ಶಿವಮೊಗ್ಗ; ವಿಡಿಯೋ, ರಸ್ತೆಯಲ್ಲಿ ಒಂಟಿ ಸಲಗದ ಸಂಚಾರ
ಶಿವಮೊಗ್ಗ, ಮೇ10: ಹೊಲ, ಗದ್ದೆಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದ ಆನೆಗಳು ಈಗ ಊರಿನ ಮುಖ್ಯ ರಸ್ತೆಯಲ್ಲಿ ಓಡಾಡಲು ಆರಂಭಿಸಿವೆ. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮಸ್ಥರು ಜಂಟಿ ಸಲಗದ ಸಂಚಾರ ಕಂಡು ಆತಂಕಗೊಂಡಿದ್ದಾರೆ.
ಆನೆ ಸಂಚಾರದ ವಿಡಿಯೋ ಈಗ ವೈರಲ್ ಆಗಿದೆ. 3-4 ದಿನದ ಹಿಂದೆ ಕಾಡಾನೆಯೊಂದು ಉಂಬ್ಳೆಬೈಲು ಮುಖ್ಯ ರಸ್ತೆಯಲ್ಲಿ ಸಂಚರಿಸಿದೆ. ಬೆಳಗಿನ ಹೊತ್ತಿನಲ್ಲೇ ಆನೆಯ ಓಡಾಟಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಉಂಬ್ಳೆಬೈಲು ಸರ್ಕಲ್ನಿಂದ ಕೈದೋಟ್ಲು ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಆನೆ ಪ್ರತ್ಯಕ್ಷವಾಗಿದೆ. ದಿಢೀರ್ ಆನೆ ಬಂದಿದ್ದರಿಂದ ಜನರು ಬೆದರಿದ್ದಾರೆ. ಆನೆ ಕಂಡು ನೆರೆಹೊರೆಯವರು ತಮ್ಮ ರಕ್ಷಣೆಗಾಗಿ ಅಕ್ಕಪಕ್ಕದ ಮನೆ, ಅಂಗಡಿಗಳಿಗೆ ಹೋಗಿ ಸೇರಿಕೊಂಡಿದ್ದಾರೆ.
ರಾಮನಗರ; ಚನ್ನಪಟ್ಟಣದಲ್ಲಿ ಆನೆ ದಾಳಿಗೆ ಮನೆ, ಬೆಳೆ ನಾಶ
ಕೆಲವರು ಬೈಕ್ ಮೂಲಕ ಆನೆಯನ್ನು ಹಿಂಬಾಲಿಸಿ ಮುಂದಿದ್ದವರನ್ನು ಎಚ್ಚರಿಸಿದ್ದಾರೆ. ಉಂಬ್ಳೆಬೈಲು ಗ್ರಾಮದ ಸದಾನಂದ ಶೆಟ್ಟಿ ಎಂಬುವವರ ಮನೆ ಮುಂಭಾಗ ಆನೆ ಓಡಾಡುತ್ತಿರುವ ವಿಡಿಯೋ ಲಭ್ಯವಾಗಿದೆ. ಇಲ್ಲಿಂದ ಸ್ವಲ್ಪ ದೂರ ಸಾಗಿದ ಆನೆ, ಕರೀಂ ಎಂಬುವವರ ಮನೆ ಪಕ್ಕದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗಕ್ಕೆ ನುಗ್ಗಿದೆ.
ಅರಣ್ಯಾಧಿಕಾರಿಗಳ ಭೇಟಿ; ಬೆಳಗಿನ ಹೊತ್ತಿನಲ್ಲಿ ಊರೊಳಗೆ ಆನೆ ಪ್ರತ್ಯಕ್ಷವಾಗಿದ್ದರಿಂದ ಸ್ಥಳೀಯರು ಆತಂಕಗೊಂಡು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ್ದರು. ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ಈ ವೇಳೆ ಆನೆಗಳ ಉಪಟಳದ ಕುರಿತು ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಲ್ಲದೆ ಈ ಸಮಸ್ಯೆಯಿಂದ ಮುಕ್ತಿ ಕೊಡುಸುವಂತೆ ಮನವಿ ಮಾಡಿದರು.
ಉಂಬ್ಳೆಬೈಲು ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಹೊತ್ತು ಗೊತ್ತಿಲ್ಲದೆ ಆನೆ ಹಿಂಡು ಹೊಲ, ಗದ್ದೆ, ತೋಟಗಳಿಗೆ ನುಗ್ಗಿತ್ತಿವೆ. ಉಂಬ್ಳೆಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರಿಗೆರೆ ಗ್ರಾಮದಲ್ಲಿ ಆಗಾಗ ಜಮೀನಿಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿವೆ. ಇದರಿಂದ ಈ ಭಾಗದ ರೈತರು ತೀವ್ರ ನಷ್ಟ ಅನುಭವಿಸಿ ಕಂಗೆಟ್ಟು ಹೋಗಿದ್ದಾರೆ.
ಈ ಆನೆ ಹಿಂಡು ಉಂಬ್ಳೆಬೈಲು ವ್ಯಾಪ್ತಿಯ ಲಕ್ಕಿನಕೊಪ್ಪ, ಉಂಬ್ಳೆಬೈಲು ಗ್ರಾಮ ಸುತ್ತಮುತ್ತ ಮತ್ತು ಭದ್ರಾ ಅರಣ್ಯ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸಂಚಿರಿಸುತ್ತಿವೆ. ಒಮ್ಮೊಮ್ಮಗೆ ಗುಂಪಾಗಿ ಕಾಣಿಸುವ ಆನೆಗಳು, ಕೆಲವು ಭಾರಿ ಒಂಟಿಯಾಗಿ ಪ್ರತ್ಯಕ್ಷವಾಗುತ್ತಿವೆ. ಹಾಗಾಗಿ ಆನೆಗಳ ಸಂಖ್ಯೆಯ ಕುರಿತು ಸ್ಪಷ್ಟತೆ ಇಲ್ಲವಾಗಿದೆ.
ಪದೇ ಪದೆ ಕಾಡಾನೆಗಳು ಪ್ರತ್ಯಕ್ಷವಾಗುತ್ತಿರುವುದು, ಬೆಳೆ ಹಾನಿ ಉಂಟು ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯವರು ಆನೆಗಳ ಉಪಟಳ ತಪ್ಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.
ಕಳೆದ ಎರಡು ವರ್ಷದಿಂದ ಈಚೆಗೆ ಆನೆಗಳ ಉಪಟಳ ಹೆಚ್ಚಾಗಿದೆ. ಆರಂಭದಲ್ಲಿ ಊರಿನ ಒಂದು ಭಾಗದಲ್ಲಿ ಮಾತ್ರ ಆನೆಗಳು ಕಾಣಿಸಿಕೊಂಡಿದ್ದವು. ಈಗ ಊರಿನ ಹಲವು ಕಡೆಗಳಲ್ಲಿ ಕಾಡಾನೆಗಳು ಓಡಾಡುತ್ತಿವೆ. ಹಾಗಾಗಿ ಜನರು ಮನೆ ಬಿಟ್ಟು ಹೊರಗೆ ಬರಲು ಹೆದರುವಂತಾಗಿದೆ.