ಪ್ರತ್ಯೇಕ ಹೊಸನಗರ ವಿಧಾನಸಭೆ ಕ್ಷೇತ್ರ ರಚನೆ ಹೋರಾಟಕ್ಕೆ ಮೊಳಗಿದ ಕಹಳೆ
ಶಿವಮೊಗ್ಗ, ಮಾರ್ಚ್ 16: ಹೊಸನಗರ ವಿಧಾನಸಭೆ ಕ್ಷೇತ್ರ ಪುನರ್ ಸ್ಥಾಪಿಸುವ ಹೋರಾಟಕ್ಕೆ ಕಹಳೆ ಮೊಳಗಿದ್ದು, ಧರ್ಮ ಗುರುಗಳು, ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಕ್ಷೇತ್ರ ಪುನರ್ ವಿಂಗಡಣೆ ಕಾರ್ಯವೇ ಅವೈಜ್ಞಾನಿಕವಾಗಿದೆ. ರಾಜ್ಯಕ್ಕೆ ಹಲವು ಯೋಜನೆಗಳು ಕೊಟ್ಟ ತಾಲ್ಲೂಕನ್ನು ಪುನರ್ ವಿಂಗಡಣೆ ವೇಳೆ ಕೈಬಿಟ್ಟಿರುವುದು ಸರಿಯಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬಹುಮಾನದ ಆಸೆ ಹುಟ್ಟಿಸಿ ಶಿವಮೊಗ್ಗದ ನರ್ಸ್ಗೆ 3 ಲಕ್ಷ ರೂ. ವಂಚನೆ
ಯಾರೆಲ್ಲ ಏನೇನು ಹೇಳಿದರು?
ಸರ್ಕಾರದ ಹಲವು ಯೋಜನೆಗಳಿಗೆ ಆಸರೆಯಾದ ತಾಲ್ಲೂಕು, ಕ್ಷೇತ್ರದ ಮಾನ್ಯತೆ ಕಳೆದುಕೊಂಡಿರುವುದು ದುರಂತ. ಜನಸಂಖ್ಯಾ ಆಧಾರದಲ್ಲಿ ವಿಂಗಡಣೆ ಕೈಬಿಡಬೇಕು ಎಂದು ನಿಟ್ಟೂರು ನಾರಾಯಣಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕ್ಷೇತ್ರವನ್ನು ಮತ್ತೆ ಪಡೆಯಬೇಕಿದೆ. ಈ ಹೋರಾಟದಲ್ಲಿ ಯುವ ಪೀಳಿಗೆ ಮುಂಚೂಣಿಗೆ ಬರಬೇಕು. ಹೋರಾಟದ ಮೂಲಕ ನ್ಯಾಯ ಪಡೆಯಬೇಕು ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಈಶಾನ್ಯ ಭಾರತದಲ್ಲಿ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಕ್ಷೇತ್ರ ಪುನರ್ ವಿಂಗಡಣೆ ಆಗಿದೆ. ಅದೇ ಮಾದರಿಯಲ್ಲಿ ಮಲೆನಾಡಿನಲ್ಲೂ ಭೌಗೋಳಿಕ ಆಧಾರದ ಕ್ಷೇತ್ರದ ಪುನರ್ ವಿಂಗಡಣೆ ಮಾಡಬೇಕು ಎಂದು ಮಾಜಿ ಶಾಸಕ ಸ್ವಾಮಿರಾವ್ ಆಗ್ರಹಿಸಿದರು.
ಇದೇ ವೇಳೆ ಹೊಸನಗರ ಕ್ಷೇತ್ರವನ್ನು ಪುನರ್ ಸ್ಥಾಪಿಸಬೇಕು ಎಂದು ಆಗ್ರಹಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಯಿತು. ಹೋರಾಟ ಮತ್ತಷ್ಟು ತೀವ್ರಗೊಳಿಸಬೇಕು ಎಂದು ಮಾಜಿ ಶಾಸಕ ಸ್ವಾಮಿರಾವ್ ಅವರು ಕಹಳೆ ಮೊಳಗಿಸಿದರು.
ಸಾಮಾಜಿಕ ಹೋರಾಟಗಾರ ರಿಪ್ಪನ್ ಪೇಟೆಯ ಟಿ.ಆರ್.ಕೃಷ್ಣಪ್ಪ ಅವರು, ತಾನು ಆರ್ಎಸ್ಎಸ್ ಮಾಜಿ ಕಾರ್ಯಕರ್ತ. ಸಂಘದ ಸಮವಸ್ತ್ರ ಧರಿಸಿ ಸೈಕಲ್ ಮೂಲಕ ದೆಹಲಿಗೆ ತೆರಳುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೊಸನಗರ ಕ್ಷೇತ್ರ ಪುನರ್ ಸ್ಥಾಪಿಸುವಂತೆ ಮನವಿ ಸಲ್ಲಿಸುತ್ತೇನೆ ಎಂದರು.
ಮುಸ್ಲಿಂ ಧರ್ಮಗುರುಗಳಾದ ಮೌಲಾನಾ ಮಾಸಂ ಅಲಿ ಖಾಸಿಮಿ, ಹಂಜಾ ಮದನಿ, ಹಫೀಜ್ ಅಬ್ದುಲ್ಲಾ, ಹಫೀಜ್ ಶಾದಾಬ್ ರಾಹಿ ಮಹಮ್ಮದಿ, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಲೂಕು ಪಂಚಾಯಿತಿ ಅಧ್ಯಕ್ಷ ವೀರೇಶ್ ಆಲುವಳ್ಳಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ.ಜಯರಾಂ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.