ಚಿತ್ರಗಳು : ಶರಾವತಿ ವಿದ್ಯುದಾಗಾರಕ್ಕೆ ಡಿಕೆ ಶಿವಕುಮಾರ್ ಭೇಟಿ
ಶಿವಮೊಗ್ಗ, ಫೆಬ್ರವರಿ 20 : ಅಗ್ನಿ ಅವಘಡದಿಂದ ಹಾನಿಯಾಗಿರುವ ಜೋಗ ಸಮೀಪದ ಶರಾವತಿ ವಿದ್ಯುದಾಗಾರ ಮತ್ತೆ ವಿದ್ಯುತ್ ಉತ್ಪಾದನೆ ಮಾಡಲು ಹಲವು ತಿಂಗಳುಗಳು ಬೇಕಾಗಿವೆ. ಗುರುವಾರ ವಿದ್ಯುದಾಗಾರಕ್ಕೆ ತಗುಲಿದ ಬೆಂಕಿಯಿಂದಾಗಿ ಸುಮಾರು 50 ರಿಂದ 60 ಕೋಟಿ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಫೆ.18ರ ಗುರುವಾರ ಸಂಜೆ ವಿದ್ಯುದಾಗಾರದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಮೂವರು ಇಂಜಿನಿಯರ್ ಸೇರಿದಂತೆ 20 ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಯಿತು. ಆದ್ದರಿಂದ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, 10 ಘಟಕಗಳ ವಿದ್ಯುತ್ ವಿತರಣಾ ಕೇಬಲ್ ಜಾಲ ಸುಟ್ಟು ಭಸ್ಮವಾಗಿದ್ದು, ದುರಸ್ತಿಗೆ ಕೆಲವು ತಿಂಗಳುಗಳು ಬೇಕಾಗಿವೆ. [ಶರಾವತಿ ವಿದ್ಯುದಾಗಾರದಲ್ಲಿ ಬೆಂಕಿ, ವಿಡಿಯೋ ನೋಡಿ]
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಶಾಸಕ ಕಾಗೋಡು ತಿಮ್ಮಪ್ಪ ಅವರು ಶುಕ್ರವಾರ ವಿದ್ಯುದಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 'ಶರಾವತಿ ವಿದ್ಯುದಾಗಾರದಲ್ಲಿ 1,035 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದ್ದು, ಕೊರತೆ ನೀಗಿಸಲು ಪರ್ಯಾಯ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು. [ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]
ವಿದ್ಯುಗಾರಾರಕ್ಕೆ ಬೆಂಕಿ ಬಿದ್ದ ವೇಳೆ ನಿಯಂತ್ರಣ ಕೊಠಡಿಯಲ್ಲಿ ಸಿಲುಕಿದ್ದ ಇಂಜಿನಿಯರ್ಗಳನ್ನು ರಕ್ಷಣೆ ಮಾಡಿದ ಗುತ್ತಿಗೆ ಕಾರ್ಮಿಕರಿಗೆ 1 ಲಕ್ಷ ನಗದು ಬಹುಮಾನವನ್ನು ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ ಮತ್ತು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದ್ದಾರೆ. ಸಚಿವರ ಭೇಟಿ ವಿವರಗಳು ಚಿತ್ರಗಳಲ್ಲಿ.....
ವಿದ್ಯುತ್ ಕೊರತೆಯಾಗದಂತೆ ಕ್ರಮ
ಶರಾವತಿ ವಿದ್ಯುದಾಗಾರದಲ್ಲಿ ಉತ್ಪಾದನೆ ಸ್ಥಗಿತಗೊಂಡಿದ್ದರೂ ಲಿಂಗನಮಕ್ಕಿ ಜಲಾಶಯದ ನೀರನ್ನು, ಮಹಾತ್ಮ ಗಾಂಧಿ, ಗೇರುಸೊಪ್ಪ ಹಾಗೂ ಲಿಂಗನಮಕ್ಕಿ ವಿದ್ಯುದಾಗಾರಗಳಿಗೆ ಹರಿಸಿ, 434 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ವಿದ್ಯುತ್ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
50 ರಿಂದ 100 ಕೋಟಿ ನಷ್ಟ
ಗುರುವಾರ ಸಂಜೆ ನಡೆದ ಅಗ್ನಿ ಅವಘಡದಿಂದ ಸುಮಾರು 50 ರಿಂದ 100 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ವಿದ್ಯುದಾಗಾರದ ಎರಡನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ನಿಯಂತ್ರಣ ಕೊಠಡಿ ಹಾಗೂ ಕೇಬಲ್ ಜಾಲ ಸುಟ್ಟು ಭಸ್ಮವಾಗಿದೆ. ಬೆಂಕಿಯ ಝಳದಿಂದಾಗಿ ಮೂರನೇ ಮಹಡಿಗೂ ಹಾನಿ ಉಂಟಾಗಿದೆ.
