ಕೊರೊನಾ ಸೋಂಕಿತ ಸ್ವಾಮೀಜಿಗೆ ಆಯುರ್ವೇದ ಚಿಕಿತ್ಸೆ ಕೊಡಿಸಲು ಶಿವಮೊಗ್ಗ ಜಿಲ್ಲಾಡಳಿತ ಸಮ್ಮತಿ
ಶಿವಮೊಗ್ಗ, ಜೂನ್ 17: ತಮಗೆ ಆಯುರ್ವೇದ ಚಿಕಿತ್ಸೆ ಕೊಡಿಸಬೇಕೆಂದು ಈಚೆಗೆ ಮನವಿ ಮಾಡಿದ್ದ ಕೊರೊನಾ ಸೋಂಕಿತ ಸ್ವಾಮೀಜಿಯೊಬ್ಬರಿಗೆ ಸ್ಪಂದಿಸಿರುವ ಶಿವಮೊಗ್ಗ ಜಿಲ್ಲಾಡಳಿತ, ಆಯುಷ್ ಇಲಾಖೆ ಆರೋಗ್ಯ ಮಂತ್ರಾಲಯ ಸಲಹೆ ಪಡೆದು ಅಧಿಕೃತವಾಗಿ ಸ್ವಾಮೀಜಿಗೆ ಆಯುರ್ವೇದ ಚಿಕಿತ್ಸೆ ಕೊಡಿಸಲು ಮುಂದಾಗಿದೆ.
Recommended Video
ಈ ಕುರಿತು ಸ್ವಾಮೀಜಿ ಅವರು ಮಾಧ್ಯಮ ಪ್ರಕಟಣೆ ನೀಡಿದ್ದಾರೆ. "ನನ್ನ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿ, ನನಗೆ ಆಯುರ್ವೇದ ಚಿಕಿತ್ಸೆ ಪಡೆಯಲು ಅವಕಾಶ ನೀಡಿದೆ. ನಾಲ್ಕೈದು ದಿನಗಳ ಹಿಂದೆಯೇ ಆಯುರ್ವೇದ ಚಿಕಿತ್ಸೆ ಕೊಡಿಸುವಂತೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳಾದಿಯಾಗಿ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದ್ದೆ. ಈ ಮನವಿಯನ್ನು ಪುರಸ್ಕರಿಸಲು ಕಾನೂನು ತೊಡಕುಗಳ ಕಾರಣ ಜಿಲ್ಲಾಡಳಿತ ಹಿಂದೇಟು ಹಾಕಿತ್ತು. ಇದೀಗ ಆಯುರ್ವೇದ ಚಿಕಿತ್ಸೆ ಆರಂಭಿಸಲು ಅನುಮತಿ ನೀಡಿದೆ" ಎಂದು ತಿಳಿಸಿದ್ದಾರೆ.
ಭದ್ರಾವತಿಯ 1299 ಮಂದಿಗೆ ಕೊರೊನಾ ಪರೀಕ್ಷೆ: ಇಬ್ಬರಿಗೆ ಪಾಸಿಟಿವ್
ಜಿಲ್ಲಾ ಆಯುಷ್ ಅಧಿಕಾರಿ ಡಾ. ಎ.ಎಸ್.ಪುಷ್ಪ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಅವರ ಸೂಚನೆ ಮೇರೆಗೆ ಶಿವಮೊಗ್ಗದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಯುಷ್ ಇಲಾಖೆಯಲ್ಲಿ ಹಿರಿಯ ವೈದ್ಯಾಧಿಕಾರಿ ಡಾ.ಸಿ.ಎ.ಹಿರೇಮಠ ಅವರು ಇಂದು ತಪಾಸಣೆ ಮಾಡಿ ಆಯುರ್ವೇದ ಚಿಕಿತ್ಸೆ ನೀಡಲು ಆರಂಭಿಸಿದ್ದಾರೆ.
"ನಮ್ಮ ದೇಶದ ಸನಾತನ ಪರಂಪರೆಯಲ್ಲಿ ಬಂದಿರುವ, ಮಹರ್ಷಿ ಪ್ರಣೀತ ಆಯುರ್ವೇದ ಚಿಕಿತ್ಸೆಗೆ ಅನುವು ಮಾಡಿಕೊಟ್ಟಿದೆ. ರಾಜ್ಯದಲ್ಲಿ ಇದೇ ಮೊದಲು ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆಗೆ ಮುಂದಾಗಿದ್ದು ಸಂತಸದ ವಿಷಯವಾಗಿದೆ" ಎಂದು ಸ್ವಾಮೀಜಿ ತಿಳಿಸಿದ್ದಾರೆ.