"ಏಸೂರು ಕೊಟ್ಟರೂ ಈಸೂರು ಕೊಡೆವು"-ಸ್ವಾತಂತ್ರ್ಯ ಭಾರತದ ಇತಿಹಾಸದ ನೆನಪು
ಶಿವಮೊಗ್ಗ, ಆಗಸ್ಟ್ 15: "ಏಸೂರು ಕೊಟ್ಟರೂ ಈಸೂರು ಕೊಡೆವು" ಎಂಬ ವಾಕ್ಯವನ್ನು ನಾವು ಇತಿಹಾಸ ಪುಟಗಳಲ್ಲಿ ನೋಡಿದ್ದೇವೆ. ಭಾರತದ ಸ್ವಾತಂತ್ರ್ಯ ಹೋರಾಟದ ಅದೆಷ್ಟೋ ಚಳವಳಿಗಳ, ಕ್ರಾಂತಿಕಾರಿಗಳ ಎದೆಗಾರಿಕೆಯ ಕಥೆಗಳನ್ನು ಕೇಳಿದ್ದೇವೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಒಂದು ಮಹಾ ಕ್ರಾಂತಿಗೆ, ವೀರತನಕ್ಕೆ ಹೆಸರಾಗಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲೂ 1942 ಆಗಸ್ಟ್ 9ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಗಾಂಧೀಜಿ ಘೋಷಣೆಗೆ ಗ್ರಾಮದ ಜನತೆ ಕಿವಿಗೊಟ್ಟು ಹೋರಾಟದ ಹಾದಿಯನ್ನು ಇಳಿದರು. 1942 ಸೆಪ್ಟೆಂಬರ್ 27ರಂದು ಈಸೂರು ಗ್ರಾಮದ ಜನತೆ "ಈಸೂರು ಸ್ವಾತಂತ್ರ್ಯ ಗ್ರಾಮ ಬ್ರಿಟಿಷರಿಗೆ ಪ್ರವೇಶವಿಲ್ಲ" ಎಂಬ ನಾಮ ಫಲಕವನ್ನು ಊರ ಪ್ರವೇಶದ್ವಾರಕ್ಕೆ ಹಾಕಿದ್ದರು.
ಸ್ವಾತಂತ್ರ್ಯ ಗ್ರಾಮಕ್ಕೆ ಅತಿಕ್ರಮಣ ಮಾಡಲು ಬಂದ ತಹಶೀಲ್ದಾರ ಹಾಗೂ ಪೊಲೀಸ್ ಅಧಿಕಾರಿಗಳನ್ನು ತಡೆದು ನಿಲ್ಲಿಸಿ, ಖಾದಿ ಟೋಪಿಯನ್ನು ಧರಿಸಿದರೆ ಮಾತ್ರ ಗ್ರಾಮದ ಒಳಗೆ ಪ್ರವೇಶ ಎಂದು ಗ್ರಾಮಸ್ಥರು ಬ್ರಿಟಿಷ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ಹೋರಾಟಗಾರರನ್ನು ಕೆಣಕಿದ ಕಾರಣಕ್ಕೆ ಅಧಿಕಾರಿಗಳಿಗೇ ಟೋಪಿ ಹಾಕಿ ಅವರಿಂದ ಸ್ವತಂತ್ರ ಗ್ರಾಮಕ್ಕೆ ಜೈ ಎನ್ನುವ ಘೋಷಣೆ ಹಾಕಿಸಿದ್ದು ಹೋರಾಟದ ತೀವ್ರತೆಗೆ ಸಾಕ್ಷಿ.
ಇದನ್ನು ವಿರೋಧಿಸಿದ ಅಧಿಕಾರಿ ಮತ್ತು ಗ್ರಾಮಸ್ಥರ ನಡುವೆ ಗಲಾಟೆ ನಡೆಯಿತು. ಬ್ರಿಟಿಷರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿತು. ಇನ್ಸ್ ಪೆಕ್ಟರ್ ಕೆಂಚೆಗೌಡ, ತಹಶೀಲ್ದಾರ ಚನ್ನಬಸಪ್ಪ ಅವರನ್ನು ಗ್ರಾಮಸ್ಥರು ಕೊಂದು ಹಾಕಿದರು. ಈ ಘಟನೆ ಇಡೀ ದೇಶದಲ್ಲೇ ಪ್ರತಿಧ್ವನಿಸಿತು. ಬ್ರಿಟಿಷರು ಈ ಗ್ರಾಮದ ವಿರುದ್ಧ ಪೊಲೀಸ್ ದರ್ಪವನ್ನು ಮೆರೆದರು. ಮನೆ ಮನೆಯ ಗಂಡಸರನ್ನು ಪೊಲೀಸರು ಬಂಧಿಸಿದರು. ಇದರಿಂದ ಗ್ರಾಮದ ಯುವಕರು ತಿಂಗಳುಗಟ್ಟಲೆ ಮನೆ ಬಿಟ್ಟು ಕಾಡಿನಲ್ಲಿ ವಾಸವಿದ್ದರು.
ಕೊನೆಗೆ ಐದು 5 ಜನರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದರು. 40 ಕ್ಕೂ ಹೆಚ್ಚು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇಡೀ ಗ್ರಾಮದಲ್ಲೇ ಸ್ಮಶಾನ ಮೌನ ಆವರಿಸಿತ್ತು. ಈಸೂರು ಗ್ರಾಮ ಭಾರತದ ಇತಿಹಾಸದಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದ ಮಹತ್ವದ ಪಾತ್ರವನ್ನು ವಹಿಸಿತ್ತು. ಇಡೀ ದೇಶವೇ ಈ ಗ್ರಾಮದ ಹೋರಾಟ ಎದೆಗಾರಿಗೆ, ಸ್ವರಾಜ್ಯದ ಚಿಂತನೆಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು.