EXCLUSIVE: ನನ್ನೆದುರೆ ಚಾಕು ತೋರಿಸುತ್ತಿಯಾ? ತಗೊಳ್ಳೊ ಪಿಸ್ತೂಲ್, ನೀನೇ ಶಾಂತಿ ಕಾಪಾಡು!
ಬೆಂಗಳೂರು, ಡಿ. 04: ಬಜರಂಗದಳ ಸಹ ಸಂಚಾಲಕ ನಾಗೇಶ್ ಎಂಬುವರ ಮೇಲೆ ನಡೆದ ಹಲ್ಲೆ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಎದುರೆ ಪ್ರತಿಭಟನಾಕಾರನೊಬ್ಬ ಚಾಕು ತೋರಿಸಿರುವ ಆತಂಕಕಾರಿ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ. ಬಜರಂಗದಳ ಸಹ ಸಂಚಾಲಕ ನಾಗೇಶ್ ಎಂಬುವರ ಮೇಲೆ ಗುರುವಾರ ಹಲ್ಲೆ ನಡೆದಿತ್ತು. ಅದನ್ನು ಖಂಡಿಸಿ ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
Recommended Video
ಗುರುವಾರ (ಡಿ.03) ಬೆಳಿಗ್ಗೆ ನಾಗೇಶ್ ಮೇಲೆ ಕೆಲವು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಇದರಿಂದಾಗಿ ಗಾಂಧಿಬಜಾರ್ನ ಚೋರ್ ಬಜಾರ್ನಲ್ಲಿ ಒಂದು ಕೋಮಿನ ಜನರು ಮತ್ತೊಂದು ಕೋಮಿನವರನ್ನು ಗುರಿಯಾಗಿಸಿಕೊಂಡು ಹಲವರನ್ನು ಅಟ್ಟಾಡಿಸಿ ಹೊಡೆದಿದ್ದರು. ಇದೇ ದ್ವೇಷದಲ್ಲಿ ಮತ್ತೊಂದು ಕೋಮು ರವಿವರ್ಮ ಬೀದಿಯಲ್ಲಿ ಗುಂಪುಗೂಡಿ ಪೊಲೀಸರ ಎದುರಿನಲ್ಲಿಯೇ ಮಚ್ಚು, ಲಾಂಗ್ ಮತ್ತು ಇತರೆ ಮಾರಕಾಸ್ತ್ರಗಳನ್ನು ಹಿಡಿದು ಹಲವು ವಾಹನಗಳನ್ನು ಜಖಂಗೊಳಿಸಿ ಭಯದ ವಾತಾವರಣ ಸೃಷ್ಟಿಸಿದ್ದರು.
ಆಗ ತಕ್ಷಣವೇ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಪೂರ್ವ ವಲಯ ಐಜಿಪಿ ಎಸ್. ರವಿ ಅವರು ಪರಿಸ್ಥಿತಿ ನಿಭಾಯಿಸಿದ್ದರು. ಆದರೆ ಘಟನೆ ಖಂಡಿಸಿ ಗಾಂಧಿ ಬಜಾರ್ನಲ್ಲಿ ಧರಣಿ ನಡೆಸುತ್ತಿದ್ದವರಲ್ಲಿ ಒಬ್ಬನು ಐಜಿಪಿ ಎಸ್. ರವಿ ಅವರ ಎದುರೇ ಚಾಕು ತೋರಿಸಿ ನಾವು ಸುಮ್ಮನಿರುವುದಿಲ್ಲ ಎಂದು ಅವಾಜ್ ಹಾಕಿದ್ದ ಆತಂಕಕಾರಿ ಘಟನೆ ವರದಿಯಾಗಿದೆ.
ಐಜಿಪಿ ಎದುರೆ ಚಾಕು ತೋರಿಸಿ ಎಚ್ಚರಿಕೆ!
