ಈಶ್ವರಪ್ಪ ಶೀಘ್ರದಲ್ಲೇ ಮತ್ತೆ ಸಚಿವರಾಗುತ್ತಾರೆ; ಬಿಎಸ್ವೈ
ಶಿವಮೊಗ್ಗ, ಏಪ್ರಿಲ್ 15; " ಕೆ. ಎಸ್. ಈಶ್ವರಪ್ಪ ಶೀಘ್ರದಲ್ಲಿಯೇ ಮತ್ತೆ ಸಚಿವರಾಗಲಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಈಶ್ವರಪ್ಪ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದು, ಸಂಜೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಶುಕ್ರವಾರ ಶಿವಮೊಗ್ಗದಲ್ಲಿ ಯಡಿಯೂರಪ್ಪ ಶಿವಮೊಗ್ಗ ಬಿಜೆಪಿ ಕಾರ್ಯಾಲಯದ ಹಿಂಭಾಗದಲ್ಲಿ ಬಿಜೆಪಿ ನಗರ ಮತ್ತು ಶಿವಮೊಗ್ಗ ಗ್ರಾಮಾಂತರದ ನವೀಕೃತ ಕಾರ್ಯಾಲಯವನ್ನು ಉದ್ಘಾಟಿಸಿದರು.
ಶುಕ್ರವಾರ ಈಶ್ವರಪ್ಪ, ಬೊಮ್ಮಾಯಿ ಭೇಟಿ; ಸಿಎಂ ಕಾರ್ಯಕ್ರಮ ಪಟ್ಟಿ
ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, "ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮೂರು ತಿಂಗಳಿನಲ್ಲಿ ಪೂರ್ಣಗೊಳಿಸಿದರೆ ಈಶ್ವರಪ್ಪ ನಿರಪರಾಧಿಯಾಗಿ ಮತ್ತೆ ಮಂತ್ರಿಯಾಗಬಹುದು" ಎಂದರು.
ಕೆ. ಎಸ್. ಈಶ್ವರಪ್ಪ ಸುಳ್ಳು ಹೇಳಿಕೊಂಡಿದ್ದರು; ಸಿದ್ದರಾಮಯ್ಯ
"ಭ್ರಷ್ಟಾಚಾರ ಆರೋಪದಲ್ಲಿ ಅವರು ಮುಕ್ತರಾಗಿ ಹೊರಬರುತ್ತಾರೆ. ಮತ್ತೆ ಸಂಪುಟದ ಭಾಗವಾಗುತ್ತಾರೆ ಎಂಬ ವಿಶ್ವಾಸ ನನಗೆ ಇದೆ" ಎಂದು ಯಡಿಯೂರಪ್ಪ ಹೇಳಿದರು.
KS Eshwarappa; ಸಿಎಂಗೆ ಸಂಜೆ ಕರೆ ಮಾಡಿದ್ದ ಕೆ. ಎಸ್. ಈಶ್ವರಪ್ಪ!
"ಯಾವುದೇ ತಪ್ಪು ಮಾಡದ ಈಶ್ವರಪ್ಪ ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಅನಿವಾರ್ಯವಾಗಿ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಯಾವುದೋ ಅಪರಾಧವಿಲ್ಲದೇ ಇದ್ದರೂ ರಾಜೀನಾಮೆ ನೀಡುವಂತಾಗಿದೆ" ಎಂದು ಯಡಿಯೂರಪ್ಪ ಹೇಳಿದರು.
"ಇನ್ನೆರಡು ತಿಂಗಳಿನಲ್ಲಿ ತನಿಖೆ ಮುಗಿದರೆ ಇವರ ಪಾತ್ರವೇನೂ ಇಲ್ಲ ಎಂಬುದು ತಿಳಿಯಲಿದೆ. ಅವರು ನಿರಪರಾಧಿಯಾಗಿ ಹೊರಗೆ ಬರುತ್ತಾರೆ. ಆಗ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ" ಎಂದು ಯಡಿಯೂರಪ್ಪ ತಿಳಿಸಿದರು.
ಬೆಂಗಳೂರಿಗೆ ಬರುತ್ತಿರುವ ಈಶ್ವರಪ್ಪ; ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ. ಎಸ್. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ಘೋಷಣೆ ಮಾಡಿದ್ದಾರೆ.
ಶುಕ್ರವಾರ ಶಿವಮೊಗ್ಗ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಈಶ್ವರಪ್ಪ ಬಳಿಕ ಬೆಂಗಳೂರಿಗೆ ಹೊರಟಿದ್ದಾರೆ. ಕಡೂರಿನಲ್ಲಿ ಕಾರ್ಯಕರ್ತರ ಜೊತೆ ಊಟ ಮಾಡಿ, ಕಾರ್ಯಕರ್ತರ ಬೆಂಗಾವಲು ಪಡೆಯ ವಾಹನದೊಂದಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗದಗ ಪ್ರವಾಸದಲ್ಲಿದ್ದು, ಸಂಜೆ 6 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಸಂಜೆ 6.30ರ ಬಳಿಕ ಈಶ್ವರಪ್ಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ.