ವಿನಯ್ ಕುಲಕರ್ಣಿ ಬಂಧನದ ಹಿಂದೆ ರಾಜಕೀಯ ಒತ್ತಡ: ಸಿದ್ದರಾಮಯ್ಯ
ಶಿವಮೊಗ್ಗ, ನವೆಂಬರ್ 8: ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧಿಸಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಒತ್ತಡವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ""ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತವಾಗಿದೆ. ಅವರ ಬಂಧನದ ಹಿಂದೆ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಡವಿದ್ದು, ಅವರ ವಿರುದ್ಧ ವಿನಯ್ ಕುಲಕರ್ಣಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ ಬಂಧನಕ್ಕೆ ಕಾರಣವೆಂದು'' ತಿಳಿಸಿದರು.
ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರದಿಂದ ಸಕಲ ನೆರವು: ಮುಖ್ಯಮಂತ್ರಿ ಭರವಸೆ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಹಿಂದೆ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದ ವೇಳೆ ವಿನಯ್ ಕುಲಕರ್ಣಿ ಹೆಸರಿರಲಿಲ್ಲ. ಆದರೆ ಸಿಬಿಐನವರು ತನಿಖೆ ನಡೆಸಿದಾಗ ಕುಲಕರ್ಣಿ ಹೆಸರು ಕೇಳಿ ಬಂದಿದೆ. ಇದೊಂದು ಬೆದರಿಕೆ ತಂತ್ರವಾಗಿದ್ದು, ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದರು.
ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದು, ಸಿ ವೋಟರ್ ಸಮೀಕ್ಷೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ನಾನು ಎರಡೂ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದೇನೆ. ಈ ವೇಳೆ ಜನರ ಒಲವು ಕಾಂಗ್ರೆಸ್ ಪರ ಇದ್ದಿದ್ದನ್ನು ಗಮನಿಸಿದ್ದೇನೆ. ನಾವು ಜನರ ಬಳಿಗೆ ಹೋಗಿ ಪ್ರಚಾರ ನಡೆಸಿದ್ದೇವೆ. ಆದರೆ ಬಿಜೆಪಿಯವರು ಪ್ರಚಾರಕ್ಕಿಂತಲೂ ದುಡ್ಡು ನೀಡಿ ಚುನಾವಣೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಹಾರ ಚುನಾವಣೆ ಎಲ್ಲರೂ ಊಹಿಸಿದ್ದಂತೆಯೇ ಆಗಲಿದೆ. ಬಿಹಾರದ ನಾಗರೀಕರು, ಯುವಕರು ಈ ಬಾರಿ ಮೋದಿ ಸರಕಾರದ ವಿರುದ್ಧ ಇದ್ದಾರೆ. ಬಿಹಾರದ ಜನ ಬದಲಾವಣೆ ಬಯಸಿದ್ದಾರೆ. ಯುವಕರು ಮೋದಿ ಸರಕಾರದ ವಿರುದ್ಧ ಭ್ರಮನಿರಸಗೊಂಡಿದ್ದಾರೆ ಎಂದರು.