ಸಿಗಂದೂರು ದೇವಸ್ಥಾನಕ್ಕೆ ಆಡಳಿತಾಧಿಕಾರಿಗಳ ನೇಮಕ ಮಾಡಲು ಆಗ್ರಹ
ಶಿವಮೊಗ್ಗ, ಅಕ್ಟೋಬರ್ 17: ಸಿಗಂದೂರು ಚೌಡೇಶ್ವರಿ ದೇಗುಲದಲ್ಲಿ ನಿನ್ನೆ ನಡೆದ ಗಲಭೆ ಖಂಡನೀಯ. ಸರ್ಕಾರ ದೇವಸ್ಥಾನಕ್ಕೆ ಶೀಘ್ರದಲ್ಲಿಯೇ ಆಡಳಿತಾಧಿಕಾರಿಗಳನ್ನು ನೇಮಿಸಬೇಕು ಎಂದು ದೇವಸ್ಥಾನದ ಮೂಲವಾರಸುದಾರ ಎಂದು ಹೇಳಿಕೊಂಡಿರುವ ಮಂಜಪ್ಪ ಅವರು ಆಗ್ರಹಿಸಿದ್ದಾರೆ.
ನವರಾತ್ರಿಗೂ ಮೊದಲು ದೇವಸ್ಥಾನದಲ್ಲಿ ಚಂಡಿಕಾ ಹೋಮ ನಡೆಸಬೇಕು, ರಾಮಪ್ಪ ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ದೂರಿ ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್ ನಿನ್ನೆ ದೇವಾಲಯದಲ್ಲಿ ಮೌನಾಚರಣೆಗೆ ಕುಳಿತಿದ್ದರು. ಈ ಸಮಯದಲ್ಲಿ ಶೇಷಗಿರಿ ಭಟ್ ಹಾಗೂ ಭಕ್ತರ ನಡುವೆ ಗದ್ದಲ ನಡೆದಿದ್ದು, ಕಚೇರಿಯ ಪಿಠೋಪಕರಣಗಳಿಗೆ ಹಾನಿ ಮಾಡಲಾಗಿತ್ತು. ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.
ಸಿಗಂದೂರು ದೇವಾಲಯದಲ್ಲಿ ಗದ್ದಲ, ಗಲಾಟೆ; ಪೊಲೀಸರ ಪ್ರವೇಶ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜಪ್ಪ, "ನಾನು ಈ ದೇವಸ್ಥಾನಕ್ಕೆ ಮೂಲ ವಾರಸುದಾರ. 1985 ರಿಂದ 1994ರವರೆಗೆ ದೇವಸ್ಥಾನದ ಜೀರ್ಣೋದ್ಧಾರದ ಸಮಿತಿಯ ವಾರಸುದಾರನಾಗಿದ್ದೆ. ದೇವಸ್ಥಾನಕ್ಕೆ ಈಗಿನ ಸ್ವಯಂಘೋಷಿತ ಧರ್ಮದರ್ಶಿಗಳಾದ ರಾಮಪ್ಪ ಸಮಿತಿಯಲ್ಲಿದ್ದಾರೆ. ಆದರೆ ಇವರ ಕುಟುಂಬ ದೇವತೆ ಸಿಗಂದೂರು ಚೌಡೇಶ್ವರಿ ಅಲ್ಲ. ಇದು ನಮ್ಮ ಕುಟುಂಬದ ದೇವತೆ" ಎಂದು ಹೇಳಿದ್ದಾರೆ.
ನಿನ್ನೆ ರಾಮಪ್ಪ ಹಾಗೂ ಶೇಷಗಿರಿ ಭಟ್ಟರ ನಡುವೆ ನಡೆದ ಘಟನೆ ಶಿವಮೊಗ್ಗ ಜಿಲ್ಲೆಗೆ ನಾಚಿಕೆಗೇಡಿನ ವಿಷಯ. ಅವರ ನಡುವಿನ ಜಗಳ ಹೊಸದೇನೂ ಅಲ್ಲ. ಈ ಜಗಳ ಹಣಕ್ಕಾಗಿ ನಡೆಯುತ್ತಿದೆ ವಿನಃ ಯಾವುದೇ ಉದ್ಧಾರಕ್ಕಾಗಿ ಅಲ್ಲ ಎಂದರು.
ಸ್ವಯಂಘೋಷಿತ ಧರ್ಮದರ್ಶಿ ಎಂದು ಹೇಳಿಕೊಳ್ಳುವ ರಾಮಪ್ಪ, ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕರು ಬಿಟ್ಟರೆ ಇವರಿಗೆ ಯಾವುದೇ ಹಕ್ಕಿಲ್ಲ. ಇದನ್ನು ಮುಜರಾಯಿ ಇಲಾಖೆಗೆ ಸೇರಿಸಬಾರದು. ಬದಲಾಗಿ ಆಡಳಿತ ಅಧಿಕಾರಿಗಳನ್ನು ನೇಮಿಸಬೇಕು. ಸಿಗಂದೂರಿನಲ್ಲಿ ನಡೆದಿರುವ ಭ್ರಷ್ಟಾಚಾರಗಳನ್ನು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.