ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲೇ ರಾಷ್ಟ್ರಧ್ವಜಕ್ಕೆ ಅಗೌರವ
ಶಿವಮೊಗ್ಗ, ಅಕ್ಟೋಬರ್ 28: ಇತ್ತೀಚಿನ ದಿನಗಳಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಅಗೌರವ ತೋರುವ ಸಂಬಂಧವಾಗಿ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಆದರೆ ಈ ಕುರಿತು ಜಾಗೃತಿ ಮೂಡಿಸಬೇಕಾದ ಸರ್ಕಾರಿ ಅಧಿಕಾರಿಗಳೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸರ್ಕಾರಿ ಆದೇಶಗಳು ಕೇವಲ ದಾಖಲೆಗಳಾಗಿಯೇ ಉಳಿದಿವೆಯೇ ಎಂಬ ಪ್ರಶ್ನೆಯೂ ಇದರಿಂದ ಮೂಡುತ್ತಿದೆ.
ಸರ್ಕಾರಿ ಕಚೇರಿಗಳಲ್ಲೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ಉದಾಹರಣೆ ದೊರೆತಿರುವುದು ರಾಜ್ಯದ ಮುಖ್ಯಮಂತ್ರಿಗಳ ಸ್ವಕ್ಷೇತ್ರ ಶಿಕಾರಿಪುರ ತಾಲೂಕಿನಲ್ಲಿ. ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕಚೇರಿಯ ಕಾರ್ಯಾಲಯದ ಎದುರು ಕೆಲವು ಭಾನುವಾರಗಳಂದು ರಾಷ್ಟ್ರದ್ವಜ ಕಾಣುವುದೇ ಇಲ್ಲ.
ಗಡಿನಾಡಲ್ಲಿ ಕನ್ನಡ ಧ್ವಜ ಮೆರೆಸಿದ "ಅಭಿಮಾನದ ಗಣಪ"
ನಿಯಮದಂತೆ, ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಸಹಾಯಕ ಧ್ವಜವನ್ನು ಬೆಳಗ್ಗೆ ಏರಿಸಬೇಕು ಮತ್ತು ಸಂಜೆ ಇಳಿಸಬೇಕು. ಆದರೆ ಈ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ರಜೆ ದಿನಗಳಲ್ಲಿ ಧ್ವಜವನ್ನು ಇಳಿಸದೇ ಬಿಡುವುದು ನಡೆಯುತ್ತಿದೆ. ಜೊತೆಗೆ ಕೆಲವು ಭಾನುವಾರಗಳಂದು ಧ್ವಜವನ್ನು ಹಾರಿಸುವುದೇ ಇಲ್ಲ. ಹಳೆಯ ಮತ್ತು ಹರಿದಿರುವ, ಬಣ್ಣಗಳು ಮಾಸಿದ ರೀತಿಯಲ್ಲಿರುವ ದ್ವಜವನ್ನು ಹಾರಿಸುತ್ತಿರುವುದೂ ನಡೆಯುತ್ತಿದೆ. ಪ್ರತಿದಿನ ಸಂಜೆ ಧ್ವಜ ಇಳಿಸುವಾಗ ಸಹಾಯಕ್ಕೆ ಜನರಿಲ್ಲದೇ ಗ್ರಾಮ ಸಹಾಯಕರು ಒಬ್ಬರೇ ಇಳಿಸುವುದರಿಂದ ಅನೇಕ ಬಾರಿ ಧ್ವಜ ನೆಲಕ್ಕೆ ಸ್ಪರ್ಶಿಸುತ್ತದೆ.
ಸರ್ಕಾರದಿಂದ ಧ್ವಜ ಹಾರಿಸಲು ಮತ್ತು ಇಳಿಸಲು ದಿನಕ್ಕೆ 30 ರೂಗಳಂತೆ, ತಿಂಗಳಿಗೆ 900 ರೂಗಳನ್ನು ನೀಡಲಾಗುತ್ತದೆ. ಆದರೆ ಪಿಡಿಓ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಈ ಹಣವನ್ನು ಅವರಿಗೆ ನೀಡುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ.
ಸರ್ಕಾರಿ ಆದೇಶದ ಪ್ರಕಾರ "1950 ರಾಷ್ಟ್ರಧ್ವಜ ಪ್ರದರ್ಶನ ಮತ್ತು ಅಭಿದಾನ ಕಾಯಿದೆ" ಹಾಗೂ "ರಾಷ್ಟ್ರ ಘನತೆಯೆಡೆಗಿನ ಅಪಮಾನ ತಡೆ ಕಾಯಿದೆ 1971", "ಭಾರತ ಧ್ವಜ ಸಂಹಿತೆ 2002" ಧ್ವಜದ ಕುರಿತಂತೆ ಎಲ್ಲಾ ಆಚರಣೆ, ಸಂಪ್ರದಾಯ ಮತ್ತು ಸೂಚನೆಗಳನ್ನು ಒಳಗೊಂಡಿದೆ. ಇವುಗಳ ಮಾರ್ಗಸೂಚಿಯಂತೆ, ಶಿಷ್ಟಾಚಾರ ಹಾಗೂ ನಿಯಮಗಳ ಅನ್ವಯ ರಾಷ್ಟ್ರ ಧ್ವಜವನ್ನು ಪ್ರತಿನಿತ್ಯ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕಚೇರಿಗಳ ಆವರಣದ ಧ್ವಜ ಸ್ತಂಭದ ಮೇಲೆ ತಪ್ಪದೇ ಪ್ರದರ್ಶಿಸಲು ಸಂಬಂಧಿಸಿದ ಕಚೇರಿಗಳ ಮುಖ್ಯಸ್ಥರು ಕ್ರಮ ವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ ನಮ್ಮ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಬಹುಶಃ ಈ ನಿಯಮಗಳೇ ತಿಳಿದಿಲ್ಲ. ಇವೆಲ್ಲ ಕೇವಲ ಪುಸ್ತಕಗಳಿಗೆ ಸೀಮಿತವಾಗಿದೆ ಎನ್ನಿಸುತ್ತಿದೆ.
ವೋಟು ಮಾಡಿ ಪೆರುಗ್ವೆ ಧ್ವಜ ಹಾಕಿದ ವಾದ್ರಾಗೆ ಪಂಚೋ ಪಂಚು!
ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮ ಪಂಚಾಯತ್ ಕೇವಲ ಒಂದು ಉದಾಹರಣೆ. ಇದೇ ರೀತಿ ಎಷ್ಟೋ ಕಡೆ ನಡೆಯುತ್ತಿರಬಹುದು. ಧ್ವಜದ ಬಳಕೆಯಲ್ಲಿ ಸರ್ಕಾರದ ಆದೇಶಗಳು ಕಾಗದದ ಮೇಲೆ ಮಾತ್ರ ಕಾಣಿಸಿಕೊಳ್ಳುತ್ತವೆ. ಅದರ ಸೂಕ್ತ ನಿರ್ವಹಣೆ ಕುರಿತು ಗಂಭೀರ ಆಲೋಚನೆ ಮಾಡಿಲ್ಲ. ಅದರ ಬಗ್ಗೆ ಗಮನಿಸುವವರೂ ಇಲ್ಲವಾಗಿದ್ದಾರೆ.