ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಕಂಪಿಸಿದ ಭೂಮಿ, ಆತಂಕಗೊಂಡ ಜನ
ಶಿವಮೊಗ್ಗ, ಫೆಬ್ರವರಿ 03: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಭಾಗದ ವರಾಹಿ ಜಲವಿದ್ಯುತ್ ಯೋಜನಾ ಪ್ರದೇಶದಲ್ಲಿ ಮಧ್ಯರಾತ್ರಿ ಸುಮಾರು ಒಂದೂವರೆ ಗಂಟೆ ಸಮಯದಲ್ಲಿ ಭೂಮಿ ಕಂಪಿಸಿದೆ.
ಹೌದು, ವರಾಹಿ ಜಲವಿದ್ಯುತ್ ಯೋಜನಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಮಿ ಕಂಪಿಸಿದ್ದು, ಬರೋಬ್ಬರಿ 30 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದೆ ಎಂದು ಹೇಳಲಾಗಿದೆ. ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಬಂದಿದ್ದರು.
ಮನೆಯ ಪಾತ್ರೆ ಪಗಡಗಳೆಲ್ಲಾ ಅಲ್ಲಾಡಿದ ಅನುಭವವಾಗಿದ್ದು, ಯಡೂರು, ನಾಲೂರು ಗ್ರಾಪಂ ವ್ಯಾಪ್ತಿಯಲ್ಲಿ ಭಾರೀ ಶಬ್ದ ಸಹಿತ ಭೂಮಿ ಕಂಪಿಸಿದೆ. ಪರಿಣಾಮ ಸಹ್ಯಾದ್ರಿ ಪರ್ವತದ ತಪ್ಪಲಿನ ಜನ ಭಯಗೊಂಡಿದ್ದಾರೆ.
ದೃಢಪಡಿಸಿದ ಜಿಲ್ಲಾಧಿಕಾರಿ
ಮಾಣಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಭೂಕಂಪನವಾಗಿರುವ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ದೃಢಪಡಿಸಿದ್ದು, ರಿಕ್ಟರ್ ಮಾಪನದಲ್ಲಿ 2.2 ರಷ್ಟು ತೀವ್ರತೆ ದಾಖಲಾಗಿದೆ.
ವಿಠಲನಗರ ಕೇಂದ್ರ ಸ್ಥಾನದಿಂದ ಮಾಣಿ ಜಲಾಶಯದ ಹಿನ್ನೀರು ವ್ಯಾಪ್ತಿಯ ಯಡೂರು, ಗಾರ್ಡರಗದ್ದೆ, ಶುಂಠಿಹಕ್ಲು, ಕರುಣಾಪುರ, ಹನಸ, ಮೇಗರವಳ್ಳಿ, ಸುಣ್ಣದಮನೆ, ಹಾಲಿಗೆ, ಡಿಂಡ ಗ್ರಾಮದಲ್ಲೂ ಭೂಕಂಪನವಾಗಿದೆ ಎಂದು ದೃಢಪಡಿಸಿದ್ದಾರೆ.