ರಜೆ ಅನುಭವಿಸಿದ್ದೀರಿ, ಈಗ ಚೆನ್ನಾಗಿ ಕಲಿಯಿರಿ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಶಿವಮೊಗ್ಗ, ಜನವರಿ 20: ಈಗಾಗಲೇ ನೀವು ಬಹಳಷ್ಟು ರಜೆಯನ್ನು ಅನುಭವಿಸಿದ್ದೀರಿ. ಈಗ ಒಳ್ಳೆಯ ಶಾಲೆಯಲ್ಲಿ ಓದುವ ಭಾಗ್ಯ ನಿಮಗೆ ದೊರೆತಿದ್ದು, ಚೆನ್ನಾಗಿ ಕಲಿಯಿರಿ ಎಂದು ಶಾಲಾ ಮಕ್ಕಳಿಗೆ ಪ್ರಾಥಮಿಕ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕರೆ ನೀಡಿದರು.
ಶಿವಮೊಗ್ಗದ ದುರ್ಗಿಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಹೊಸದಾಗಿ ಆರಂಭಿಸಲಾಗಿರುವ ಸ್ಮಾರ್ಟ್ ಕ್ಲಾಸ್ ವೀಕ್ಷಿಸಿ ಅವರು ಮಾತನಾಡಿದರು. ಜೂನ್ ತಿಂಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಇನ್ನುಳಿದ 4-5 ತಿಂಗಳಲ್ಲಿ ಕೇವಲ ಓದಿನ ಕಡೆಗೆ ಮಾತ್ರ ಗಮನ ನೀಡಿ ಎಂದು ತಿಳಿ ಹೇಳಿದರು.
ತಾಳಗುಪ್ಪ-ಮೈಸೂರು ಇಂಟರ್ ಸಿಟಿ ರೈಲು ಆರಂಭ; ವೇಳಾಪಟ್ಟಿ
ಚೆನ್ನಾಗಿ ಕಲಿತರೆ ನಿಮಗೆ ಮಾತ್ರವಲ್ಲ, ನಿಮ್ಮ ತಂದೆ-ತಾಯಂದಿರಿಗೆ, ಶಿಕ್ಷಕರಿಗೆ ಎಲ್ಲರಿಗೂ ಸಂತೋಷ. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣ ಎಸ್ಎಸ್ಎಲ್ಸಿಗೆ ಕೊನೆಯಾಗಬಾರದು, ಮುಂದೆಯೂ ಛಲದಿಂದ ಕಲಿಯಬೇಕು. ಶಾಲೆಗೆ ಉತ್ತಮ ಫಲಿತಾಂಶವನ್ನು ತನ್ನಿ ಎಂದು ಹಾರೈಸಿದರು.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಅವರು ಸ್ಮಾರ್ಟ್ ಕ್ಲಾಸ್ ಯೋಜನೆ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಒಟ್ಟು 45 ಶಾಲೆಗಳಲ್ಲಿ ಡಿಜಿಟಲ್ ಕ್ಲಾಸ್ ರೂಂ ಸಜ್ಜುಗೊಳಿಸಲಾಗಿದೆ. ಅತ್ಯಾಧುನಿಕ ಡಿಜಿಟಲ್ ಕ್ಲಾಸ್ನಲ್ಲಿ ಇಂಟರ್ ಆ್ಯಕ್ಟೀವ್ ಬೋರ್ಡ್, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಸಿಸಿ ಕ್ಯಾಮರಾ ಸೇರಿದಂತೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಡಿಜಿಟಲ್ ಕ್ಲಾಸ್ರೂಂ ಬಳಕೆ ಬಗ್ಗೆ ಈಗಾಗಲೇ 300 ಶಿಕ್ಷಕರಿಗೆ ತರಬೇತಿಯನ್ನು ಸಹ ನೀಡಲಾಗಿದೆ ಎಂದು ಹೇಳಿದರು. ಸ್ಮಾರ್ಟ್ ಕ್ಲಾಸ್ನಿಂದಾಗಿ ನಮ್ಮ ಕಲಿಕೆಗೆ ಅನುಕೂಲವಾಗಿದೆ. ಪ್ರಾಯೋಗಿಕವಾಗಿ ನೋಡಿ ತಿಳಿದುಕೊಳ್ಳಲು ಸಾಧ್ಯವಾಗಿದೆ.
ವಿಡಿಯೋಗಳು ನಮ್ಮ ಕಲಿಕೆಯನ್ನು ಸುಲಭಗೊಳಿಸಿದೆ. ಇಂತಹ ಶಾಲೆಯಲ್ಲಿ ಕಲಿಯುತ್ತಿರುವುದು ಹೆಮ್ಮೆ ತಂದಿದೆ ಎಂದು ಏಳನೇ ತರಗತಿ ವಿದ್ಯಾರ್ಥಿನಿ ವೇದಿಕಾ ಸಚಿವರೊಂದಿಗೆ ಅನುಭವ ಹಂಚಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಪ್ರಮುಖರಾದ ಎಸ್.ಎನ್. ಚನ್ನಬಸಪ್ಪ.ಇದ್ದರು.