ಶಿವಮೊಗ್ಗದಲ್ಲಿ ದೀಪಾವಳಿ ಪಟಾಕಿ ಮಾರಾಟ ಶುರು: ಎಷ್ಟಿದೆ ರೇಟು?
ಶಿವಮೊಗ್ಗ, ನವೆಂಬರ್ 2: ದೀಪಾವಳಿ ಹಿನ್ನೆಲೆ ಶಿವಮೊಗ್ಗದಲ್ಲಿ ಪಟಾಕಿ ಮಾರಾಟ ಆರಂಭವಾಗಿದೆ. ನಗರದ ಎರಡು ಕಡೆಯಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಬಗೆಬಗೆ ಪಟಾಕಿಗಳು ಮಾರುಕಟ್ಟ್ಟೆಗೆ ಬಂದಿವೆ. ಆದರೆ ಪಟ್ರೋಲ್, ಡಿಸೇಲ್ ದರ ಏರಿಕೆಯಿಂದಾಗಿ ಪಟಾಕಿಗಳ ಬೆಲೆಯು ತುಸು ಹೆಚ್ಚಳವಾಗಿದೆ.
ಶಿವಮೊಗ್ಗದ ನೆಹರೂ ಕ್ರೀಡಾಂಗಣ ಮತ್ತು ಸೈನ್ಸ್ ಮೈದಾನದಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಬಗೆ ಬಗೆ ಪಟಾಕಿಗಳನ್ನು ಮಳಿಗೆಗಳಲ್ಲಿ ಇರಿಸಲಾಗಿದೆ.
ಗ್ರೀನ್ ಪಟಾಕಿ ಲೇಬಲ್
ವಾಯು ಮಾಲಿನ್ಯ ತಡೆಗಟ್ಟುವ ಸಲುವಾಗಿ ಹಸಿರು ಪಟಾಕಿ ಮಾರಾಟ ಮಾಡುವಂತೆ ಸರ್ಕಾರ ಸೂಚಿಸಿದೆ. ಕಳೆದ ವರ್ಷ ಹಬ್ಬಕ್ಕೆ ಒಂದೆರಡು ದಿನ ಮೊದಲು ಹಸಿರು ಪಟಾಕಿ ಮಾರಾಟ ಮಾಡುವಂತೆ ಸರ್ಕಾರ ಸೂಚಿಸಿದ್ದರಿಂದ, ವ್ಯಾಪಾರಿಗಳು ನಷ್ಟ ಅನುಭವಿಸಿದ್ದರು. ಆದ್ದರಿಂದ ಈ ಭಾರಿ ಸಂಪೂರ್ಣ ಹಸಿರು ಪಟಾಕಿಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಗ್ರಾಹಕರು ಕೂಡ ಹಸಿರು ಪಟಾಕಿಯನ್ನೇ ಕೇಳಿ ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಬಗೆ ಬಗೆ ಪಟಾಕಿ, ರೇಟು ದುಬಾರಿ
ಈ ಬಾರಿಯೂ ಹತ್ತಾರು ವೆರೈಟಿ ಪಟಾಕಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಮಕ್ಕಳು ಇಷ್ಟಪಡುವ ವಿವಿಧ ಪಟಾಕಿಗಳಿಗೆ ಸ್ವಲ್ಪ ಡಿಮಾಂಡ್ ಇದೆ. ಬಗೆಬಗೆಯ ಪಿಸ್ತೂಲುಗಳನ್ನು ಇರಿಸಲಾಗಿದ್ದು, ಮಕ್ಕಳ ಕಣ್ಸೆಳೆಯಲಿವೆ. ಇನ್ನು, ಕಳೆದ ಬಾರಿಗಿಂತಲೂ ಈ ಬಾರಿ ಪಟಾಕಿ ಬೆಲೆ ಸ್ವಲ್ಪ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಶೇ.10ರಷ್ಟು ದರ ಏರಿಕೆಯಾಗಿರುವ ಕುರಿತು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಮಾರಾಟಗಾರರು ಕಡಿಮೆ, ಗ್ರಾಹಕರು ಇಳಿಮುಖ
