ಶಿವಮೊಗ್ಗಕ್ಕೆ ಈ ಬಾರಿ ಏನೂ ಕೇಳಬೇಡಿ ಎಂದ ಸಿಎಂ
ಶಿವಮೊಗ್ಗ, ಫೆಬ್ರವರಿ 24: "ಶಿವಮೊಗ್ಗ ಜಿಲ್ಲೆಗೆ ಈ ಬಾರಿ ಯಾವುದೇ ಅನುದಾನ ಕೇಳಬೇಡಿ. ಕೇವಲ ಒಂದೇ ಜಿಲ್ಲೆ, ಒಂದೇ ತಾಲೂಕಿಗೆ ಗಮನ ಕೊಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ಶಿವಮೊಗ್ಗ ನಗರದಲ್ಲಿ ಕೌಶಲ ಕರ್ನಾಟಕ ಯೋಜನೆಯಡಿ ಎನ್ಈಎಸ್ ಮೈದಾನದಲ್ಲಿ ಆಯೋಜಿಸಿರುವ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, "ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೆಚ್ಚಿನ ಯೋಜನೆ ರೂಪಿಸಿದ್ದೇನೆ. ಈ ವರ್ಷ ಇನ್ಯಾವ ಯೋಜನೆಯನ್ನೂ ಜನ ಶಿವಮೊಗ್ಗ ಜಿಲ್ಲೆಗೆ ಕೇಳಬಾರದು" ಎಂದಿದ್ದಾರೆ.
ಯುವಕರ ಭವಿಷ್ಯ ಉಜ್ವಲಗೊಳಿಸುವುದೇ ಸರ್ಕಾರದ ಉದ್ದೇಶ ಎಂದ ಸಿಎಂ
"ರಾಜ್ಯದ ಬೇರೆ ಜಿಲ್ಲೆಗಳಿಗೆ, ತಾಲೂಕುಗಳ ಅಭಿವೃದ್ಧಿಗೆ ಈ ಬಾರಿ ಕ್ರಮ ಕೈಗೊಳ್ಳುತ್ತೇನೆ. ಮೂರು ವರ್ಷ ಇನ್ನೂ ಬಿಜೆಪಿ ಅಧಿಕಾರಾವಧಿ ಇದೆ. ಈ ಅವಧಿಯಲ್ಲಿ ಅರ್ಧಕ್ಕೇ ನಿಂತಿರುವ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಹೀಗಾಗಿ ಒಂದೇ ಜಿಲ್ಲೆಯತ್ತ ಗಮನ ಕೊಡಲು ಸಾಧ್ಯವಿಲ್ಲ" ಎಂದು ಹೇಳಿದರು.
ಜಿಲ್ಲೆಯ ಆನವಟ್ಟಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಕೂಡಲೇ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.