ನೇರ ಮಾರುಕಟ್ಟೆ; ಲಾಕ್ ಡೌನ್ ನಡುವೆ ಲಾಭ ಕಂಡ ರೈತ
ಶಿವಮೊಗ್ಗ, ಏಪ್ರಿಲ್ 21 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ತರಕಾರಿ, ಹಣ್ಣುಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಾಕ್ ಡೌನ್ ನಡುವೇಯೇ ತಾನು ಬೆಳೆದ ತರಕಾರಿಗಳನ್ನು ನೇರವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಿ ಶಿಕಾರಿಪುರ ತಾಲೂಕಿನ ಸಹಸ್ರವಳ್ಳಿ ಗ್ರಾಮದ ರೈತ ದುರ್ಗಪ್ಪ ಅಂಗಡಿ ಲಾಭ ಪಡೆಯುತ್ತಿದ್ದಾರೆ.
ಅಪಾರ್ಟ್ಮೆಂಟ್ಗೆ ಬಂತು ಹಣ್ಣು, ತರಕಾರಿ; ರೈತರ ಸಂಕಷ್ಟ ದೂರ
ದುರ್ಗಪ್ಪ ಅಂಗಡಿ ಕಳೆದ ಕೆಲವು ವರ್ಷಗಳಿಂದ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. 2 ಎಕರೆ ಪ್ರದೇಶದಲ್ಲಿ ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಕೃಷಿ ಹೊಂಡ, ಎರೆಹುಳುಗೊಬ್ಬರ ತಯಾರಿಕೆ ಘಟಕ ಸ್ಥಾಪಿಸಿದ್ದಾರೆ.
ಲಾಕ್ ಡೌನ್; ದ್ರಾಕ್ಷಿ ಬೆಳೆದ ಕೊಪ್ಪಳದ ರೈತ ಎಲ್ಲರಿಗೂ ಮಾದರಿ
ತೋಟಗಾರಿಕೆ ಬೆಳೆಗಳಾದ ಬಾಳೆ ಮತ್ತು ಅಡಿಕೆಯ ಮಧ್ಯೆ ಅಂತರ ಬೆಳೆಯಾಗಿ ತೊಂಡೆಕಾಯಿ, ನುಗ್ಗೆಕಾಯಿ, ಸೌತೆಕಾಯಿ, ಟೊಮ್ಯಾಟೋ, ಬದನೆಕಾಯಿ ಮತ್ತು ಬೀನ್ಸ್ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಆದರೆ, ಈಗ ಲಾಕ್ ಡೌನ್ ಸಮಯದಲ್ಲಿ ಮಾರುಕಟ್ಟೆ ಕೊರತೆ ಉಂಟಾಗಿತ್ತು.
ಕೊರೊನಾ ಲಾಕ್ ಡೌನ್; ಸಂಕಷ್ಟಕ್ಕೆ ಸಿಲುಕಿದ ಮಾವು ಬೆಳೆದ ರೈತ
ಧೈರ್ಯ ತುಂಬಿದ ತಜ್ಞರು
ಲಾಕ್ ಡೌನ್ ಅವಧಿಯಲ್ಲಿ ತರಕಾರಿಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ದುರ್ಗಪ್ಪ ಅಂಗಡಿ ಕಂಗಾಲಾಗಿದ್ದರು. ತರಕಾರಿ ಕೊಯ್ಲಿಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಸ್ಥಳೀಯ ಮಾರುಕಟ್ಟೆಯನ್ನು ಬಳಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿ ಧೈರ್ಯ ತುಂಬುವ ಕೆಲಸವನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಬಿ.ಸಿ.ಹನುಮಂತಸ್ವಾಮಿ ಮಾಡಿದರು.
