್ 06 : ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಅವರು ಹೊಸ ರಾಜಕೀಯ ಪಕ್ಷ ಕಟ್ಟಲು ಮುಂದಾಗಿದ್ದು, ಇದೇ ನವೆಂಬರ್ ಮೊದಲ ವಾರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ.
ಈ ಬಗ್ಗೆ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ನೇತೃತ್ವದಲ್ಲಿ ಹೊಸ ಪಕ್ಷ ಕಟ್ಟುವ ಬಗ್ಗೆ ಮೂಡುಬಿದರೆಯಲ್ಲಿ ಈಗಾಗಲೇ ಹೇಳಿದ್ದು, ನವೆಂಬರ್ ಮೊದಲ ವಾರದಲ್ಲಿಯೇ ಹೊಸ ಪಕ್ಷಕ್ಕೆ ಹೆಸರು ಇಡಲಾಗುವುದು ಎಂದು ಅನುಪಮ ಶೆಣೈ ತಿಳಿಸಿದರು.
ನಾನು ಕೆಲಸ ಮಾಡುವ ಸಂದರ್ಭದಲ್ಲಿ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದರು. ಹಾಗಾಗಿ ರಾಜಕೀಯ ಪ್ರವೇಶ ಮಾಡಬೇಕಾಯಿತು. ಇದರ ಹಿನ್ನಲೆಯಲ್ಲಿ ರಾಜಕೀಯದಲ್ಲಿ ಪೊಲೀಸ್ ಶಕ್ತಿಯನ್ನು ಬಳಸಿ ಭ್ರಷ್ಟಾಚಾರವನ್ನ ನಿರ್ಮೂಲನೆ ಮಾಡಲು ಇಚ್ಛಿಸುತ್ತೇನೆ ಎಂದರು.
ರಾಜ್ಯದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಸಂವಿಧಾನವನ್ನು ಸಮರ್ಪಕವಾಗಿ ಎತ್ತಿಹಿಡಿದಿದ್ದಾರೆ. ಆದರೆ, ಸಮರ್ಪಕವಾಗಿ ಕಾರ್ಯಗತಗೊಳಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಪಕ್ಷದ ಸಂವಿಧಾನಕ್ಕೆ ಹೆಚ್ಚು ಒತ್ತುಕೊಟ್ಟು ಜನರಿಗೆ ಮತ್ತು ಸರ್ಕಾರಿ ನೌಕರರಿಗೆ ನೆಮ್ಮದಿ ಜೀವನ ನೀಡುವುದು ನಮ್ಮ ಮುಖ್ಯ ಗುರಿ ಎಂದು ತಿಳಿಸಿದರು.
ರಾಜಕೀಯ ಪಕ್ಷವಿರಲಿ, ಇಲ್ಲದಿರಲಿ ಸರ್ಕಾರ ನಡೆಯುತ್ತದೆ. ಆದರೆ, ಸರ್ಕಾರದಲ್ಲಿನ ನೌಕರರಿಗೆ ಸುಗಮವಾಗಿ ಕೆಲಸ ನಡೆಸಲು ಕೆಲವು ಡೋಂಗಿ ರಾಜಕೀಯ ಪಕ್ಷಗಳು ತಡೆಯುತ್ತಿದ್ದಾರೆ. ಅಂತವರ ವಿರುದ್ದ ನನ್ನ ಹೋರಾಟವೆಂದು ವಿವರಿಸಿದ ಅವರು ಯಾವುದೇ ರಾಜಕೀಯ ಪಕ್ಷಗಳ ವಿರುದ್ಧ ಹೋರಾಟ ನನ್ನದಲ್ಲವೆಂದರು.
ನನ್ನ ಪಕ್ಷದಲ್ಲಿ ಕೃಷಿ, ಆರೋಗ್ಯ, ಕಾನೂನು ಮತ್ತು ಸುವ್ಯವಸ್ಥೆ. ಸಾರಿಗೆ ಮತ್ತು ಶಿಕ್ಷಣದಲ್ಲಿರುವವರಿಗೆ ಪಕ್ಷದಿಂದ ಸ್ಪರ್ದಿಸಲು ಹೆಚ್ಚು ಒತ್ತುಕೊಡಲಿದ್ದೇವೆ ಎಂದರು
ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿರುವ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರಿಗೆ ಶುಭ ಹಾರೈಸಿದರು. ಅವರ ಹೋರಾಟವೂ ಸಹ ಭ್ರಷ್ಟಾಚಾರದ ವಿರುದ್ಧವಿದ್ದು, ನಮ್ಮ ಪಕ್ಷದ ಹೋರಾಟವೂ ಅದೆ ಆಗಿರುವುದರಿಂದ ಅವರು ನಮ್ಮ ಪಕ್ಷದಿಂದ ಸ್ಪರ್ದಿಸಲು ಇಚ್ಛಿಸಿದರೆ ಅವರಿಗೆ ಸ್ವಾಗತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಿಮಗೆ ಎಸ್.ಆರ್.ಹಿರಮಠ ಅವರು ತಮ್ಮ ಪಕ್ಷಕ್ಕೆ ಕರೆದರೆ ಹೋಗುವಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ನನ್ನದೇ ಆದ ಸಿದ್ದಾಂತವಿದೆ ಹಾಗಾಗಿ ನಾನು ಅವರ ಪಕ್ಷಕ್ಕೆ ಹೋಗುವುದಿಲ್ಲ.
ಅವರೊಂದಿಗೆ ನಾನು ಸಂಪರ್ಕಿಸಿಲ್ಲ. ಅವರೂ ಸಹ ಅವರು ನನ್ನೊಂದಿಗೆ ಮಾತನಾಡಿಲ್ಲ. ಸಂಪರ್ಕ ಸಾದ್ಯವಾದಲ್ಲಿ ನಮ್ಮ ಪಕ್ಷದ ಪ್ರತಿಪಾದನೆ ಮಂಡಿಸಲಿದ್ದೇನೆ. ಅವರಿಗೆ ಇಷ್ಟವಾದಲ್ಲಿ ಅವರು ಇಚ್ಚಿಸಿದರೆ ನಮ್ಮ ಪಕ್ಷ ಅವರನ್ನು ಸ್ವಾಗತಿಸಲಿದೆ.
ಬಳ್ಳಾರಿ ನನ್ನ ಕರ್ಮಭೂಮಿಯಾಗಿರುವುದರಿಂದ ಬಳ್ಳಾರಿ ಜಿಲ್ಲೆಯಿಂದ ನಾನು ಸ್ಪರ್ಧಿಸಲು ಇಚ್ಚಿಸುತ್ತೇನೆ. ಬಹಳ ರಾಜಕೀಯ ಪಕ್ಷ ಭಾರತದ ಸಂವಿದಾನದಲ್ಲಿದೆ. ಇದು ಒಂದು ಅದ್ಭುತವಾದ ಸಂವಿಧಾನ. ಹಾಗಾಗಿ ರಾಜಕೀಯ ಪಕ್ಷಗಳು ಹೆಚ್ಚು ಇರಬೇಕು ಎಂದರು.