ಶಿವಮೊಗ್ಗ: 36 ಮಂಗಗಳಿಗೆ ವಿಷ ಹಾಕಿ ಕೊಂದ ಐವರ ಬಂಧನ
ಶಿವಮೊಗ್ಗ, ಅಕ್ಟೋಬರ್ 1: 36 ಮಂಗಗಳಿಗೆ ವಿಷ ಹಾಕಿ ಕೊಂದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾಸ್ಪಡಿ ಬಳಿ ನಡೆದಿದೆ.
ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಲ್ಯಾವಿಗೆರೆಯಿಂದ 36 ಮಂಗಗಳನ್ನು ಕೊಂದು ಸಾಗರದ ನೇದರವಳ್ಳಿ ಬಳಿಯ ಕಾಡಿನಲ್ಲಿ ಮಂಗಗಳನ್ನು ಬಿಸಾಡಲು ಬಂದಾಗ ಅರಣ್ಯ ಇಲಾಖೆಯವರು ಐದು ಜನರನ್ನು ಬಂಧಿಸಿದ್ದಾರೆ.
ಸಾಗರ ತಾಲ್ಲೂಕು ಲ್ಯಾವಿಗೆರೆಯ ಅಭಿಷೇಕ್, ಲಂಬೂದರ್, ತ್ಯಾಗರ್ತಿಯ ದಸ್ತಗಿರ್, ವಿಶ್ವನಾಥ್ ಹಾಗೂ ದಾವಣಗೆರೆಯ ಸಂಜೀವ್ ಬಂಧಿತ ಆರೋಪಿಗಳಾಗಿದ್ದಾರೆ.
ಈ ಎಲ್ಲಾ ಆರೋಪಿಗಳು ಒಂದು ಟಾಟಾ ಏಸ್ ನಲ್ಲಿ ಸತ್ತ 36 ಮಂಗಗಳನ್ನು ಎಸೆಯಲು ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ವಿಚಾರಿಸಿದ್ದಾರೆ. ಅರಣ್ಯ ಸಿಬ್ಬಂದಿಯ ಪ್ರಶ್ನೆಗೆ ಉತ್ತರಿಲಾಗದೆ ಈ ಐವರು ಸಿಕ್ಕಿಬಿದ್ದಿದ್ದಾರೆ. ನಂತರ ಐವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ವಿಷ ಹಾಕಿ ಕೊಂದ ಪ್ರಕರಣ ಬೆಳಕಿಗೆ ಬಂದಿದೆ. ತಾವು ಬೆಳೆದ ಬೆಳೆಗಳಿಗೆ ದಾಳಿ ಮಾಡಿ ನಾಶ ಮಾಡುತ್ತಿದ್ದವು ಎಂಬ ಕಾರಣಕ್ಕೆ ಮಂಗಗಳನ್ನು ಕೊಂದಿರುವುದಾಗಿ ತಿಳಿದುಬಂದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲಾ ಮಂಗಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿ ರಾಷ್ಟ್ರೀಯ ಹೆದ್ದಾರಿ 206ರ ಸಮೀಪ ಸಾಮೂಹಿಕ ಅಂತ್ಯಕ್ರಿಯೆಯನ್ನು ನಡೆಸಿದ್ದಾರೆ.