ಪೆಟ್ರೋಲ್, ಡಿಸೇಲ್ ದರ ಹೆಚ್ಚಳದ ಬಿಸಿ ಪಟಾಕಿಗೂ ತಟ್ಟಿದೆ. ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ಪಟಾಕಿ ತರಿಸಲಾಗಿದೆ. ಡಿಸೇಲ್ ದರದ ಏರಿಕೆಯಿಂದಾಗಿ ಪಟಾಕಿ ಸಾಗಣೆ ವೆಚ್ಚ ದುಬಾರಿಯಾಗಿದೆ. ಇದು ಕೂಡ ಗ್ರಾಹಕರ ಜೇಬು ಸುಡಲಿದೆ. ಕೋವಿಡ್ ಮತ್ತು ಲಾಕ್ ಡೌನ್'ನಿಂದಾಗಿ ಪಟಾಕಿ ಉದ್ಯಮದ ಮೇಲೆ ಭಾರಿ ಪೆಟ್ಟು ಬಿದ್ದಿದೆ. ಪಟಾಕಿ ಖರೀದಿ ಮಾಡುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಇದರ ಪರಿಣಾಮ ಶಿವಮೊಗ್ಗದಲ್ಲಿ ಪಟಾಕಿ ಮಾರಾಟಗಾರರ ಸಂಖ್ಯೆಯು ಕುಸಿತ ಕಾಣುತ್ತಿದೆ. ಈ ಭಾರಿ ನೆಹರೂ ಸ್ಟೇಡಿಯಂನಲ್ಲಿ 11 ಮಳಿಗೆಗಳು ಮಾತ್ರ ಇದ್ದಾವೆ. ಕಳೆದ ವರ್ಷ ಸುಮಾರು 15 ಮಳಿಗೆಗಳಿದ್ದವು. ಗ್ರಾಹಕರ ಸಂಖ್ಯೆಯು ಇಳಿಮುಖವಾಗಿದೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆಯಂತೆ ಗ್ರಾಹಕರು ಪಟಾಕಿ ಖರೀದಿಗೆ ಬರುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸುರಕ್ಷತಾ ಕ್ರಮಗಳು ಹೆಚ್ಚಳಕ್ಕೆ ಆಗ್ರಹ
ಪಟಾಕಿ ಮಳಿಗೆ ಬಾಡಿಗೆ ಪಡೆಯಲು ಮಹಾನಗರ ಪಾಲಿಕಗೆ ನಿಗದಿತ ಶುಲ್ಕ ಪಾವತಿಸಬೇಕು. ಆ ಬಳಿಕ ಸುರಕ್ಷತ ಕ್ರಮಗಳನ್ನು ಅನುಸರಿಸಿ ಮಳಿಗೆಗಳನ್ನು ಒದಗಿಸಲಾಗುತ್ತದೆ. ಅಗ್ನಿ ಅವಘಡ ಸಂಭವಿಸಿದರೆ ಬೆಂಕಿ ನಿಯಂತ್ರಿಸಲು ಪ್ರತಿ ಮಳಿಗೆಯ ಮುಂದೆ ನೀರಿನ ಡ್ರಮ್ ಇಡಲಾಗಿದೆ. ಒಂದು ಬಕೆಟ್'ನಲ್ಲಿ ಮರಳು ಮತ್ತು ನೀರು ಇಡಲಾಗಿದೆ. ಆದರೆ ಪ್ರತ್ಯೇಕವಾಗಿ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಕೆಲವು ವ್ಯಾಪಾರಿಗಳು ಆಗ್ರಹಿಸಿದ್ದಾರೆ. ವಿದ್ಯುತ್ ದೀಪದ ಸಂಪರ್ಕವು ಕಡಿಮೆ ಎಂಬ ಆರೋಪವು ಕೇಳಿ ಬಂದಿವೆ.
ದೀಪಾವಳಿ ಸಮೀಪದಲ್ಲಿದ್ದರೂ ಜನರು ಪಟಾಕಿ ಖರೀದಿಗೆ ನಿರಾಸಕ್ತಿ ತೋರಿದ್ದಾರೆ. ಇದು ವ್ಯಾಪಾರಿಗಳನ್ನು ಚಿಂತೆಗೀಡು ಮಾಡಿದೆ. ಬುಧವಾರದಿಂದ ಪಟಾಕಿ ಖರೀದಿ ಬಿರುಸು ಪಡೆಯುವ ಸಾದ್ಯತೆ ಇದೆ.