ಬಜರಂಗದಳದ ನಾಗೇಶ್ ಮೇಲೆ ಹಲ್ಲೆ ಖಂಡಿಸಿ ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಐಜಿಪಿ ಎಸ್. ರವಿ ಭೇಟಿ ನೀಡಿದ್ದರು. ಅದೇ ಸಂದರ್ಭದಲ್ಲಿ ಪ್ರತಿಭಟನಾಕಾರನೊಬ್ಬ ನಿಮ್ಮಿಂದ ಆಗದಿದ್ರೆ ಹೇಳಿ, ಅವರನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಚಾಕು ತೋರಿಸಿದ್ದ ಎನ್ನಲಾಗಿದೆ. ಇದರಿಂದ ಗರಂ ಆಗಿದ್ದ ಐಜಿಪಿ ಎಸ್. ರವಿ ಅವರು, ನನ್ನೆದುರಿಗೆ ಒಬ್ಬ ಚಾಕು ತೆಗೆಯುತ್ತಾನೆ. ಇನ್ನೇನು ಹೇಳಬೇಕು ನಾನು? ಅವ್ನು ಎಲ್ಲ ಮಾಡಿಬಿಡ್ತಾನಾ? ಏಯ್ ಎಲ್ಲ ಮಾಡಿಬಿಡ್ತಿಯಾ? ನಿನಗೆ ಪಿಸ್ತೂಲ್ ಕೊಡ್ತೇನೆ ಮಾಡ್ತೀಯಾ? ಎಂದು ಕಾನೂನು ಸುವ್ಯವಸ್ಥೆಯನ್ನು ನೀವೇ ಕಾಪಾಡಿಕೊಳ್ಳಿ ಎಂದು ಐಜಿಪಿ ಎಸ್. ರವಿ ಗರಂ ಆಗಿದ್ದರು. ಬಳಿಕ ಅಲ್ಲಿಂದ ಜನರನ್ನು ಚದುರಿಸಲಾಗಿತ್ತು.
ಹಿಂದೂಗಳ ತಪ್ಪಿಲ್ಲ ಎಂದ ಈಶ್ವರಪ್ಪ
ಇನ್ನು ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ತಹಶೀಲ್ದಾರರ ಮೇಲೆಯೇ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹರಿಹಾಯ್ದಿದ್ದಾರೆ. ಎರಡೂ ಕಡೆ ಘರ್ಷಣೆ ಆಗಿದೆ ಎಂದು ಹೇಳುವ ತಹಶೀಲ್ದಾರ್ ಅವರಿಗೆ ತಲೆ ಸರಿಯಿಲ್ಲ. ಘಟನೆಯಲ್ಲಿ ಹಿಂದೂ ಸಮಾಜದ ಯಾವುದೇ ತಪ್ಪಿಲ್ಲ. ಹಿಂದೂ ಸಮಾಜವನ್ನು ಯಾರೂ ಕೂಡ ಹಗುರವಾಗಿ ತೆಗೆದುಕೊಳ್ಳಬಾರದು. ಇದು ಮುಸಲ್ಮಾನ್ ಗೂಂಡಾಗಿರಿ. ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಇದಕ್ಕೂ ಮೊದಲು ಹೇಳಿಕೆ ಕೊಟ್ಟಿದ್ದ ತಹಶೀಲ್ದಾರ್ ಅವರು ಎರಡೂ ಕಡೆಗಳಿಂದ ಘರ್ಷಣೆ ಆಗಿದೆ ಎಂದು ಹೇಳಿಕೆ ನೀಡಿದ್ದರು. ಇದು ಈಶ್ವರಪ್ಪ ಅವರ ಕೋಪಕ್ಕೆ ಕಾರಣವಾಗಿದೆ.
