ಸಕ್ರೆಬೈಲಿನ ಆನೆ ಬಿಡಾರದಲ್ಲಿ ಏಕದಂತ ಆನೆ ಸಾವು
ಶಿವಮೊಗ್ಗ, ಅಕ್ಟೋಬರ್ 21: ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ಏಕದಂತ ಎಂಬ ಹೆಸರಿನ ಆನೆ ಅನಾರೋಗ್ಯದ ಕಾರಣ ಅ.20ರಂದು ಸಾವನ್ನಪ್ಪಿದೆ.
ಆನೆಗೆ ಕಳೆದ ಎರಡು ದಿನಗಳಿಂದ ಅನಾರೋಗ್ಯ ಕಾಣಿಸಿಕೊಂಡಿದ್ದು, ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಕ್ರೆಬೈಲಿನ ವೈದ್ಯ ವಿನಯ್ ಅವರೂ ಚಿಕಿತ್ಸೆ ನೀಡುತ್ತಿದ್ದರು. ನಿನ್ನೆ ಹೃದಯಾಘಾತದಿಂದ ಆನೆ ಸಾವನ್ನಪ್ಪಿದೆ ಎಂದು ಸಕ್ರೆಬೈಲು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಏಕದಂತ ಆನೆಗೆ 35 ವರ್ಷ ವಯಸ್ಸಾಗಿದ್ದು, ಈ ಆನೆಯನ್ನು ಎರಡು ವರ್ಷದ ಹಿಂದೆ ಹಾಸನದ ಸಕಲೇಶಪುರದಿಂದ ಸೆರೆ ಹಿಡಿದು ತರಲಾಗಿತ್ತು. ಇದೇ ಬಿಡಾರದಲ್ಲಿ ಪಳಗಿಸಲಾಗಿತ್ತು. ಈ ಆನೆಗೆ ಒಂದೇ ದಂತವಿದ್ದ ಕಾರಣ ಇದಕ್ಕೆ ಏಕದಂತ ಎಂದು ನಾಮಕಾರಣ ಮಾಡಲಾಗಿತ್ತು.
ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆಗೆ ಸಕ್ರೆಬೈಲಿನ ಆನೆ ಶಿಬಿರದಲ್ಲಿ ಆರೈಕೆ
ಆನೆ ಅತ್ಯಂತ ದಷ್ಟಪುಷ್ಟವಾಗಿದ್ದು, ಕಳೆದ ಎರಡು ದಿನಗಳಿಂದ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ನಿನ್ನೆ ಸಾವನ್ನಪ್ಪಿದ್ದು, ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಸದ್ಯಕ್ಕೆ ಬಿಡಾರದಲ್ಲಿ 23 ಆನೆಗಳು ಇರುವುದಾಗಿ ತಿಳಿದುಬಂದಿದೆ.