ಜಿಂಕೆ ಮಾಂಸ ಮಾರಾಟ: ಅರಣ್ಯಾಧಿಕಾರಿಗಳ ದಾಳಿ, ಬಂಧನ
ಶಿವಮೊಗ್ಗ, ಏಪ್ರಿಲ್ 05: ಎರಡು ಜಿಂಕೆಗಳನ್ನು ಭೇಟೆಯಾಡಿ, ಅದರ ಮಾಂಸ ಮಾರುತ್ತಿದ್ದ ಓರ್ವ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇನ್ನು ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಕೆಂಪಿನಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದ್ದು, ಎರಡು ಜಿಂಕೆಗಳನ್ನು ಭೇಟೆಯಾಡಿ ಅದರ ಮಾಂಸ ಮಾರಾಟ ಮಾಡಿದ್ದ ಸಂದರ್ಭದಲ್ಲಿ, ಖಚಿತ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಒರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ಎರಡು ಜಿಂಕೆಗಳ ತಲೆಗಳು, ಎರಡು ಚರ್ಮ, ಎಂಟು ಕಾಲುಗಳು ಪತ್ತೆಯಾಗಿವೆ.
ಜೊತೆಗೆ ಕೆಂಪಿನಕೊಪ್ಪದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ, ಇನ್ನೂ ನಾಲ್ಕು ಜಿಂಕೆಗಳ ಚರ್ಮ, 8 ಜಿಂಕೆಗಳ ಕೊಂಬುಗಳು ಹಾಗೂ ಒಂದು ಕಾಡುಕೋಣದ ಕೊಂಬು ಪತ್ತೆಯಾಗಿದೆ.
ದಾಳಿ ವೇಳೆ ಜಮೀರ್ ಅಹಮದ್ ಎಂಬ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಹುವೇದ್ ಅಹಮದ್ ಸೇರಿದಂತೆ ಚಂದ್ರು, ರಾಘು, ಸಂತೋಷ್ ಪರಾರಿಯಾಗಿದ್ದಾರೆ.
ಹುವೇದ್ ಅಹಮದ್ ಎಂಬುವವರ ಫಾರ್ಮ್ ಹೌಸ್ ನಲ್ಲಿ ಜಿಂಕೆ ಚರ್ಮಗಳು, ಕೊಂಬು ಹಾಗೂ ಕಾಡುಕೋಣದ ಕೊಂಬು ಪತ್ತೆಯಾಗಿವೆ. ದಾಳಿಯಲ್ಲಿ ಡಿಎಫ್ಒ ಶಂಕರ್, ಎಸಿಎಫ್ ಬಾಲಚಂದ್ರ, ಆರ್ಎಫ್ಒ ಗಳಾದ ಸಂಜಯ್, ರವಿ ಹಾಗೂ ಸಿಬ್ಬಂದಿ ಇದ್ದರು. ಆಯನೂರು ವಲಯ ಅರಣ್ಯ ಕಚೇರಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.