ಮನೆ-ಮನೆಗೆ ಮಾರಾಟ
ದುರ್ಗಪ್ಪ ಅಂಗಡಿ ಪರಿಚಯಸ್ತ ಹಾಗೂ ಆರೋಗ್ಯವಂತ ಇಬ್ಬರು ಕೃಷಿ ಕಾರ್ಮಿಕರನ್ನು ನೇಮಿಸಿಕೊಂಡು ತರಕಾರಿ ಕೊಯ್ಲು ಮಾಡಿದರು. ತರಕಾರಿಗಳನ್ನು ಸಾಗಿಸುವ ವಾಹನ, ಗೋಣಿಚೀಲ ಮತ್ತು ಉಪಯೋಗಿಸುವ ವಸ್ತುಗಳನ್ನು ಸೋಂಕು ನಿವಾರಕ ರಾಸಾಯನಿಕಗಳಿಂದ ಶುದ್ಧಗೊಳಿಸಿಕೊಂಡು ತರಕಾರಿಗಳನ್ನು ಸಂಗ್ರಹಣೆ ಮಾಡಿಕೊಂಡರು. ದೂರದ ಗ್ರಾಮಗಳಿಗೆ ಸಾಗಾಟಕ್ಕೆ ಅವಕಾಶ ಇಲ್ಲದ ಕಾರಣ ತಾವೇ ಖುದ್ದು ತರಕಾರಿಗಳನ್ನು ಸ್ಥಳೀಯವಾಗಿ ಮನೆ ಮನೆಗೆ ಹೋಗಿ ಮಾರಾಟ ಮಾಡಿದ್ದಾರೆ.
54 ಸಾವಿರ ಆದಾಯ ಬಂದಿದೆ
ನೇರ ಮಾರುಕಟ್ಟೆ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರೈತ ಉತ್ಪಾದಕರ ಸಂಘ ಹಾಗೂ ಹಾಪ್ಕಾಮ್ಸ್ಗಳ ಮುಖಾಂತರ ಜೊತೆಗೆ ಸ್ಥಳೀಯವಾಗಿಯೇ ಮಾರುಕಟ್ಟೆ ವ್ಯವಸ್ಥೆ ಕಂಡುಕೊಂಡ ಇವರು 20 ರೂ.ನಂತೆ 20 ಕ್ವಿಂಟಾಲ್ ತೊಂಡೆಕಾಯಿ, 25 ರೂ.ನಂತೆ 5 ಕ್ವಿಂಟಾಲ್ ನುಗ್ಗೆಕಾಯಿ, 20 ರೂ.ನಂತೆ 6 ಕ್ವಿಂಟಾಲ್ ಟೊಮ್ಯಾಟೊ, 30 ರೂ.ನಂತೆ 10 ಕ್ವಿಂಟಾಲ್ ಬೀನ್ಸ್ ಮಾರಾಟ ಮಾಡಿರುತ್ತಾರೆ. ಇದರಿಂದ ಒಟ್ಟು 54, 500 ರೂಪಾಯಿ ಆದಾಯ ಪಡೆದಿದ್ದಾರೆ.
ಹಾಕಿದ ಬಂಡವಾಳ ಬಂದಿದೆ
ಲಾಕ್ ಡೌನ್ ಮಧ್ಯೆಯೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ವ್ಯಾಪ್ತಿಯಲ್ಲಿ ಬರುವ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ಮಾಹಿತಿ ಪಡೆದು ಮಾರಾಟ ಮಾಡಲು ಸೂಕ್ತ ಮತ್ತು ಪರ್ಯಾಯ ದಾರಿಯ ಬಗ್ಗೆ ಚಿಂತಿಸದಿದ್ದರೆ ತರಕಾರಿಗಳು ಹೊಲದಲ್ಲಿ ಕೊಳೆತು ನಾರುತ್ತಿದ್ದವು. ಈಗ ತಾನು ಹಾಕಿದ ಬಂಡವಾಳವೂ ಬಂದಿದೆ. ನಾವು ಹೊಲಕ್ಕೆ ಹಾಕಿದ ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದು ರೈತರು ಸಂತಸ ಹಂಚಿಕೊಂಡಿದ್ದಾರೆ.