ತನಿಖೆ ಅಗತ್ಯವಿಲ್ಲ ಮುಸ್ಲಿಂ ಗೂಂಡಾಗಳನ್ನು ಬಂಧಿಸಿ
ಘಟನೆ ಕುರಿತು ತಾವುದೇ ತನಿಖೆ ಅಗತ್ಯವಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಎಂದು ಪ್ರಶ್ನೆ ಮಾಡಿರುವ ಸಚಿವ ಈಶ್ವರಪ್ಪ ಅವರು, ಇನ್ನುಮುಂದೆ ಎಂದೂ ಕೂಡ ಶಿವಮೊಗ್ಗದಲ್ಲಿ ಮುಸಲ್ಮಾನ್ ಗೂಂಡಾಗಿರಿ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ವ್ಯವಸ್ಥಿತವಾಗಿ ನಡೆದಿರುವ ಘಟನೆ. ಹೀಗಾಗಿ ಇದನ್ನು ಹಿಂದೂ ಸಮಾಜ ಅಥವಾ ಬಿಜೆಪಿ ಸರ್ಕಾರ ಸಹಿಸುವುದಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಮುಸ್ಲಿಂ
ಗೂಂಡಾಗಳನ್ನು
ಬಂಧಿಸಲು
ಪೊಲೀಸರಿಗೆ
ಸೂಚನೆ
ನೀಡಿದ್ದೇನೆ.
ಕೆಲವು
ಮುಸಲ್ಮಾನ್
ಕುತಂತ್ರಿಗಳಿಂದ
ಗಲಭೆ
ಉಂಟಾಗಿದೆ.
ಆ
ಕುತಂತ್ರಿಗಳಿಗೆ
ಬುದ್ದಿ
ಕಲಿಸುತ್ತೇವೆ
ಎಂದು
ಹಿಂದೂ
ಸಮಾಜದ
ಜನರಿಗೆ
ಭರವಸೆ
ನೀಡಿದ್ದೇವು.
ಆದರೆ
ಈಗ
ಹಿಂದೂ
ಸಮಾಜದ
ಸಹನೆ
ಮೀರಿದೆ
ಎಂದು
ಈಶ್ವರಪ್ಪ
ಎಚ್ಚರಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ!
ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿಯೇ ಈ ಘಟನೆ ನಡೆದಿದೆ ಎಂದು ಶಿವಮೊಗ್ಗದ ನಿವಾಸಿ ರವಿಶಂಕರ್ (ಹೆಸರು ಬದಲಾಯಿಸಲಾಗಿದೆ) ಎಂಬುವರು 'ಒನ್ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಕೇವಲ ಮೂರ್ನಾಲ್ಕು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಶಾಂತವಾಗಿದ್ದ ಶಿವಮೊಗ್ಗದಲ್ಲಿ ಏಕಾಏಕಿ ಕೋಮು ಗಲಭೆ ಆಗುತ್ತದೆ ಎಂದರೆ ಅದರ ಅರ್ಥ ಏನು? ಎಂದು ಅವರು ಪ್ರಶ್ನೆ ಮಾಡಿದರು.
ಜೊತೆಗೆ ಸಿಎಂ ಯಡಿಯೂರಪ್ಪ ಅವರ ತವರಿನಲ್ಲಿ ಅವರ ಪ್ರಭಾವ ಕಡಿಮೆ ಮಾಡಲು ಯಾರಾದರೂ ಪ್ರಯತ್ನಿಸುತ್ತಿರಬಹುದು. ಹಾಗೇ ಪ್ರಯತ್ನಿಸುತ್ತಿರುವವರು ಬಿಜೆಪಿಯಲ್ಲಿ ಇರಬಹುದು ಅಥವಾ ಬೇರೆ ಪಕ್ಷದಲ್ಲಿಯೂ ಇರಬಹುದು. ಹೀಗಾಗಿ ಈ ಘಟನೆಯ ಕುರಿತು ರಾಜಕೀಯ ದೃಷ್ಟಿಯಿಂದಲೇ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಕೋಮು ಗಲಭೆ ಉಂಟಾಗಿದೆ. ಇದು ಯಡಿಯೂರಪ್ಪ ಅವರಿಗೆ ಹಿನ್ನಡೆಯನ್ನುಂಟು ಮಾಡಲು ನಡೆಸಿರುವ ಪ್ರಯತ್ನವೂ ಆಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸಬೇಕಾದ ಅಗತ್ಯವಿದೆ.