ಹಸಿದವರಿಗೆ ಊಟ ನೀಡಲು ಶಿವಮೊಗ್ಗದಲ್ಲಿ ಡಿಕೆಶಿ ಸಂಚಾರಿ ಕ್ಯಾಂಟೀನ್
ಶಿವಮೊಗ್ಗ, ಏಪ್ರಿಲ್ 15: ಆಸ್ಪತ್ರೆ ರೋಗಿಗಳಿಗೆ, ರೋಗಿಗಳ ಸಂಬಂಧಿಕರಿಗೆ ಹಾಗೂ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಸಂಚಾರಿ ಕ್ಯಾಂಟೀನ್ ಆರಂಭಿಸಲಾಗಿದ್ದು, ಇಂದು ಈ ಕ್ಯಾಂಟೀನ್ ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಚಾಲನೆ ನೀಡಿದರು.
ಲಾಕ್ ಡೌನ್ ಸಂದರ್ಭದಲ್ಲಿ ಹಸಿವನ್ನು ನೀಗಿಸಲು ಡಿಕೆಶಿ ಅಭಿಮಾನಿಗಳ ಸಂಘ, ದೇವೇಂದ್ರಪ್ಪನವರ ನೇತೃತ್ವದಲ್ಲಿ ಸಿದ್ಧ ಆಹಾರ ಮತ್ತು ನೀರು ಒದಗಿಸಲು ಪಣ ತೊಟ್ಟಿದೆ. ಹೀಗಾಗಿ ಸಿಬ್ಬಂದಿ ಮಾತ್ರವಲ್ಲದೇ ನಿರ್ಗತಿಕರಿಗೂ ಆಹಾರವನ್ನು ಉಚಿತವಾಗಿ ಹಂಚಲಾಗುತ್ತಿದೆ.
ದಾವಣಗೆರೆಯಲ್ಲಿ ಊಟವಿಲ್ಲದೇ ಪರದಾಡುತ್ತಿದ್ದ ವೃದ್ಧೆ ಸಹಾಯಕ್ಕೆ ಬಂದ ಡಿಸಿ
ಸರ್ಕಾರ ಹೊರಡಿಸಿರುವ ಲಾಕ್ ಡೌನ್ ಮುಗಿಯುವವರೆಗೆ ಈ ಕ್ಯಾಂಟೀನ್ ಕಾರ್ಯ ನಿರ್ವಹಿಸುವುದು. ದಿನವೂ ಸುಮಾರು 600 ಮಂದಿಗೆ ಆಹಾರ ನೀಡುವ ಯೋಜನೆ ಇಟ್ಟುಕೊಂಡಿದೆ. ಜ್ಯೋತಿ ಕ್ಲಿನಿಕ್, ಮಲ್ನಾಡ್ ಹಾಸ್ಪಿಟಲ್ ಮಹಾಲಕ್ಷ್ಮೀ ಆಸ್ಪತ್ರೆ ಸೇರಿ ಇಂದು 15 ಆಸ್ಪತ್ರೆಗಳಲ್ಲಿ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಹಂಚಲು ಆರ್ಡರ್ ದೊರೆತಿದೆ.
ಡಿಕೆಶಿ ಅಭಿಮಾನಿಗಳ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಅವರು ಮಾತನಾಡಿ, ಆಸ್ಪತ್ರೆಯ ರೋಗಿಗಳು, ಸಂಬಂಧಿಕರು ಹಾಗೂ ಸಿಬ್ಬಂದಿಗೆ ಮಧ್ಯಾಹ್ನದ ನಂತರ ಊಟ ಸಿಗುತ್ತಿಲ್ಲ. ಹಾಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಯಾರು ಕರೆ ಮಾಡಿದರೂ ತಿಂಡಿ, ಊಟ ಉಚಿತವಾಗಿ ಸಿಗಲಿದೆ. ಇದು ನಗರ ಪ್ರದೇಶಕ್ಕೆ ಸೀಮಿತವಾಗಿದೆ ಎಂದರು.