ಕೇಂದ್ರದ ಆಧುನೀಕರಣ
'ಸುಟ್ಟು ಭಸ್ಮವಾಗಿರುವ ಕೇಬಲ್ ಜಾಲವನ್ನು ದುರಸ್ತಿ ಮಾಡುವ ಜೊತೆಗೆ ಭವಿಷ್ಯದಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ಕೇಂದ್ರವನ್ನು ಆಧುನೀಕರಣ ಮಾಡಲಾಗುತ್ತದೆ' ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. '1964ರಲ್ಲಿ ಆರಂಭಗೊಂಡ ಘಟಕಕ್ಕೆ 50 ವರ್ಷ ತುಂಬಿದೆ. ಆದ್ದರಿಂದ ಕೇಬಲ್ ಜಾಲ, ನಿಯಂತ್ರಣ ಕೊಠಡಿ ಪುನರ್ ನಿರ್ಮಾಣ ಮಾಡುವ ಜೊತೆಗೆ ಘಟಕ ಆಧುನೀಕರಣಗೊಳಿಸುವ ಚಿಂತನೆ ನಡೆದಿದೆ' ಎಂದು ತಿಳಿಸಿದ್ದಾರೆ.
ವರದಿ ನೀಡಲು ಸಮಿತಿ ರಚನೆ
ವಿದ್ಯುದಾಗಾರದಲ್ಲಿ ನಡೆದ ಅಗ್ನಿ ಅವಘಡದ ಬಗ್ಗೆ ತನಿಖೆ ನಡೆಸಲು ನಿವೃತ್ತ ತಾಂತ್ರಿಕ ಅಧಿಕಾರಿಗಳನ್ನು ಒಳಗೊಂಡ 6 ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಈ ಸಮಿತಿ ಆಗಿರುವ ನಷ್ಟ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಗಳನ್ನು ನೀಡಲಿದೆ.
ಕಾರ್ಮಿಕರಿಗೆ ನಗದು ಬಹುಮಾನ
ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ನಿಯಂತ್ರಣ ಕೊಠಡಿಯಲ್ಲಿ ಸಿಲುಕಿದ್ದ ಇಂಜಿನಿಯರ್ಗಳಾದ ಕೃಷ್ಣಮೂರ್ತಿ ಭಟ್, ಚಾಲಚಂದ್ರ ಬೆನ್ನೂರು, ಜಾಯ್ಲಿನ್ ಅವರನ್ನು ರಕ್ಷಣೆ ಮಾಡಿದ ಗುತ್ತಿಗೆ ಕಾರ್ಮಿಕರಾದ ರಾಮು, ಮುಕ್ತಿಯಾರ್, ಶಮಿಉಲ್ಲಾ ಮತ್ತು ಚಿದಂಬರ ಜೈನ್ ಅವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಸಚಿವರು ಘೋಷಣೆ ಮಾಡಿದ್ದಾರೆ. ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದ್ದಾರೆ.
ಗುರುವಾರ ಬೆಂಕಿ ಬಿದ್ದಿತ್ತು
ಫೆ.18ರ ಗುರುವಾರ ಸಂಜೆ 4.30ರ ಸುಮಾರಿಗೆ 220 ಕೆ.ವಿ. ಸಾಮರ್ಥ್ಯದ ಶರಾವತಿ ಲೈನ್-2ರಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿತ್ತು. ಟರ್ಬೈನ್, ವಿದ್ಯುತ್ ಪರಿವರ್ತಕಗಳಿಗೆ ಬೆಂಕಿಯಿಂದಾಗಿ ಯಾವುದೇ ಹಾನಿ ಉಂಟಾಗಿಲ್ಲ. ಆದರೆ, ಕೇಬಲ್ ಜಾಲ ಸುಟ್ಟು ಭಸ್ಮವಾಗಿದೆ.