ಈಶ್ವರಪ್ಪ ಮಾನಸಿಕ ಅಸ್ವಸ್ಥರಂತೆ ಮಾತನಾಡೋದು ನಿಲ್ಲಿಸಲಿ: ಕಾಗೋಡು
ಶಿವಮೊಗ್ಗ, ಜನವರಿ 9: ಗೌರವಯುತ ಸ್ಥಾನದಲ್ಲಿರುವ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹುಚ್ಚರಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಂಗಳವಾರ ಇಲ್ಲಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಆಡಳಿತದ ಚುಕ್ಕಾಣಿ ನೀಡಿರುವುದು ಹುಚ್ಚನ ಕೈಯಲ್ಲಿ ಆಡಳಿತ ಕೊಟ್ಟಂತಾಗಿದೆ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿ, ನಮಗೂ ಮಾತನಾಡಲು ಬರುತ್ತದೆ. ಹೇಳಿಕೆ ನೀಡುವಾಗ ಎಚ್ಚರ ವಹಿಸಬೇಕು ಎಂದು ಹೇಳಿದರು.
ಸಿದ್ದು ಆಳ್ವಿಕೆಯಲ್ಲಿ ಕರ್ನಾಟಕವು ಕೊಲೆಗಾರರ ಸ್ವರ್ಗ: ಈಶ್ವರಪ್ಪ
ಬಾಯಿಗೆ ಬಂದಂತೆ ಮಾತನಾಡುವುದು ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಶೋಭೆ ತರುವುದಿಲ್ಲ. ಸಾಧನಾ ಸಮಾವೇಶವನ್ನು ಸರಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಮಾಜಿ ಸಂಸದ ಆಯನೂರು ಮಂಜುನಾಥ್ ಗೆ ಲೆಕ್ಕ ಬೇಕಿದ್ದರೆ ಜಿಲ್ಲಾಡಳಿತವನ್ನು ಸಂಪರ್ಕಿಸಲಿ, ಮಾಹಿತಿ ದೊರಕುತ್ತದೆ ಎಂದು ಹೇಳಿದರು.
ಸಾರ್ವಜನಿಕರ ಹಣ ಹೇಗೆ ಬಳಸಬೇಕು, ಎಲ್ಲಿ ಬಳಸಬೇಕು ಎಂಬುದು ನಮಗೆ ಗೊತ್ತಿದೆ. ಸಮಾವೇಶದಲ್ಲಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಬಿಜೆಪಿಯವರು ಪ್ರತಿಭಟನೆ ನಡೆಸುತ್ತಾರೆ ಎಂದರೆ ಅದು ಅವರ ಹಣೆಬರಹ. ಇದಕ್ಕೆ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ ಎಂದರು.