ಸಿಗಂದೂರು ದೇವಾಲಯ ಉಸ್ತುವಾರಿ ಸಮಿತಿ ರಚನೆಗೆ ಜಿಲ್ಲಾಡಳಿತ ಆದೇಶ
ಶಿವಮೊಗ್ಗ, ಅಕ್ಟೋಬರ್ 24: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೇ, ಬೇಡವೇ ಎಂಬ ಚರ್ಚೆ ಆರಂಭವಾಗುತ್ತಿರುವ ನಡುವೆ ಜಿಲ್ಲಾಡಳಿತ ಜಾಣ ನಡೆ ಇಟ್ಟಿದೆ.
ದೇವಸ್ಥಾನದ ಆಡಳಿತಕ್ಕೆ ಸಲಹೆ ಮತ್ತು ಮೇಲುಸ್ತುವಾರಿ ನೋಡಿಕೊಳ್ಳಲು ತಾತ್ಕಾಲಿಕ ಮೇಲುಸ್ತುವಾರಿ ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶಿಸಿದ್ದಾರೆ. ದೇವಸ್ಥಾನದ ಪೂಜೆ ಪುನಸ್ಕಾರಗಳಿಗೆ ಅಡಚಣೆ ಆಗದಂತೆ ಹಾಗೂ ಸರ್ಕಾರಿ ಜಮೀನಿನಲ್ಲಿರುವ ದೇವಸ್ಥಾನದ ಬಗ್ಗೆ ಉಚ್ಚ ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು ಆದೇಶವನ್ನು ಹೊರಡಿಸಿದ್ದಾರೆ.
ಸಿಗಂದೂರು ದೇವಾಲಯದಲ್ಲಿ ಗದ್ದಲ, ಗಲಾಟೆ; ಪೊಲೀಸರ ಪ್ರವೇಶ
ಆಡಳಿತ ವಹಿವಾಟಿನಲ್ಲಿರುವ ಆರೋಪ, ಪ್ರತ್ಯಾರೋಪ, ಲೋಪದೋಷಗಳ ತನಿಖೆ ಮಾಡಬೇಕಾದುದನ್ನು ಮನಗೊಂಡು ತಾತ್ಕಾಲಿಕವಾಗಿ ಸರ್ಕಾರದ ಮುಂದಿನ ಆದೇಶದವರೆಗೆ ಉಸ್ತುವಾರಿ ಸಮಿತಿ ರಚನೆಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ದೇವಾಲಯದಲ್ಲಿ ಗದ್ದಲ: ಇದೇ ಅಕ್ಟೋಬರ್ 16ರಂದು ದೇಗುಲದಲ್ಲಿ ಪ್ರಧಾನ ಅರ್ಚಕ ಶೇಷಗಿರಿ ಭಟ್ ಮತ್ತು ಭಕ್ತರ ನಡುವೆ ಗದ್ದಲ ನಡೆದಿತ್ತು. ಬಳಿಕ ಶಿವಮೊಗ್ಗ ಜಿಲ್ಲಾಧಿಕಾರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ನಂತರ ದೇವಾಲಯವನ್ನು ಮುಜರಾಯಿ ಇಲಾಖೆಗೆ ನೀಡುವ ಮಾತು ಕೇಳಿಬಂದಿತ್ತು. ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘ ಚೌಡೇಶ್ವರಿ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದೀಗ ತಾತ್ಕಾಲಿಕ ಉಸ್ತುವಾರಿ ಸಮಿತಿ ರಚನೆಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.